ಮೈಮುಲ್ ನೌಕರರ ನೇಮಕಾತಿಯಲ್ಲಿ ಭಾರೀ ಅವ್ಯವಹಾರ; ಸಾ.ರಾ. ಮಹೇಶ್ ಆರೋಪ
ಮೈಸೂರು, ಮೇ 12: ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಶಾಸಕ ಸಾ.ರಾ. ಮಹೇಶ್ ಗಂಭೀರವಾಗಿ ಆರೋಪಿಸಿದ್ದಾರೆ.
Recommended Video
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಸಭೆಯಲ್ಲಿ ಅಕ್ರಮವಾಗಿ ಅನುಮತಿ ನೀಡಿ ಹೆಚ್ಚುವರಿ ಹುದ್ದೆ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಸದ್ಯ ನಡೆಯುತ್ತಿರುವ ಎಲ್ಲಾ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು" ಎಂದು ಆಗ್ರಹಿಸಿದ್ದಾರೆ.
ಪ್ರಸ್ತುತ ಒಟ್ಟು 168 ಹುದ್ದೆಗಳ ನೇಮಕಾತಿಗೆ ಮಾತ್ರ ಆದೇಶ ಇದ್ದರೂ ಹೆಚ್ಚುವರಿಯಾಗಿ 25 ಹುದ್ದೆಗಳನ್ನು ಇವರು ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. 18 ಸಾವಿರ ಜನ ಪರೀಕ್ಷೆ ಎದುರಿಸಿದ್ದರು. ಈ ಪೈಕಿ 168 ಹಾಗೂ 25 ಮಂದಿ ಮಾತ್ರ ಪಾಸಾಗಿದ್ದಾರೆ. ಈ ಪರೀಕ್ಷೆ ನಡೆಸಿದ್ದ ಏಜೆನ್ಸಿಯ ಮೇಲೂ ಆರೋಪ ಇದೆ. ಇವೆಲ್ಲದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಸದ್ಯ ನಡೆಯುತ್ತಿರುವ ಎಲ್ಲಾ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ ಎಂದ ಅವರು, ಮೈಸೂರು ಜಿಲ್ಲಾ ಹಾಲು ಒಕ್ಕೂಟ ರೈತರಿಂದ ಹಾಲು ಖರೀದಿ ಮಾಡುವ ವಿಚಾರದಲ್ಲೂ ರೈತರ ಬಾಳಿನಲ್ಲಿ ಚೆಲ್ಲಾಟವಾಡುತ್ತಿದೆ. ರೈತರಿಂದ ಖರೀದಿ ಮಾಡುತ್ತಿರುವ ಹಾಲಿನ ದರ ಕಡಿತ ಮಾಡಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಲಕ್ಷಾಂತರ ರೈತರಿಗೆ ನಷ್ಟವಾಗಲಿದೆ ಎಂದರು. ಡೈರಿ ಆರ್ಥಿಕವಾಗಿ ಲಾಭದಲ್ಲಿ ನಡೆಯುತ್ತಿರುವುದರಿಂದಲೇ ಮೆಗಾ ಡೈರಿ ಆರಂಭವಾಗಿದೆ. ಹಾಲಿನ ದರವನ್ನು 4.50 ಪೈಸೆ ಕಡಿಮೆ ಮಾಡಿ ರೈತರಿಗೆ ನಷ್ಟ ಮಾಡುವುದು ಸರಿಯಲ್ಲ ಎಂದರು.
ಇನ್ನು, ಹುಣಸೂರು ಜಿಲ್ಲೆ ಮಾಡಲು ನನ್ನ ಅಭಿಪ್ರಾಯ ನಾನು ಹೇಳಿರುವುದಕ್ಕೆ ಅವರ್ಯಾರು ಎಂದಿರುವ ವಿಶ್ವನಾಥ್ ಗೆ, ಹುಣಸೂರು ಜಿಲ್ಲೆ ಮಾಡಲು ನೀವು ಯಾರು ಎಂದು ಸಾ.ರಾ ಮಹೇಶ್ ಪ್ರಶ್ನಿಸಿದರು.












Click it and Unblock the Notifications