ಮೈಸೂರಿನ ಸರಗೂರಿನಲ್ಲಿ ಮೊದಲ ಸೈನಿಕ ಶಾಲೆಗೆ ಸೆ.3ರಂದು ಚಾಲನೆ
ಮೈಸೂರು, ಸಪ್ಟೆಂಬರ್ 02: ಹಳೆಯ ಮೈಸೂರು ಪ್ರದೇಶವು ಶೀಘ್ರದಲ್ಲೇ ತನ್ನ ಮೊದಲ ಮತ್ತು ರಾಜ್ಯದಲ್ಲಿ ನಾಲ್ಕನೇ ಸೈನಿಕ ಶಾಲೆ ಪಡೆಯಲಿದೆ. ಸರಗೂರಿನಲ್ಲಿರುವ ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್ನಲ್ಲಿ ಈಗ ಸೈನಿಕ ಶಾಲೆ ಆರಂಭಿಸಲಾಗುತ್ತದೆ.
ಎನ್ಜಿಒ ನಡೆಸುತ್ತಿರುವ ಕರ್ನಾಟಕದ ಏಕೈಕ ಸೈನಿಕ ಶಾಲೆ ಇದಾಗಲಿದೆ. ದಕ್ಷಿಣ ಕರ್ನಾಟಕದ ಎರಡನೇ ಸೈನಿಕ ಶಾಲೆ ಇದಾಗಿದೆ. ಮೈಸೂರು ಜಿಲ್ಲೆಯ ಸರಗೂರಿನಲ್ಲಿರುವ ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್ (ವಿಎಸ್ಒಇ) ಅನ್ನು ಈಗ ಸೈನಿಕ ಶಾಲೆ ಎಂದು ಗುರುತಿಸಲಾಗುವುದು ಮತ್ತು ಅದನ್ನು ವಿಎಸ್ಒಇ-ಸೈನಿಕ್ ಸ್ಕೂಲ್ ಎಂದು ಕರೆಯಲಾಗುತ್ತದೆ.
ಕೇಂದ್ರ ರಕ್ಷಣಾ ಸಚಿವಾಲಯದ ಸೈನಿಕ ಸ್ಕೂಲ್ ಸೊಸೈಟಿ (ಎಸ್ಎಸ್ಎಸ್)ಯಿಂದ ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯು ಹೊಸ ಸೈನಿಕ ಶಾಲೆಯನ್ನು ಅನುಮೋದನೆಯನ್ನು ಪಡೆದಿದೆ. ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್, ಸರಗೂರು ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ (ಎಸ್ವಿವೈಎಂ) ನ ಘಟಕವಾಗಿದ್ದು, ಇದನ್ನು ಗ್ರಾಮೀಣ ಮತ್ತು ಬುಡಕಟ್ಟು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು 2002ರಲ್ಲಿ ಪ್ರಾರಂಭಿಸಲಾಯಿತು.

ಇದು ಎಚ್ ಡಿ ಕೋಟೆ ತಾಲೂಕಿನ ಸರಗೂರಿನಲ್ಲಿ ಮೊದಲ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಶಾಲೆಯಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಮುಖ್ಯಸ್ಥ ಎಸ್ ಪ್ರವೀಣ್ ಕುಮಾರ್ ಮಾತನಾಡಿ, ಈ ಶಾಲೆಯಲ್ಲಿ 6ನೇ ತರಗತಿಗೆ 60 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ ಎಂದರು.
ಅವುಗಳಲ್ಲಿ 24 ಸೀಟುಗಳನ್ನು ಆಲ್ ಇಂಡಿಯಾ ಸೆಕೆಂಡರಿ ಸ್ಕೂಲ್ ಎಕ್ಸಾಮಿನೇಷನ್ (ಎಐಎಸ್ಎಸ್ಇ) 2022 (ಅಖಿಲ ಭಾರತ ಕೋಟಾ) ಮೂಲಕ ಹಂಚಲಾಗುತ್ತದೆ ಮತ್ತು ಉಳಿದ 60% (36) ಸೀಟುಗಳು 6 ನೇ ತರಗತಿಯಲ್ಲಿ ಲಿಖಿತ ಪರೀಕ್ಷೆ ನಡೆಸಿ ವಿಎಸ್ಒಇಯ ಅಸ್ತಿತ್ವದಲ್ಲಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ನಿರ್ದೇಶಕ ಏರ್ ಕಮೋಡೋರ್ (ನಿವೃತ್ತ) ಆರ್ ಎನ್ ಜಯಸಿಂಹ ಮಾತನಾಡಿ, "ವಿಎಸ್ಒಇ-ಸೈನಿಕ ಶಾಲೆಯ ಮುಖ್ಯ ಉದ್ದೇಶವು ವಿದ್ಯಾರ್ಥಿಗಳನ್ನು ಸಶಸ್ತ್ರ ಪಡೆಗಳಿಗೆ ಸೇರಲು ಪ್ರೇರೇಪಿಸುವುದು ಮತ್ತು ನಾಗರಿಕರಿಗೆ ಸ್ಫೂರ್ತಿಯಾಗುವುದು. ಪ್ರಾಥಮಿಕ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ವಿಎಸ್ಒಇ-ಸೈನಿಕ ಶಾಲೆಯನ್ನು ಸೆಪ್ಟೆಂಬರ್ 3 ರಂದು ಬೆಳಿಗ್ಗೆ 10.30 ಕ್ಕೆ ಸರಗೂರಿನಲ್ಲಿ ಉದ್ಘಾಟಿಸಲಿದ್ದಾರೆ," ಎಂದರು.
ಈ ಸಂದರ್ಭದಲ್ಲಿ ಹೈದರಾಬಾದ್ನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಬೋಧಮಯಾನಂದ, ಜಿಲ್ಲಾಧಿಕಾರಿ ಬಗಾದಿ ಗೌತಮ್, ಸೈನಿಕ ಶಾಲೆ ಕೊಡಗು ಪ್ರಾಂಶುಪಾಲ ಕರ್ನಲ್ ಜಿ ಕಣ್ಣನ್ ಉಪಸ್ಥಿತರಿರಲಿದ್ದಾರೆ. ಸೈನಿಕ ಶಾಲೆಗಳು ಪ್ರಸ್ತುತ ಬೆಳಗಾವಿ, ವಿಜಯಪುರ ಮತ್ತು ಕೊಡಗು ಜಿಲ್ಲೆಗಳಲ್ಲಿವೆ.












Click it and Unblock the Notifications