ಮೈಸೂರಿನಲ್ಲಿ ಸಾಧನ ಸಮಾವೇಶ: ಬಿಎಸ್ವೈ, ಗೌಡರಿಗೂ ಆಹ್ವಾನ
ಮೈಸೂರು, ಜೂನ್ 3: ರಾಜ್ಯ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿಂದು ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಕೊಟ್ಟಮಾತು - ದಿಟ್ಟ ಸಾಧನೆ, ಸೌಲಭ್ಯ ವಿತರಣಾ ಸಮಾವೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಮೈಸೂರು ವಿಭಾಗದ ಎಂಟು ಜಿಲ್ಲೆಗಳಾದ ಮೈಸೂರು, ಮಂಡ್ಯ, ಹಾಸನ, ಚಿಕ್ಕಮಂಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ ಜಿಲ್ಲೆಗಳ ಫಲಾನುಭವಿಗಳು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.[ಜೂನ್ 3 ರಂದು 'ಕೊಟ್ಟ ಮಾತು ದಿಟ್ಟ ಸಾಧನೆ' ಸಮಾವೇಶ]

ಮಹಾರಾಜ ಕಾಲೇಜು ಮೈದಾನದ ಸೇರಿದಂತೆ ಆಸುಪಾಸಿನ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿದ್ದು, ಭದ್ರತೆಗಾಗಿ 3 ಎಸ್ಪಿ, 6 ಡಿಸಿಪಿ ದರ್ಜೆ ಅಧಿಕಾರಿಗಳು, 25 ಇನ್ಸ್ಪೆಕ್ಟರ್, 40 ಸಬ್ ಇನ್ಸ್ಪೆಕ್ಟರ್, 60 ಎಎಸ್ , 500 ಹೆಡ್ ಕಾನ್ಸ್ಟೇಬಲ್, ಪೇದೆಗಳನ್ನು ನೇಮಿಸಲಾಗಿದೆ.
ಸಮಾವೇಶಕ್ಕೆ ಆಗಮಿಸುವವರಿಗೆ ನೆರವಾಗಲಿ ಎಂದು ಜಿಲ್ಲಾಡಳಿತ ಕೆ.ಎಸ್.ಆರ್.ಟಿ.ಸಿ. ಬಸ್ ವ್ಯವಸ್ಥೆ ಮಾಡಿದೆ.[ಯಡಿಯೂರಪ್ಪ ನನ್ನ ಮೂಗು ಹಿಡಿಯೋ ಬದಲು ಮೋದಿಯ ಮೂಗು ಹಿಡಿಯಲಿ: ಸಿದ್ದು]

ವಿಶೇಷ ಆಹ್ವಾನಿತರು
ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರಿಗೆ ಸಮಾವೇಶಕ್ಕೆ ರಾಜ್ಯ ಸರ್ಕಾರ ವಿಶೇಷ ಆಹ್ವಾನ ನೀಡಿದೆ.

ವಿದ್ಯಾರ್ಥಿಗಳಿಗೆ ಕಿರಿಕಿರಿ
ಮಹಾರಾಜ ಕಾಲೇಜು ಮೈದಾನದ ಪಕ್ಕದಲ್ಲೇ ನಡೆಯುತ್ತಿರುವ ದೈಹಿಕ ಶಿಕ್ಷಣ ಇಲಾಖೆ ಪರೀಕ್ಷೆ ಸಮಾವೇಶದಿಂದ ಅಡ್ಡಿಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೈಹಿಕ ಶಿಕ್ಷಣ ಇಲಾಖೆಯ ಎಂಪಿಎಡ್, ಬಿಪಿಎಡ್ ಸೆಮಿಸ್ಟರ್ ಪರೀಕ್ಷೆಗಳು ಇಂದಿನಿಂದ ನಡೆಯುತ್ತಿದ್ದು, ಸಮಾವೇಶದ ಶಬ್ದ ತಡೆಯಲಾರದೆ ಹತ್ತು ನಿಮಿಷ ತಡವಾಗಿ ಆರಂಭವಾಯಿತು.[ಯಡಿಯೂರಪ್ಪ ಎರಡು ನಾಲಿಗೆ ಮನುಷ್ಯ: ಸಿದ್ಧರಾಮಯ್ಯ]
ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ವಿದ್ಯಾರ್ಥಿಗಳಿಗೆ ಪೊಲೀಸ್ ಸಿಬ್ಬಂದಿ ಅಡ್ಡಿಪಡಿಸಿದ ಘಟನೆಯೂ ನಡೆದಿದೆ.
ನಾವು ಇಪ್ಪತ್ತು ದಿನದ ಮೊದಲೇ ಪರೀಕ್ಷೆ ನಡೆಸಲು ಅನುಮತಿ ಪಡೆದಿದ್ದೇವೆ. ಆದರೆ ಇವತ್ತು ಸರ್ಕಾರದ ಸಮಾವೇಶದ ಹಿನ್ನಲೆಯಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಸಿ.ವೆಂಕಟೇಶ್ ಹೇಳಿದರು.












Click it and Unblock the Notifications