ವರುಣಾದಲ್ಲಿ ಜೆಡಿಎಸ್- ಕಾಂಗ್ರೆಸ್ ಒಳ ಒಪ್ಪಂದ ಸುದ್ದಿಗೆ ಕಾರಣ ಏನು?
ಮೈಸೂರು, ಮಾರ್ಚ್ 22 : ಮೈಸೂರು ಜಿಲ್ಲೆಯಲ್ಲಿರುವ ವಿಧಾನಸಭಾ ಕ್ಷೇತ್ರಗಳ ಪೈಕಿ ಕುತೂಹಲ ಕೆರಳಿಸಿರುವುದರಲ್ಲಿ ವರುಣಾ ವಿಧಾನಸಭಾ ಕ್ಷೇತ್ರವೂ ಒಂದಾಗಿದೆ. ಈ ಕ್ಷೇತ್ರದತ್ತ ಜನ ಕುತೂಹಲದಿಂದ ನೋಡಲು ಪ್ರಮುಖವಾಗಿ ಎರಡು ಕಾರಣಗಳಿವೆ.
ಮೊದಲನೆಯದು, ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಾ ಬಂದ ಕ್ಷೇತ್ರ. ಅಷ್ಟೇ ಅಲ್ಲ, ಇಲ್ಲಿಂದಲೇ ಗೆದ್ದು ಮುಖ್ಯಮಂತ್ರಿಯಾದರು. ಎರಡನೆಯದು ಇದೀಗ ಈ ಕ್ಷೇತ್ರಕ್ಕೆ ಮಗ ಯತೀಂದ್ರ ಸಿದ್ದರಾಮಯ್ಯ ಅಭ್ಯರ್ಥಿ ಎನ್ನುವುದಾಗಿದೆ.
ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್
ಯತೀಂದ್ರ ಸಿದ್ದರಾಮಯ್ಯ ಮೊದಲಿನಿಂದಲೂ ರಾಜಕೀಯದಿಂದ ದೂರ ಇದ್ದವರು. ಅಣ್ಣ ರಾಕೇಶ್ ಸಿದ್ದರಾಮಯ್ಯ ನಿಧನದ ಬಳಿಕ ರಾಜಕೀಯಕ್ಕೆ ಬಂದಿದ್ದು, ಕಳೆದ ಒಂದೂವರೆ ವರ್ಷದಿಂದ ವರುಣಾ ಕ್ಷೇತ್ರದಲ್ಲಿ ಅಡ್ಡಾಡುತ್ತಾ ಜನರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಅಷ್ಟೇ ಅಲ್ಲ, ಅವರೇ ಕ್ಷೇತ್ರದ ಅಭ್ಯರ್ಥಿ ಎಂದು ಈ ಹಿಂದೆಯೇ ಘೋಷಣೆ ಮಾಡಿಯಾಗಿದೆ. ಹೀಗಾಗಿ ಮತದಾರರಿಗೂ ಯತೀಂದ್ರ ಬಗ್ಗೆ ಗೊತ್ತಾಗಿದೆ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಗ್ಗೆ ಹೆಚ್ಚಿನ ಅಭಿಮಾನವಿದೆ. ಜತೆಗೆ ಮತವೂ ಅವರ ಪರವಾಗಿಯೇ ಇದೆ. ಆದ್ದರಿಂದ ಮತಬ್ಯಾಂಕ್ ಗಟ್ಟಿಯಾಗಿದೆ. ಈ ಕಾರಣಕ್ಕೆ ಯತೀಂದ್ರ ಅವರೇ ಗೆಲ್ಲುತ್ತಾರೆ ಎಂಬ ಅಭಿಪ್ರಾಯಗಳನ್ನು ಕ್ಷೇತ್ರದ ಜನ ಈಗಲೇ ಹೇಳುತ್ತಿದ್ದಾರೆ.

ಕಾ.ಪು.ಸಿದ್ದಲಿಂಗಸ್ವಾಮಿ ಅಥವಾ ಶಂಕರ ಬಿದರಿ ಬಿಜೆಪಿಯಿಂದ
ಹಾಗಂತ ಈ ಕ್ಷೇತ್ರದಲ್ಲಿ ಯತೀಂದ್ರ ಅವರಿಗೆ ಪ್ರತಿಸ್ಪರ್ಧಿಗಳು ಇಲ್ಲ ಎಂದಲ್ಲ. ಪ್ರಬಲ ಪೈಪೋಟಿಯನ್ನು ಬಿಜೆಪಿ ನೀಡಬಹುದು. ಈ ಹಿಂದೆ ಸಿದ್ದರಾಮಯ್ಯ ಅವರಿಗೆ ಪ್ರತಿಸ್ಪರ್ಧಿಯಾಗಿದ್ದ ಕಾ.ಪು.ಸಿದ್ದಲಿಂಗಸ್ವಾಮಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ ಅವರಿಗೆ ಟಿಕೆಟ್ ನೀಡುತ್ತಾರಾ ಅಥವಾ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರಿಗೆ ಟಿಕೆಟ್ ನೀಡುತ್ತಾರಾ ಎಂಬ ಜಿಜ್ಞಾಸೆಯಿದೆ.

ಜೆಡಿಎಸ್ ಅಭ್ಯರ್ಥಿ ಒಳ ಒಪ್ಪಂದದ ವದಂತಿ
ಇನ್ನು ಜೆಡಿಎಸ್ ನಿಂದ ಹೊಸಮುಖ ಅಭಿಷೇಕ್ ಎಂಬುವರಿಗೆ ಟಿಕೆಟ್ ನೀಡಲಾಗಿದೆ. ಇಷ್ಟಕ್ಕೂ ಈ ಅಭಿಷೇಕ್ ಯಾರು ಎಂಬುದನ್ನು ನೋಡುವುದಾದರೆ, ಇವರು ತಿಪಟೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಷಡಕ್ಷರಿ ಅಳಿಯ. ಇದು ಹಲವು ಸಂಶಯಗಳಿಗೆ ಕಾರಣವಾಗಿದೆ. ಈಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಎಂ.ಅಭಿಷೇಕ್ ಅವರು ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಕುರಿತಾಗಿ ಚರ್ಚೆಗಳು ನಡೆಯುತ್ತಿವೆ.

ಅಳಿಯನನ್ನು ಮುಂದೆ ಬಿಟ್ಟು ತಾವು ಹತ್ತಿರ ಆಗ್ತಾರಾ ಷಡಕ್ಷರಿ?
ವರುಣಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಭಿಷೇಕ್ ಮಾವ ಷಡಕ್ಷರಿ ಕಾಂಗ್ರೆಸ್ ಪಕ್ಷದ ತಿಪಟೂರು ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ. ಈ ಬಾರಿ ಅವರಿಗೆ ಟಿಕೆಟ್ ಸಿಗುವುದು ಕಷ್ಟಸಾಧ್ಯವಾಗಿದ್ದು, ಹೀಗಾಗಿ ಮುಖ್ಯಮಂತ್ರಿಗೆ ಹತ್ತಿರವಾಗಿ ಟಿಕೆಟ್ ಪಡೆಯಲು ಅಳಿಯ ಅಭಿಷೇಕ್ ಅವರನ್ನು ಮುಂದೆ ಬಿಟ್ಟು, ಜೆಡಿಎಸ್ ನಿಂದ ಟಿಕೆಟ್ ಪಡೆದಿದ್ದು, ವರುಣಾ ಕ್ಷೇತ್ರದ ನಾಮ್ ಕೇ ವಾಸ್ಥೆ ಅಭ್ಯರ್ಥಿಯಾಗಿ ಮಾಡಿ, ಯತೀಂದ್ರ ಗೆಲುವಿಗೆ ಅನುವು ಮಾಡಿಕೊಡುವುದು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹತ್ತಿರವಾಗುವುದು ರಣತಂತ್ರದ ಭಾಗ ಎಂಬ ಅಂತೆ-ಕಂತೆ ಮಾತುಗಳು ಕ್ಷೇತ್ರದ ಅರಳಿ ಕಟ್ಟೆಗಳ ಚರ್ಚೆಯಲ್ಲಿ ಕೇಳಿ ಬರುತ್ತಿವೆ.

ಈ ಸುದ್ದಿ ಕುಮಾರಸ್ವಾಮಿ ಅವರ ಕಿವಿಯನ್ನು ತಲುಪಿಲ್ಲ
ಈ ಚರ್ಚೆಯು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತನಕ ತಲುಪಿಲ್ಲ. ಒಂದು ವೇಳೆ ತಲುಪಿದರೆ ಕೊನೆ ಕ್ಷಣದಲ್ಲಿ ಈ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬದಲಾವಣೆಯಾದರೂ ಅಚ್ಚರಿ ಪಡಬೇಕಾಗಿಲ್ಲ. ಕಳೆದ ಬಾರಿ ಸಿದ್ದರಾಮಯ್ಯ ವಿರುದ್ಧ ಸೆಟೆದು ನಿಂತು, ಸೋಲು ಕಂಡ ಕಾ.ಪು.ಸಿದ್ದಲಿಂಗಸ್ವಾಮಿ ನಂತರದ ದಿನಗಳಲ್ಲಿ ಮಂಕಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೂ ಕಾಂಗ್ರೆಸ್ ಗೆ ಒಂದಷ್ಟು ಪೈಪೋಟಿ ನೀಡಿದರೆ ಅದು ಬಿಜೆಪಿ ಮಾತ್ರ. ಆದರೆ ಜೆಡಿಎಸ್ ನಾಯಕರು ಅಭಿಷೇಕ್ ಗೆ ಟಿಕೆಟ್ ನೀಡುವ ಬದಲು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಟಿ.ಮಹಾದೇವಸ್ವಾಮಿ ಅವರಿಗೆ ಟಿಕೆಟ್ ನೀಡಬಹುದಿತ್ತು. ಆದರೆ ವಿದೇಶದಲ್ಲಿದ್ದ ಅಭಿಷೇಕ್ ಅವರನ್ನು ಕರೆತಂದು ಟಿಕೆಟ್ ನೀಡಿರುವುದರ ಮರ್ಮ ಏನು ಎಂಬುದು ಕ್ಷೇತ್ರದ ಜನರ ಪ್ರಶ್ನೆಯಾಗಿದೆ.












Click it and Unblock the Notifications