ಮೈಸೂರು; ಆಕ್ಸಿಜನ್ ಕೊರತೆ ಬಗ್ಗೆ ರೋಹಿಣಿ ಸಿಂಧೂರಿ ಹೇಳಿದ್ದೇನು?
ಮೈಸೂರು, ಏಪ್ರಿಲ್ 27; "ನಿಗದಿತ ಸಮಯಕ್ಕೆ ಮೈಸೂರು ಜಿಲ್ಲೆಗೆ ಆಕ್ಸಿಜನ್ ಸರಬರಾಜು ಆಗದಿದ್ದರೆ ಮುಂದಿನ ಎರಡು ಮೂರು ದಿನದಲ್ಲಿ ಸಮಸ್ಯೆಯಾಗಲಿದೆ" ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಳವಳ ವ್ಯಕ್ತಪಡಿಸಿದರು.
ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಜಿಲ್ಲೆಯಲ್ಲಿ ಹೊಸ ಪ್ಲ್ಯಾಂಟ್ಗೆ ಅನುಮತಿ ಸಿಕ್ಕಿದ್ದರೂ ಅದಕ್ಕೆ ಕನಿಷ್ಠ 25 ದಿನ ಬೇಕು. ಹೀಗಾಗಿ ನಮಗೆ ತುರ್ತಾಗಿ ಪರ್ಯಾವಾಗಿ ಆಕ್ಸಿಜನ್ ಬೇಕಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ವಾರಾಂತ್ಯದಲ್ಲಿ 50 ವೆಂಟಿಲೇಟರ್ ನೀಡುವ ಭರವಸೆ ಸರ್ಕಾರ ನೀಡಿದೆ" ಎಂದರು.
"ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ಇಲ್ಲ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ಗಳಿದ್ದು, ವಾರಾಂತ್ಯದಲ್ಲಿ ಮತ್ತಷ್ಟು ವೆಂಟಿಲೇಟರ್ ಬೆಡ್ಗಳು ಸಿಗಲಿವೆ" ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಮೈಸೂರಿನಲ್ಲಿ ಒಂದೇ ದಿನ 1500 ಪಾಸಿಟಿವ್ ಪ್ರಕರಣ ದಾಖಲಾದ ಕುರಿತು ಪ್ರತಿಕ್ರಿಯಿಸಿದ ಅವರು, "ಇದು ಹಳೆಯ ಅಂಕಿ ಅಂಶಗಳೆಲ್ಲಾ ಸೇರಿ ನೀಡಿದ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆಯಾಗಿದೆ. ನಾವು 700ರ ಆಸುಪಾಸಿನಲ್ಲಿದ್ದೇವೆ, ಎರಡು ದಿನದ ಅಂಕಿಅಂಶಗಳನ್ನು ಸೇರಿಸಿದಾಗ ಈ ರೀತಿ ಹೆಚ್ಚಾದಂತೆ ಕಾಣುತ್ತದೆ. ಆದರೆ ಸಾವಿರ ದಾಟಿದೆ ಎಂದು ಆತಂಕಪಡುವ ಅವಶ್ಯಕತೆ ಇಲ್ಲ" ಎಂದು ಸ್ಪಷ್ಟಪಡಿಸಿದರು.
ಏಪ್ರಿಲ್ 26ರಂದು ಮೈಸೂರು ಜಿಲ್ಲೆಯಲ್ಲಿ 1,563 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 68,255ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 5,894.











Click it and Unblock the Notifications