ಹೊರ ರಾಜ್ಯಗಳ ಬೇಡಿಕೆಯಿಂದ ದುಬಾರಿಯಾದ ಎಳನೀರು!
ಮೈಸೂರು, ಏಪ್ರಿಲ್ 11: ಹಳೇ ಮೈಸೂರು ಭಾಗದಲ್ಲಿ ಬೆಳೆಯುವ ಎಳನೀರಿಗೆ ಹೊರ ರಾಜ್ಯಗಳಿಂದ ಬೇಡಿಕೆ ಬರುತ್ತಿರುವ ಕಾರಣದಿಂದಾಗಿ ಪ್ರತಿದಿನವೂ ಮೈಸೂರಿನ ಹುಣಸೂರು, ಮಂಡ್ಯದ ಕೆ.ಆರ್.ಪೇಟೆ ಹಾಗೂ ಮದ್ದೂರು ಸೇರಿದಂತೆ ಹಲವು ಕಡೆಗಳಿಂದ ಎಳನೀರನ್ನು ಸಂಗ್ರಹಿಸಿ ಮುಂಬೈ, ದೆಹಲಿ, ಚೆನ್ನೈ ಮಾರುಕಟ್ಟೆಗಳಿಗೆ ಕಳುಹಿಸುತ್ತಿರುವ ಕಾರಣದಿಂದಾಗಿ ಸ್ಥಳೀಯವಾಗಿ ಎಳನೀರಿಗೆ ಬೇಡಿಕೆಗಳು ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೇ ಸಮರ್ಪಕವಾಗಿ ದೊರೆಯದ ಕಾರಣದಿಂದ ಕೆಲವರು ಎಳನೀರು ಮಾರಾಟ ಮಾಡುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ.
ಮೊದಲೆಲ್ಲ ಅಲ್ಲಲ್ಲಿ ಎಳನೀರನ್ನಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ದೃಶ್ಯಗಳು ಕಂಡು ಬರುತ್ತಿದ್ದವು. ಕೆಲವರಿಗೆ ಬೇಸಿಗೆಯಲ್ಲಿ ಕೆಲಸ ನೀಡಿ ಆದಾಯವನ್ನು ತರುತ್ತಿತ್ತು. ಆದರೆ ಎಳನೀರಿನ ಬೆಲೆಯಲ್ಲಿ ಏರಿಕೆಯಾಗಿರುವ ಕಾರಣದಿಂದ ಜನ ಯೋಚನೆ ಮಾಡುವಂತಾಗಿದೆ. ಹೀಗಾಗಿ ಅಗತ್ಯವಿರುವವರು ಮಾತ್ರ ಎಳನೀರು ಕುಡಿಯುತ್ತಿದ್ದು ವ್ಯಾಪಾರವೂ ಕಡಿಮೆಯಾಗುತ್ತಿದೆ ಎಂಬ ಅಳಲನ್ನು ಕೆಲವು ಎಳನೀರು ಮಾರಾಟಗಾರರು ತೋಡಿಕೊಳ್ಳುತ್ತಿದ್ದಾರೆ. ಆಸ್ಪತ್ರೆ ಸುತ್ತಮುತ್ತ ಸ್ವಲ್ಪ ಮಟ್ಟಿಗೆ ವ್ಯಾಪಾರ ನಡೆಯುತ್ತದೆ. ಉಳಿದಂತೆ ಇತರೆ ಕಡೆಗಳಲ್ಲಿ ಮೊದಲಿನಂತೆ ಮುಗಿಬಿದ್ದು ಎಳನೀರು ಕುಡಿಯುವವರ ಸಂಖ್ಯೆ ತೀರಾ ಕಡಿಮೆಯಾಗಿದೆ.

ಪ್ರತಿ ಎಳನೀರಿಗೆ ಕನಿಷ್ಟ 50 ರೂಪಾಯಿ ಇರುವುದರಿಂದ ಎಳನೀರು ಕುಡಿಯುವವರು ಯೋಚಿಸಿ ಕುಡಿಯುವಂತಾಗಿದೆ. ವರ್ಷದಿಂದ ವರ್ಷಕ್ಕೆ ತೆಂಗಿನ ತೋಟಗಳು ಕ್ಷೀಣಿಸುತ್ತಿವೆ. ಕೆಲವರು ತೋಟಗಳನ್ನೇ ಕಡಿದು ನಿವೇಶನಗಳನ್ನಾಗಿ ಪರಿವರ್ತಿಸುವ ಮಟ್ಟಕ್ಕೆ ಹೋಗುತ್ತಿದ್ದಾರೆ. ಇನ್ನು ಲಕ್ಷಾಂತರ ಬಂಡವಾಳ ಹಾಕಿ ತೋಟ ನಿರ್ಮಾಣ ಮಾಡುವ ಮತ್ತು ಫಸಲಿಗಾಗಿ ವರ್ಷಾನುಗಟ್ಟಲೆ ಕಾಯುವ ವ್ಯವಧಾನ ಈಗಿನ ರೈತರಿಗೆ ಇಲ್ಲದ ಕಾರಣದಿಂದಾಗಿ ಗೊತ್ತಿದ್ದೋ ಗೊತ್ತಿಲ್ಲದಂತೆಯೋ ತೆಂಗಿನ ತೋಟಗಳು ಕ್ಷೀಣಿಸುತ್ತಿವೆ. ಇದರ ಪರಿಣಾಮ ಬರೀ ಎಳನೀರು ಮಾತ್ರವಲ್ಲದೆ, ತೆಂಗಿನಕಾಯಿಯ ಬೆಲೆಯೂ ಗಗನಕ್ಕೇರುತ್ತಿದೆ.
ಎಳನೀರು ದುಬಾರಿಯಾಗಲು ಕಾರಣವೇನು?
ಬೇಸಿಗೆ ಬಂತೆಂದರೆ ರಸ್ತೆ ಬದಿಗಳಲ್ಲಿ, ಗಲ್ಲಿಗಳಲ್ಲಿ, ಜನಸಂದಣಿ ಇರುವ ಪ್ರದೇಶಗಳಲ್ಲಿ ಎಳನೀರು ವ್ಯಾಪಾರ ಜೋರಾಗಿ ನಡೆಯುತ್ತಿತ್ತು. ಅವತ್ತು ಎಳನೀರು ಕೈಗೆಟುಕುವ ದರದಲ್ಲಿ ದೊರೆಯುತ್ತಿತ್ತು. ಹೀಗಾಗಿ ಜನ ಕೂಡ ಬೇರೆ ಪಾನೀಯಗಳನ್ನು ಕುಡಿಯುವ ಬದಲಿಗೆ ಎಳನೀರು ಕುಡಿದು ದಾಹ ತಣಿಸಿಕೊಳ್ಳುವುದರೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಆದರೀಗ ದುಬಾರಿ ಎಳನೀರಿನತ್ತ ಮುಖ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದೆಲ್ಲದರ ನಡುವೆ ಹೊರ ರಾಜ್ಯಗಳಿಂದ ಬರುವ ವ್ಯಾಪಾರಿಗಳು ಉತ್ತಮ ದರ ನೀಡುವುದರಿಂದ ಮಧ್ಯವರ್ತಿಗಳು ರೈತರ ತೋಟಗಳಿಗೆ ತೆರಳಿ ಎಳನೀರು ಸಂಗ್ರಹಿಸಿಕೊಂಡು ಬರುತ್ತಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಬೇಸಿಗೆ ಝಳ ಏರಿಕೆಯಾಗುತ್ತಿದ್ದು, ಈ ಸಮಯದಲ್ಲಿ ಜನ ದಾಹ ನೀಗಿಸಲು ಎಳನೀರಿನ ಅಗತ್ಯತೆ ಇದ್ದೇ ಇದೆ. ಆದರೆ ಈಗ ಎಳನೀರಿನ ಲಭ್ಯತೆಯ ಕೊರತೆ ಎಲ್ಲಡೆ ಕಾಣಿಸುತ್ತಿದ್ದು, ದುಬಾರಿ ಹಣ ನೀಡಿ ಎಳನೀರು ಕುಡಿಯುವಂತಾಗಿದೆ. ಒಂದೆಡೆ ಉತ್ಪಾದನೆ ಕೊರತೆ ಮತ್ತೊಂದೆಡೆ ಇದ್ದ ಮಾಲುಗಳು ರಾಜ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಹೊರರಾಜ್ಯಗಳಿಗೆ ಸರಬರಾಜಾಗುತ್ತಿರುವುದು ದುಬಾರಿಯಾಗಲು ಕಾರಣವಾಗಿದೆ. ಮಂಡ್ಯದ ಕೆ.ಆರ್ ಪೇಟೆ ಎಳನೀರು ಮಾರುಕಟ್ಟೆಯಿಂದ ಪ್ರತಿದಿನವೂ ಹತ್ತಾರು ಲಾರಿಗಳಲ್ಲಿ ಹೊರ ರಾಜ್ಯಗಳಿಗೆ ಸರಬರಾಜಾಗುತ್ತಿದೆ. ಹೀಗಾಗಿ ಈ ವ್ಯಾಪ್ತಿಯಲ್ಲಿರುವ ರೈತರು ಕಾಯಿಗಿಂತ ಎಳನೀರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ.

ತೆಂಗಿನ ಕೃಷಿ ಮಾಡುವುದು ರೈತರಿಗೆ ಸವಾಲ್
ಇತ್ತೀಚೆಗಿನ ವರ್ಷಗಳಲ್ಲಿ ತೆಂಗು ಬೆಲೆ ಕುಸಿತ ಕಂಡಿಲ್ಲ. ಜತೆಗೆ ಎಳನೀರಿಗೂ ಬೇಡಿಕೆಯಿದೆ. ಇದೆಲ್ಲ ಕಾರಣದಿಂದ ರೈತರು ತೆಂಗು ಬೆಳೆಯತ್ತ ಉತ್ಸಾಹ ತೋರುತ್ತಿದ್ದಾರೆ. ಹಿಂದೆ ತೆಂಗಿನ ಕಾಯಿ ಬೆಲೆ ಕುಸಿತವಾದಾಗ ಬಹಳಷ್ಟು ರೈತರ ಕೈಹಿಡಿದಿದ್ದು ಎಳನೀರು. ಅದು ಮುಂದುವರೆದಿದ್ದು, ಬರದ ಸಂಕಷ್ಠದ ಈ ದಿನಗಳಲ್ಲಿ ರೈತರಿಗೆ ಪ್ರಮುಖವಾಗಿ ಆಸರೆಯಾಗಿದೆಯಲ್ಲದೇ ಆರ್ಥಿಕ ಸ್ವಾವಲಂಬನೆಯ ಬದುಕಿಗೆ ಸಹಕಾರಿಯಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಮದ್ದೂರು ಮತ್ತು ಕೆ.ಆರ್.ಪೇಟೆಯಲ್ಲಿ ಎಳನೀರು ವಹಿವಾಟು ನಡೆಯುತ್ತಿತ್ತು. ಈ ಹಿಂದೆ ಎಳನೀರು ವ್ಯಾಪಾರದಲ್ಲಿ ಮದ್ದೂರು ಹೆಸರುವಾಸಿಯಾಗಿತ್ತು. ಇದೀಗ ಕೆ.ಆರ್.ಪೇಟೆ ಎಳನೀರು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿದ್ದು, ಪ್ರಥಮ ಸ್ಥಾನಕ್ಕೆ ಜಿಗಿತುಕೊಂಡಿದೆ. ಜೊತೆಗೆ ಎಳನೀರು ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ಭಾರೀ ಬೇಡಿಕೆ ಹೊಂದಿರುವುದು ಕಂಡು ಬಂದಿದೆ.

ರಾಜ್ಯದಿಂದ ಎಳನೀರು ನವದೆಹಲಿ, ಬೆಂಗಳೂರು, ಮಂಗಳೂರು ಸೇರಿದಂತೆ ಮುಂಬೈ, ಪೂನಾ, ಚೆನ್ನೈ, ವಿಶಾಖಪಟ್ಟಣ, ಕೊಯಮತ್ತೂರು, ಕೇರಳ, ಒರಿಸ್ಸಾ, ಗ್ವಾಲಿಯರ್, ಆಗ್ರಾ ಮಾರುಕಟ್ಟೆಗೆ ಸರಬರಾಜಾಗುತ್ತಿದೆ. ರೈತರಿಂದ ಖರೀದಿಸುವ ಎಳನೀರನ್ನು ಮಧ್ಯವರ್ತಿಗಳು ಬಳಿಕ ವರ್ತಕರಿಗೆ ಮಾರಾಟ ಮಾಡುತ್ತಾರೆ. ಅದು ತಲುಪಬೇಕಾದ ಸ್ಥಳಕ್ಕೆ ತಲುಪುವ ಹೊತ್ತಿಗೆ ಅದರ ಬೆಲೆಯಲ್ಲಿ ಏರಿಕೆಯಾಗುತ್ತದೆ. ಇಲ್ಲಿ ಎಳನೀರಿನ ದರ ದುಬಾರಿ ಎನಿಸಬಹುದು ಆದರೆ ರೈತರಿಗೆ ತೆಂಗು ಗಿಡ ಮತ್ತು ಮರಗಳನ್ನು ಕಾಡುವ ನುಸಿಪೀಡೆ ಹಾಗೂ ಗರಿತಿನ್ನುವ ಗೊಣ್ಣೆಹುಳು, ಕೆಂಪುಮೂತಿ ಹುಳುವನ್ನು ನಿಯಂತ್ರಿಸಿ, ರೋಗ ಮುಕ್ತವಾಗಿಸಿ ತೆಂಗಿನ ಗಿಡಗಳನ್ನು ಕಾಪಾಡಿಕೊಳ್ಳುವುದು ಕೂಡ ಸವಾಲ್ ಆಗುತ್ತಿದೆ ಎನ್ನುವುದು ಅಷ್ಟೇ ಸತ್ಯ.












Click it and Unblock the Notifications