ಮೈಸೂರಿನಲ್ಲಿ ಬಿಜೆಪಿ ಶಾಸಕರ ಜೊತೆ ಸಂಸದ ಪ್ರತಾಪ್ ಸಿಂಹ ಮತ್ತೆ ಜಗಳ

ಮೈಸೂರು, ಜೂನ್ 12: ಮೈಸೂರಿನ ಶಾಸಕರು ಮತ್ತು ಸಂಸದರ ನಡುವೆ ಭಿನ್ನಾಭಿಪ್ರಾಯಗಳು ಕಳೆದ ಕೆಲವು ಸಮಯಗಳಿಂದ ಮುಂದುವರೆದಿದ್ದು, ಒಬ್ಬರಿಗೊಬ್ಬರು ಆರೋಪ ಮಾಡುವುದು ಮುಂದುವರೆದಿದೆ. ಇದು ಎಲ್ಲಿ ಹೋಗಿ ಮುಟ್ಟುತ್ತಲಿದೆ ಎನ್ನುವುದನ್ನು ರಾಜಕೀಯ ವಿರೋಧಿಗಳು ಉತ್ಸಾಹದಿಂದ ಕಾಯುವಂತೆ ಮಾಡಿದೆ.

ಗ್ಯಾಸ್ ಪೈಪ್ ಲೈನ್ ವಿಚಾರಕ್ಕೆ ಆರಂಭವಾದ ಜಗಳ ಮುಂದುವರೆಯುತ್ತಲೇ ಸಾಗಿದೆ. ಈ ಹಿಂದೆ ಕೆ.ಆರ್. ಕ್ಷೇತ್ರದ ಶಾಸಕ ರಾಮದಾಸ್ ಮತ್ತು ಸಂಸದರ ನಡುವೆ ಕಸದ ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಆರಂಭವಾಗಿತ್ತು. ನಂತರ ಗ್ಯಾಸ್ ಪೈಪ್ ಲೈನ್ ಅಳವಡಿಕೆ ವಿಚಾರದಲ್ಲಿ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಅವರೊಂದಿಗೆ ಸಮರ ನಡೆದಿತ್ತು.

ಇದೀಗ ಜೂನ್‌ 21ರಂದು ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಇದರ ಸಿದ್ಧತೆಯ ಜವಾಬ್ದಾರಿಯನ್ನು ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ರಾಮದಾಸ್‌ ಮುಂದೆ ನಿಂತು ನೋಡಿಕೊಳ್ಳುತ್ತಿದ್ದಾರೆ. ಆದರೆ ಈ ವಿಚಾರದಲ್ಲೂ ಗೊಂದಲ ಮೂಡಿದ್ದು, ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಈ ಇಬ್ಬರು ನಾಯಕರು ಬಹಿರಂಗವಾಗಿ ಜೋರು ಮಾತನಾಡಿದ್ದಾರೆ.

ಕ್ರೆಡಿಟ್‌ಗಾಗಿ ಜಟಾಪಟಿ

ಕ್ರೆಡಿಟ್‌ಗಾಗಿ ಜಟಾಪಟಿ

ಬಿಜೆಪಿಯ ಶಾಸಕರು ಮತ್ತು ಸಂಸದರ ನಡುವೆ ನಡೆಯುತ್ತಿರುವ ಭಿನ್ನಾಭಿಪ್ರಾಯದ ಸಮರ ಅಭಿವೃದ್ಧಿಗೆ ತೊಡಕಾಗುತ್ತಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಭಿನ್ನಾಭಿಪ್ರಾಯದ ಕುರಿತಂತೆ ಹಿರಿಯ ನಾಯಕರು ಒಂದಾಗಿ ಸರಿಪಡಿಸುವ ಕೆಲಸವನ್ನು ಮಾಡದ ಕಾರಣದಿಂದ ಅದು ಆಗೊಮ್ಮೆ ಈಗೊಮ್ಮೆ ಸ್ಪೋಟಗೊಳ್ಳುತ್ತಲೇ ಸಾಗುತ್ತಿದೆ.

ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಯೋಗದಿನಾಚರಣೆ ಸಲುವಾಗಿ ಮೈಸೂರಿಗೆ ಆಗಮಿಸುತ್ತಿದ್ದು, ಈ ಸಂಬಂಧ ಕೆಲಸ ಕಾರ್ಯಗಳು ಸಮರೋಪಾದಿಯಾಗಿ ಸಾಗುತ್ತಿದೆ. ಹೀಗಿರುವಾಗಲೇ ಇದರ ಕ್ರೆಡಿಟ್ ಪಡೆಯಲು ಶಾಸಕರು ಮತ್ತು ಸಂಸದರ ನಡುವೆ ಜಟಾಪಟಿ ನಡೆಯುತ್ತಿದೆಯಾ ಎಂಬ ಸಂಶಯಗಳು ಅವರು ನಡೆದುಕೊಳ್ಳುತ್ತಿರುವ ನಡೆಯಿಂದಲೇ ಜನರಿಗೆ ಗೊತ್ತಾಗುತ್ತಿದೆ.

ಶಾಸಕರಿಗೆ ಗದರಿದ ಪ್ರತಾಪ್ ಸಿಂಹ

ಶಾಸಕರಿಗೆ ಗದರಿದ ಪ್ರತಾಪ್ ಸಿಂಹ

ಯೋಗ ದಿನಾಚರಣೆ ಸಂಬಂಧ ಅರಮನೆ ಆವರಣದಲ್ಲಿ ತಾಲೀಮು ನಡೆದಿದ್ದು, ಈ ವೇಳೆ ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ರಾಮದಾಸ್ ಅವರ ನಡುವೆ ಜಟಾಪಟಿ ನಡೆಯುವ ಮೂಲಕ ಇವರ ನಡುವಿನ ಸಂಬಂಧ ಹಳಸಿದೆ ಎಂಬುದು ಬಹಿರಂಗವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿರುವ ವಿಶ್ವ ಯೋಗ ದಿನದ ಬಗ್ಗೆ ಪ್ರತಾಪ್ ಸಿಂಹ ಮಾಹಿತಿ ನೀಡುವ ವೇಳೆ ರಾಮದಾಸ್ ಅವರು ಮಧ್ಯ ಪ್ರವೇಶಿಸಿದ್ದಾರೆ. ಈ ಸಂದರ್ಭ ಕೋಪಗೋಂಡ ಸಂಸದ ಪ್ರತಾಪ್ ಸಿಂಹ "ನಾನು ಮಾತನಾಡುವಾಗ ನೀವು ಸುಮ್ಮನಿರಬೇಕು" ಎಂದು ಬಹಿರಂಗವಾಗಿಯೇ ಗದರಿದ್ದಾರೆ. ಬಹಿರಂಗವಾಗಿ ಸಂಸದ ಪ್ರತಾಪ್ ಸಿಂಹ ಗದರಿದ್ದು ಶಾಸಕ ರಾಮದಾಸ್ ಅವರಿಗೆ ಒಳಗೊಳಗೆ ಅವಲಕ್ಕಿ ಕುಟ್ಟಿದಂತೆ ಮಾಡಿದೆ.

ಮೈಸೂರು ಬಿಜೆಪಿಯಲ್ಲಿ ಬಿರುಕು

ಮೈಸೂರು ಬಿಜೆಪಿಯಲ್ಲಿ ಬಿರುಕು

ಆ ಮೂಲಕ ಮೈಸೂರು ಬಿಜೆಪಿ ಒಡೆದ ಮನೆಯಾಗಿದೆ ಎಂಬುದು ಹೊರ ಜಗತ್ತಿಗೆ ಗೊತ್ತಾಗುವಂತೆ ಮಾಡಿದೆ. ಮೈಸೂರಿನ ಇಬ್ಬರು ಬಿಜೆಪಿ ಶಾಸಕರಾದ ರಾಮದಾಸ್ ಮತ್ತು ನಾಗೇಂದ್ರ ಅವರೊಂದಿಗೆ ಸಂಸದ ಪ್ರತಾಪ್ ಸಿಂಹ ಅವರ ಸಂಬಂಧ ಹಳಸಿ ಬಹಳ ದಿನಗಳೇ ಕಳೆದಿವೆ. ಇದು ಮೋದಿ ಆಗಮಿಸುವ ಈ ವೇಳೆ ಇನ್ನಷ್ಟು ಬಿರುಕಿಗೆ ಕಾರಣವಾಗಿದೆ.

ಕೆ.ಆರ್.ಕ್ಷೇತ್ರದ ಶಾಸಕ ರಾಮದಾಸ್ ಅವರು ಕಳೆದ ಕೆಲವು ತಿಂಗಳಿನಿಂದಲೇ ಯೋಗ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ರಮ ಪಡುತ್ತಿದ್ದಾರೆ. ಈಗಾಗಲೇ ತಮ್ಮ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕೇಂದ್ರ ನಾಯಕರ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಶಾಸಕ-ಸಂಸದರ ಜಗಳ ಎದುರಾಳಿಗಳಿಗೆ ಲಾಭ

ಶಾಸಕ-ಸಂಸದರ ಜಗಳ ಎದುರಾಳಿಗಳಿಗೆ ಲಾಭ

ಆದರೆ ಒಂದೇ ಪಕ್ಷದ ಶಾಸಕರು ಮತ್ತು ಸಂಸದರ ನಡುವೆ ಸಮನ್ವಯತೆ ಇಲ್ಲದಿರುವುದು ಪಕ್ಷದ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ಇದುವರೆಗೆ ಹಿರಿಯ ನಾಯಕರು ಮಧ್ಯಪ್ರವೇಶಿಸಿ ಭಿನ್ನಾಭಿಪ್ರಾಯಗಳನ್ನು ತಿಳಿಗೊಳಿಸದಿರುವುದು ಇತರೆ ಪಕ್ಷದವರಿಗೆ ಮುಂದಿನ ದಿನಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಅನುಕೂಲ ವಾತಾವರಣವನ್ನು ನಿರ್ಮಿಸಿದರೂ ಅಚ್ಚರಿಯಿಲ್ಲ.

ಮೋದಿ ಅವರು ಮೈಸೂರಿಗೆ ಬಂದು ಹೋಗುವುದರೊಳಗೆ ಶಾಸಕರು ಮತ್ತು ಸಂಸದರ ನಡುವೆ ಇರುವ ಮುಸುಕಿನ ಗುದ್ದಾಟಗಳು ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತೋ? ಗೊತ್ತಿಲ್ಲ. ಆದರೆ ಬಿಜೆಪಿ ಪಕ್ಷದಲ್ಲಿನ ಈ ಬೆಳವಣಿಗೆ ಶಿಸ್ತಿನ ಪಕ್ಷ ಎಂದು ಬೀಗುವ ಪಕ್ಷಕ್ಕೆ ಮತ್ತು ಹಿರಿಯ ನಾಯಕರಿಗೊಂದು ಕಪ್ಪು ಚುಕ್ಕೆ ಎಂದರೂ ತಪ್ಪಾಗಲಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+