ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ಆರಂಭ
ಮೈಸೂರು, ಅಕ್ಟೋಬರ್.22: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹ ರಾಜಒಡೆಯರ್ ಅವರ ಸಹೋದರಿ ವಿಶಾಲಾಕ್ಷಿದೇವಿ ಅವರ ನಿಧನದಿಂದಾಗಿ ಮುಂದೂಡಲಾಗಿದ್ದ ಅರಮನೆ ಧಾರ್ಮಿಕ ಕಾರ್ಯಗಳು ಇಂದು ಸೋಮವಾರ ನಡೆಯುತ್ತಿವೆ.
ಇಬ್ಬರೂ ಅ.19ರ ವಿಜಯದಶಮಿಯಂದೇ ನಿಧನರಾದ ಹಿನ್ನೆಲೆಯಲ್ಲಿ ವಿಜಯ ದಶಮಿಯಂದು ನಡೆಯಬೇಕಿದ್ದ ಖಾಸಗಿ ದರ್ಬಾರ್, ವಿಜಯದಶಮಿ ಮೆರವಣಿಗೆ, ಶಮೀಪೂಜೆ, ಕಂಕಣ ವಿಸರ್ಜನೆ ಎಲ್ಲವನ್ನೂ ಮುಂದೂಡಲಾಗಿತ್ತು. ಈ ನಡುವೆ ಕಳೆದ ಎರಡು ದಿನಗಳಿಂದಲೂ ಅರಮನೆ ವಿದ್ಯುತ್ ದೀಪಾಲಂಕಾರಕ್ಕೂ ಬ್ರೇಕ್ ಬಿದ್ದಿತ್ತು.
ವಿಜಯದಶಮಿ ದಿನದ ಧಾರ್ಮಿಕ ಪೂಜಾ ಕೈಂಕರ್ಯಗಳು ಇಂದು ಬೆಳಗ್ಗೆ 9 ರಿಂದ ಆರಂಭವಾಗಿದ್ದು, 12 ಗಂಟೆಯವರೆಗೆ ನಡೆಯಲಿವೆ. ಮೊದಲಿಗೆ ಧಾರ್ಮಿಕ ವಿಧಿ, ಪಟ್ಟಾಭಿಷೇಕ ನಡೆದು ನಂತರ ವಜ್ರಮುಷ್ಟಿ ಕಾಳಗ ನಡೆಯಲಿದೆ.

ಆನಂತರ ಬೆಳ್ಳಿಗಾಡಿಯಲ್ಲಿ ಮೆರವಣಿಗೆಯಲ್ಲಿ ತೆರಳಿ ಕೋಡಿ ಸೋಮೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶಮೀಪೂಜೆ ನೆರವೇರಿಸುವರು. ಅಲ್ಲಿಂದ ಹಿಂತಿರುಗಿದ ನಂತರ ಕಂಕಣ ವಿಸರ್ಜನೆ ಆಗಲಿದೆ.
ಅರಮನೆಗೆ ನಿರ್ಬಂಧ
ದಸರಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಅಂಬಾವಿಲಾಸ ಅರಮನೆ ಒಳಕ್ಕೆ ಪ್ರವಾಸಿಗರಿಗೆ ಮಧ್ಯಾಹ್ನ 1.30ರವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಅರಮನೆ ಆವರಣ ಪವೇಶಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಮಣ್ಯ ತಿಳಿಸಿದ್ದಾರೆ.












Click it and Unblock the Notifications