ಯಾವ ಕ್ಷೇತ್ರ ನೀಡಿದರೂ ಸ್ಫರ್ಧೆಗೆ ಸಿದ್ಧ - ಮಾಳವಿಕಾ ಅವಿನಾಶ್
ಇಲ್ಲಿಯ ತನಕ ಕೆ.ಆರ್ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಮಾಜಿ ಸಚಿವ ಎಸ್.ಎ ರಾಮದಾಸ್ ಮತ್ತು ಜಿಲ್ಲಾ ಸಹಕಾರ ಯೂನಿಯನ್ ನ ಅಧ್ಯಕ್ಷ ಎಚ್.ವಿ ರಾಜೀವ್ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಇದಕ್ಕೀಗ ಮಾಳವಿಕಾ ಹೆಸರು ಸೇರಿಕೊಂಡಿದೆ.
ಮೈಸೂರು, ಮೇ 5: ಮೈಸೂರು ಕೆ.ಆರ್ ಕ್ಷೇತ್ರಕ್ಕೆ ನಟಿ ಮಾಳವಿಕಾ ಅವಿನಾಶ್ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿಸ್ಪಷ್ಟನೆ ನೀಡಿರುವ ಅವರು 'ತಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತೆ. ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ಹೊರಲು ಸಿದ್ಧವಾಗಿದ್ದೇನೆ' ಎಂದಿದ್ದಾರೆ.
ಈ ಮೂಲಕ ಕೆ.ಆರ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಎಸ್ ಎ ರಾಮದಾಸ್ ಹಾಗೂ ಹೆಚ್ ವಿ ರಾಜೀವ್ ಗೆ ಶಾಕ್ ನೀಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸ್ವತಃ ಮಾಳವಿಕಾ ಅವಿನಾಶ್ ಒನ್ ಇಂಡಿಯಾದೊಂದಿಗೆ ಮಾತನಾಡಿದ್ದು, "ನಾನು ಕಳೆದ ಹಲವಾರು ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡು ಕಾರ್ಯಕರ್ತೆಯಾಗಿ ದುಡಿಯುತ್ತಿದ್ದೇನೆ.
ಪಕ್ಷ ನನ್ನನ್ನು ವಕ್ತಾರೆಯನ್ನಾಗಿ ನೇಮಿಸಿದೆ. ಹಲವಾರು ಚುನಾವಣೆ ಹಾಗೂ ಉಪ ಚುನಾವಣೆಗಳಲ್ಲಿ ಸ್ಟಾರ್ ಪ್ರಚಾರಕಿಯಾಗಿ ಭಾಗವಹಿಸಿದ್ದೇನೆ. ಇತ್ತೀಚೆಗೆ ನಡೆದ ನಂಜನಗೂಡು - ಗುಂಡ್ಲುಪೇಟೆ ಉಪಚುನಾವಣೆಯಲ್ಲಿಯೂ ತಾರಾ ಪ್ರಚಾರಕಿಯಾಗಿದ್ದೆ. ಇದು ನನಗೆ ಪಕ್ಷದ ಮುಖಂಡರು ನೀಡಿದ್ದ ನಿರ್ದೇಶನ. ಅದನ್ನು ನಾನು ಪಾಲಿಸಿದ್ದೇನೆ, ಈಗ ಪಕ್ಷ ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಿದರೆ ಅದಕ್ಕು ನಾನು ಬದ್ಧ," ಎಂದು ತಮ್ಮ ಮನದಿಂಗಿತವನ್ನು ಸ್ಪಷ್ಟಪಡಿಸಿದ್ದಾರೆ.
ಇಲ್ಲಿಯ ತನಕ ಕೆ.ಆರ್ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಮಾಜಿ ಸಚಿವ ಎಸ್.ಎ ರಾಮದಾಸ್ ಮತ್ತು ಜಿಲ್ಲಾ ಸಹಕಾರ ಯೂನಿಯನ್ ನ ಅಧ್ಯಕ್ಷ ಎಚ್.ವಿ ರಾಜೀವ್ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಇದರಿಂದ ಇಲ್ಲಿ ಮಾಳವಿಕಾ ಅವಿನಾಶ್ ರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂಬ ವದಂತಿ ಹರಡಿತ್ತು.
ಇದರ ಬೆನ್ನಲ್ಲೇ ಮಾಳವಿಕಾ ಈ ಹೇಳಿಕೆ ನೀಡಿರುವುದು ವದಂತಿಗೆ ಇನ್ನಷ್ಟು ಪುಷ್ಠಿ ನೀಡಿದೆ. ಇನ್ನು ಇದೇ ಮೇ 6 ಮತ್ತು 7 ರಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆ ನಡೆಯಲಿರುವುದು ಈ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.












Click it and Unblock the Notifications