ಮೈಸೂರು: ಕನ್ನಡಪರ ಹೋರಾಟಗಾರರೊಂದಿಗೆ ರವಿ ಚನ್ನಣ್ಣನವರ್ ಚರ್ಚೆ
ಮೈಸೂರು, ಫೆಬ್ರವರಿ 9 : ಹೋರಾಟಗಾರರೊಂದಿಗೆ ಪೊಲೀಸರಿಗೆ ಸಹಕಾರ ನೀಡುವುದಕ್ಕೆ ನಾವು ಸದಾ ಸಿದ್ಧ. ಆದರೆ, ಹೋರಾಟಗಾರರನ್ನು ಗೌರವಿಸುವ ಮನೋಭಾವ ಪೊಲೀಸರಲ್ಲಿ ಕಡಿಮೆ ಇದೆ. ಅವರು ಈ ಧೋರಣೆಯನ್ನು ಬದಲಿಸಿಕೊಂಡಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಅವರಿಗೆ ಹೋರಾಟಗಾರರು ಸಾಥ್ ನೀಡುತ್ತಾರೆ. ಹೀಗೆಂದು ಅಭಿಪ್ರಾಯ ವ್ಯಕ್ತಪಡಿಸಿದವರು ಜಿಲ್ಲೆಯ ಕನ್ನಡಪರ ಹೋರಾಟಗಾರರು.
ನಗರದ ನಜರಬಾದ್ ನಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭಾಂಗಣದಲ್ಲಿ ಎಸ್ಪಿ ರವಿ ಡಿ ಚನ್ನಣ್ಣನವರ್ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿರ ಕುಂದು-ಕೊರತೆ ಸಭೆಯಲ್ಲಿ ಕನ್ನಡ ಪರ ಹೋರಾಟಗಾರರ ಅಭಿಪ್ರಾಯವನ್ನು ಪಡೆಯುವ ವೇಳೆ ಹೋರಾಟಗಾರರು ತಮ್ಮ ನೋವನ್ನು ತೋಡಿಕೊಂಡರು.
ಚುನಾವಣಾ ಅಕ್ರಮ ತಡೆಗಟ್ಟಲು ರವಿ ಚನ್ನಣ್ಣರವರ್ ಹೊಸ ಉಪಾಯ
ನಂಜನಗೂಡಿನ ಕನ್ನಡಪರ ಹೋರಾಟಗಾರ ತ್ರಿನೇಶ್ ಮಾತನಾಡಿ, ಪೊಲೀಸರಂತೆ ನಾವು ಕೂಡ ದಿನದ 24 ಗಂಟೆಗಳೂ ಜನಪರ ಹೋರಾಟ ನಡೆಸುತ್ತೇವೆ. ಆದರೆ, ಪೊಲೀಸರು ನಮಗೆ ಸಹಕಾರ ನೀಡುತ್ತಿಲ್ಲ. ಕೆಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಠಾಣೆಗೆ ತೆರಳಿದರೆ 'ಇದು ನಿಮ್ಮ ಮಾವನ ಮನೆಯೇ' ಎಂದು ಪ್ರಶ್ನಿಸುವ ಮೂಲಕ ಅಗೌರವಿಸುತ್ತಾರೆ. ಈ ಧೋರಣೆ ಬದಲಾಗಬೇಕು ಎಂದರು.
ಅವರಿಗೆ ದನಿಗೂಡಿಸಿದ ಕಡಕೊಳ ಕುಮಾರಸ್ವಾಮಿ ಅವರು, ನಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಹಲವಾರು ಖಾಸಗಿ ಕಾರ್ಖಾನೆಗಳಿವೆ. ಅಲ್ಲಿ ಸ್ಥಳೀಯರಿಗೆ ಹೆಚ್ಚು ಉದ್ಯೋಗ ನೀಡಿಲ್ಲ. ಈ ಸಂಬಂಧ ಹೋರಾಟ ನಡೆಸಿದರೆ, ಪೊಲೀಸರು ನಮ್ಮ ಮೇಲೆಯೇ ಪ್ರಕರಣ ದಾಖಲಿಸಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಾರೆ. ನೀವು ಬೆಂಬಲ ನೀಡುವುದಾದಲ್ಲಿ ಕನ್ನಡಿಗರಿಗೆ ಅನ್ಯಾಯ ಮಾಡುವವರನ್ನು ನಿಮ್ಮ ಮುಂದೆ ಎಳೆತಂದು ನಿಲ್ಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಿ.ನರಸೀಪುರದ ಬಾಳೆಎಲೆ ಕುಮಾರ್ ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ ಗಾಂಜಾ, ಅಫಿಮಿನಂತಹ ಮಾದಕ ವಸ್ತುಗಳು ಎಗ್ಗಿಲ್ಲದೆ ಮಾರಾಟವಾಗುತ್ತಿವೆ. ಇದರಿಂದ ಯುವ ಜನತೆ ಹಾದಿ ತಪ್ಪುತ್ತಿದೆ. ಕೂಡಲೇ ನೀವು ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು. ಬನ್ನೂರು-ನರಸೀಪುರ ರಸ್ತೆಯಲ್ಲಿ ಮದ್ಯ ಮಾರಾಟ ಮಳಿಗೆಗಳ ಹಾವಳಿ ಹೆಚ್ಚಾಗಿದ್ದು, ತಡರಾತ್ರಿಯಲ್ಲಿ ಜನರು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರ್ ಗಳಿಂದಲೇ ಸುತ್ತಮುತ್ತ ಹಳ್ಳಿಗಳಿಗೆ ಮದ್ಯ ಸರಬರಾಜಾಗುತ್ತದೆ ಎಂದು ಕೇತುಪುರ ಶಿವಕುಮಾರ್ ದೂರಿದರು.
ನಂತರ ಮಾತನಾಡಿದ ರವಿ ಡಿ ಚನ್ನಣ್ಣನವರ್, ಪೊಲೀಸ್ ಠಾಣೆಗಳು ಜನ ಸ್ನೇಹಿ ಕೇಂದ್ರಗಳಾಗಬೇಕು ಎಂಬುದು ನನ್ನ ಉದ್ದೇಶ. ಹೀಗಾಗಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರೊಡನೆ ಸೇರಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿದ್ದೇವೆ. ನೀವುಗಳು ರಾತ್ರಿ ಹಾಗೂ ಹಗಲು ಗಸ್ತಿನ ವೇಳೆ ಪೊಲೀಸರೊಂದಿಗೆ ತೆರಳಿ ಅಪರಾಧ ಚಟುವಟಿಕೆಗಳ ತಡೆಯಲ್ಲಿ ಭಾಗಿಯಾಗಬಹುದು ಎಂದರು.