ಅದೃಷ್ಟ ಎಂದು ಅಪರೂಪದ ಕಂದು ಮೀನು ಗೂಬೆ ಮಾರಾಟ; ಮೂವರ ಬಂಧನ
ಮೈಸೂರು, ನವೆಂಬರ್ 21: ಬಹಳ ಅಪರೂಪದ ಪಕ್ಷಿಯಾಗಿರುವ ಕಂದು ಮೀನು ಗೂಬೆ (ಬ್ರೌನ್ ಫಿಶ್ ಔಲ್) ಅನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಮೂವರು ವ್ಯಕ್ತಿಗಳನ್ನು ದ್ವಿಚಕ್ರ ವಾಹನ ಸಮೇತ ಅರಣ್ಯ ಸಂಚಾರ ದಳದ ಸಿಬ್ಬಂದಿ ಬಂಧಿಸಿದ್ದಾರೆ.
ಶ್ರೀರಂಗಪಟ್ಟಣದ ಸಮೀಪ ಮೈಸೂರು-ಬೆಂಗಳೂರು ಹೆದ್ದಾರಿ ಬಳಿ ಶುಕ್ರವಾರ ಸಂಜೆ ಕಂದು ಮೀನು ಗೂಬೆಯನ್ನು ಮಾರಾಟ ಮಾಡಲು ಯತ್ನಿಸುತ್ತಿರುವುದು ಅರಣ್ಯ ಸಂಚಾರಿ ಸಿಬ್ಬಂದಿಗೆ ಕಂಡು ಬಂದಿದೆ. ಕೂಡಲೇ ಮಂಡ್ಯ ನಿವಾಸಿಗಳಾದ ಕುಮಾರ್, ಮಹಮ್ಮದ್ ರಫಿ, ಮದ್ದೂರಿನ ನಿವಾಸಿ ರಾಜೇಶ್ ಎಂಬುವರನ್ನು ಬಂಧಿಸಿದ್ದು, ಬಂಧಿತರಿಂದ ಒಂದು ಸ್ಕೂಟರ್ ವಶಪಡಿಸಿಕೊಂಡಿದ್ದಾರೆ.

ವನ್ಯ ಜೀವಿ ಸಂರಕ್ಷಣಾ ಕಾಯ್ದೆಯನ್ವಯ ವನ್ಯ ಜೀವಿಗಳ ಸಾಕುವಿಕೆ, ಮಾರಾಟ ಮಾಡುವುದು ದಂಡಾರ್ಹ ಅಪರಾಧ. ಆದರೆ ಈ ಮೂವರು ಆಸಕ್ತರ ಬಳಿ ಹೆಚ್ಚಿನ ಹಣಕ್ಕಾಗಿ ಗೂಬೆಯನ್ನು ಮಾರುತ್ತಿದ್ದರು ಎಂಬುದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದು ಬಂದಿದೆ. ಗೂಬೆಯನ್ನು ಮನೆಯಲ್ಲಿಟ್ಟು ಸಾಕಿದರೆ ಅದೃಷ್ಟ ಖುಲಾಯಿಸುತ್ತದೆ ಎಂದು ಆರೋಪಿಗಳು ಖರೀದಿ ಮಾಡುವವರ ಮನವೊಲಿಸಲು ಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ. ಮೊಕದ್ದಮೆ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications