ಮೈಸೂರಿನಲ್ಲಿ ರಾಯರ ಆರಾಧನೆ, ಭಕ್ತರಿಗೆ ತುಳಸಿ ಸಸಿ ವಿತರಣೆ
ಮೈಸೂರು, ಆಗಸ್ಟ್ 9 : ನಗರದಲ್ಲಿ ರಾಯರ 346ನೇ ಆರಾಧನೆ ಮಹೋತ್ಸವವನ್ನು ವಿಜೃಂಭಣೆ ಹಾಗೂ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತಿದೆ.
ರಾಘವೇಂದ್ರ ಸ್ವಾಮಿಗಳು ಸಶರೀರರಾಗಿ ವೃಂದಾವನಸ್ಥರಾಗಿ 346 ವರ್ಷಗಳು ಕಳೆದಿವೆ. ಆ ಸ್ಮರಣೆ ಪ್ರಯುಕ್ತ ಬುಧವಾರ ಮಧ್ಯಾರಾಧನೆ ನಡೆಯಿತು. ಅರ್ಚಕರು ರಾಯರ ವೃಂದಾವನಕ್ಕೆ ವಿಶೇಷ ಅಭಿಷೇಕ ಮಾಡಿದರು. ತುಪ್ಪ, ಹಾಲು, ಜೇನುತುಪ್ಪ, ಮೊಸರು, ಸಕ್ಕರೆ ಹಾಗೂ ಒಣ ಹಣ್ಣುಗಳಿಂದ ಅಭಿಷೇಕ ಮಾಡಲಾಯಿತು.

ಮಧ್ಯಾರಾಧನೆ ಅಂಗವಾಗಿ ಸುಪ್ರಭಾತ, ತುಳಸಿ ಅರ್ಚನೆ, ಕನಕಾಭಿಷೇಕ, ನೈವೇದ್ಯ, ಮಹಾಮಂಗಳಾರತಿ ಜತೆಗೆ ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಭಕ್ತರಿಗೆ ತೀರ್ಥ ಪ್ರಸಾದ ಕೂಡ ನೀಡಲಾಯಿತು. ಗುರುರಾಜರಿಗೆ ಪಾದಪೂಜೆ ಕೂಡ ನಡೆಲಾಯಿತು.
4 ಸಾವಿರಕ್ಕೂ ಅಧಿಕ ಮಂದಿಗೆ ಪ್ರತಿ ವರುಷವೂ ಪ್ರಸಾದವನ್ನು ನೀಡುವುದು ಇಲ್ಲಿನ ವಿಶೇಷ. ಸಂಜೆ ಸ್ವಸ್ತಿ ವಾಚನ, ಮಹಾಮಂಗಳಾರತಿ, ಸಾಮೂಹಿಕ ಪ್ರಾರ್ಥನೆ ಕೂಡ ನಿಗದಿಯಾಗಿದೆ.

ಭಜನೆ, ಕೀರ್ತನೆ, ದಾಸರಪದಗಳ ಹಾಡುಗಾರಿಕೆ ಹೀಗೆ ವಿವಿಧ ಬಗೆಯಿಂದ ರಾಯರ ಸೇವೆಯನ್ನು ಭಕ್ತರು ಮಾಡಿದರು. ಇನ್ನು ಮಂದಿರದ ಪ್ರಾಂಗಣದ ಸುತ್ತ ಪಲ್ಲಕ್ಕಿ ಉತ್ಸವ ನಡೆಯಿತು.
ಇನ್ನು ಆರಾಧನೆ ಅಂಗವಾಗಿ ಭಕ್ತಾದಿಗಳಿಗೆ ತುಳಸಿ ಸಸಿಗಳನ್ನು ವಿತರಿಸಲಾಯಿತು. ಡೆಂಗ್ಯೂ ನಿಯಂತ್ರಣಕ್ಕೆ ತುಳಸಿಯ ಎಲೆಗಳು ಮದ್ದಾಗಿರುವ ಕುರಿತು ಅರಿವು ಸಂಸ್ಥೆಯ ಸದಸ್ಯರು ಜನಜಾಗೃತಿ ಮೂಡಿಸಿದರು. ರಾಘವೇಂದ್ರಸ್ವಾಮಿಯ ಮಠವನ್ನು ಹೂವಿನಿಂದ ಸಿಂಗರಿಸಲಾಗಿತ್ತು.












Click it and Unblock the Notifications