ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿಯಿಂದ ನ.9ರಂದು ರಾಜ್ಯದಾದ್ಯಂತ ಪ್ರತಿಭಟನೆ
ಮೈಸೂರು, ನವೆಂಬರ್. 07: ರಾಜ್ಯ ಸರ್ಕಾರವು ಆಚರಿಸಲು ಹೊರಟಿರುವ ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ವತಿಯಿಂದ ನ. 9ರಂದು ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಶಾಸಕ ಆರ್.ಅಶೋಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು, ಮಂಡ್ಯ, ಬೆಂಗಳೂರಿನಲ್ಲಿ ವಿಶೇಷವಾಗಿ ಪ್ರತಿಭಟನೆ ನಡೆಯಲಿದೆ. ಜಯಂತಿ ನಡೆಯುವ ದಿನದಂದು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಟಿಪ್ಪು ಜಯಂತಿ ಆಚರಿಸಿದರೆ ಮೈಸೂರು ರಾಜವಂಶಸ್ಥರು, ಚಿತ್ರದುರ್ಗದ ಮದಕರಿ ನಾಯಕ, ಒನಕೆ ಓಬವ್ವ, ಕೊಡಗಿನ ಹುತಾತ್ಮರಿಗೆ ಅವಮಾನ ಮಾಡಿದಂತಾಗುತ್ತದೆ. ಇದರಿಂದ ಮತಾಂಧ, ಜಿಹಾದಿಗಳಿಗೆ ಮಾತ್ರ ಖುಷಿಯಾಗುತ್ತದೆ. ಜಯಂತಿ ಮಾಡಲೇಬೇಕು ಎನ್ನುವುದಾದರೆ ಶಿಶುನಾಳ ಶರೀಫರ ಜಯಂತಿ ಆಚರಿಸಲಿ ಎಂದು ಆಗ್ರಹಿಸಿದರು.

ಟಿಪ್ಪು ಕನ್ನಡದ ವಿರೋಧಿಯಾಗಿದ್ದ. ಅವನ ಆಡಳಿತ ಅವಧಿಯಲ್ಲಿ ಪರ್ಷಿಯನ್ ಭಾಷೆಯನ್ನು ಅಳವಡಿಸಿದ್ದ. ಕನ್ನಡ ಭವನಗಳಲ್ಲಿ ಟಿಪ್ಪು ಜಯಂತಿ ಆಚರಿಸಿದರೆ ಕನ್ನಡಿಗರಿಗೂ ಅವಮಾನ ಮಾಡಿದಂತಾಗುತ್ತದೆ. ಕನ್ನಡ ವಿರೋಧಿಯ ಜಯಂತಿಯನ್ನು ಕನ್ನಡಿಗರ ತೆರಿಗೆ ಹಣದಲ್ಲಿ ಏಕೆ ನಡೆಸಬೇಕು? ಇದೇ ಕಾರಣಕ್ಕೆ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಧೈರ್ಯವಿದ್ದಲ್ಲಿ ನಮ್ಮನ್ನು ಸರ್ಕಾರ ಬಂಧಿಸಲಿ ಎಂದು ಸವಾಲು ಹಾಕಿದರು.
ಜಯಂತಿಯ ಹಿಂದೆ ಕೋಮುಗಲಭೆಯ ಪಿತೂರಿ ಅಡಗಿದೆ. ಕಳೆದ ವರ್ಷ ಪಿಎಫ್ ಐ, ಕೆಎಫ್ ಡಿ ಸಂಘಟನೆಗಳು ಗಲಭೆ ನಡೆಸಿದ್ದವು. ಈ ವರ್ಷವೂ ಕೇರಳದಿಂದ ತಂಡಗಳಲ್ಲಿ ಬಂದು ಗಲಭೆ ನಡೆಸುವ ಸುಳಿವು ಸಿಕ್ಕಿದೆ. ಜಯಂತಿಯ ದಿನದಂದು ನಡೆಯುವ ಗಲಭೆಗೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹಿಂದಿನ ವರ್ಷ ಟಿಪ್ಪು ಜಯಂತಿ ವಿಚಾರವಾಗಿ ತಟಸ್ಥ ಧೋರಣೆ ಹೊಂದಿದ್ದ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿಯಾದ ಮೇಲೆ ಹಸ್ತದ ಕಡೆಗೆ ವಾಲಿದ್ದಾರೆ ಎಂದು ವ್ಯಂಗ್ಯವಾಡಿದರು.ಬೆಂಗಳೂರಿನಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಕುರಿತು ಚಿಂತನೆ ನಡೆದಿದೆ. ರಾಮನ ಆದರ್ಶ ಸಾರುವುದು ನಮ್ಮ ಉದ್ದೇಶ ಎಂದು ತಿಳಿಸಿದರು.











Click it and Unblock the Notifications