ಕರ್ನಾಟಕದಲ್ಲಿ ಎಗ್ಗುಸಿಗ್ಗಿಲ್ಲದೆ ರಹಸ್ಯಮಯವಾಗಿ ನಡೆಯುತ್ತಿದೆ ವೇಶ್ಯಾವಾಟಿಕೆ
ಮೈಸೂರು, ಅಕ್ಟೋಬರ್ 27 : ಮೈಸೂರು ಸೇರಿದಂತೆ ಸುತ್ತಲಿನ ಜಿಲ್ಲೆಗಳು ಮತ್ತು ರಾಜ್ಯದ ಹಲವೆಡೆ ಲಾಡ್ಜ್, ಹೋಟೆಲ್, ಪಾರ್ಲರ್, ರೆಸಾರ್ಟ್, ಹೋಂ ಸ್ಟೇಗಳಲ್ಲಿ ರಹಸ್ಯ ಕೊಠಡಿಗಳನ್ನು ನಿರ್ಮಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವುದು, ಸರಕಾರದ ಕಣ್ಣಿಗೆ ಮಣ್ಣೆರಚುತ್ತಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗವು ದಂಧೆಕೋರರ ವಿರುದ್ಧ ಕ್ರಮ ಕೈಗೊಂಡು ಆರು ವಾರಗಳಲ್ಲಿ ಜಿಲ್ಲಾವಾರು ವರದಿ ಸಲ್ಲಿಸುವಂತೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಿದೆ.
ಪೊಲೀಸರು ಚಾಪೆಯ ಕೆಳಗೆ ನುಸುಳಿದರೆ, ಅಕ್ರಮ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವವರು ಅನಾಮತ್ತಾಗಿ ರಂಗೋಲಿಯ ಕೆಳಗೆ ತೆವಳುತ್ತಿದ್ದಾರೆ. ಪೊಲೀಸರಿಗೆ ಸುಳಿವು ಕೂಡ ಬಾರದಂತೆ, ಅತ್ಯಂತ ರಹಸ್ಯಮಯವಾಗಿ, ಅತ್ಯಂತ ಜಾಣ್ಮೆಯಿಂದ ನಿರ್ಮಿಸಲಾದ ಒಳವಿನ್ಯಾಸವುಳ್ಳ ಕಟ್ಟಡಗಳಲ್ಲಿ ವೇಶ್ಯಾವಾಟಿಕೆಗಳು ನಡೆಯುತ್ತಿವೆ.
ಈ ದಂಧೆಯನ್ನು ತಡೆಗಟ್ಟುವುದು ಕೇವಲ ಪೊಲೀಸ್ ಇಲಾಖೆಯ ಜವಾಬ್ದಾರಿ ಅಷ್ಟೇ ಅಲ್ಲ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಂಘಟಿತ ಜವಾಬ್ದಾರಿಯಾಗಿದೆ. ಇದರ ಹಿಂದೆ ಕೆಲ ಪ್ರಮುಖ ವ್ಯಕ್ತಿಗಳ ಕೈವಾಡವೂ ಇರುವುದು ರಹಸ್ಯವಾಗೇನೂ ಉಳಿದಿಲ್ಲ.

ಹೋಟೆಲ್, ಲಾಡ್ಜ್, ರೆಸಾರ್ಟ್ ಮೇಲೆ ಕಣ್ಣಿಡಿ!
ಈ ಕುರಿತು ರಾಜ್ಯ ಮಾನವ ಹಕ್ಕುಗಳ ಆಯೋಗವು ಆದೇಶ ಪತ್ರವನ್ನು ಪೊಲೀಸ್ ಮಹಾನಿರ್ದೇಶಕರಿಗೆ ರವಾನಿಸಿದ್ದು, ಅದರಲ್ಲಿ ಪ್ರಕರಣದ ಗಂಭೀರತೆಯನ್ನು ವಿವರಿಸಿದೆ. ಮೈಸೂರು ನಗರ ಸೇರಿದಂತೆ ರಾಜ್ಯದ ಪ್ರಮುಖ ನಗರಗಳು ಹಾಗೂ ಪಟ್ಟಣಗಳಲ್ಲಿನ ಅನೇಕ ಪ್ರವಾಸಿ ತಾಣಗಳು, ಹೋಟೆಲ್ಗಳು, ಲಾಡ್ಜ್ಗಳು, ರೆಸಾರ್ಟ್ಗಳು, ಮಸಾಜ್ ಕೇಂದ್ರಗಳು ಹಾಗೂ ಹೋಂ ಸ್ಟೇಗಳಲ್ಲಿ ಅಕ್ರಮವಾಗಿ ಕಟ್ಟಡಗಳ ಒಳವಿನ್ಯಾಸವನ್ನು ಮಾರ್ಪಡಿಸಿಕೊಂಡು ವೇಶ್ಯಾವಾಟಿಕೆ ಹಾಗೂ ಇನ್ನಿತರ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವ ಕುರಿತು ದೂರುಗಳಿದ್ದು, ಈ ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಬೆಳಕಿಗೆ ಬಂದ ರಹಸ್ಯ ಕೊಠಡಿಗಳು
ಆಯೋಗ ಪೊಲೀಸ್ ಇಲಾಖೆಗೆ ಆದೇಶ ಮಾಡಿರುವುದನ್ನು ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯು ಸ್ವಾಗತಿಸಿದ್ದು, ಈ ಕುರಿತು ಮಾತನಾಡಿರುವ ಮುಖ್ಯಸ್ಥರಾದ ಸ್ಟ್ಯಾನ್ಲಿ ಮತ್ತು ಪರಶು ಅವರು, ತಮ್ಮ ಇಪ್ಪತ್ತೊಂಬತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಪೊಲೀಸರ ಸಹಯೋಗದೊಂದಿಗೆ 300ಕ್ಕೂ ಅಧಿಕ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಹತ್ತು-ಹಲವು ಹೋಟೆಲ್, ಲಾಡ್ಜ್ ಹಾಗೂ ರೆಸಾರ್ಟ್ಗಳಲ್ಲಿ ಶೌಚಾಲಯಗಳ ಗೋಡೆಗಳನ್ನು ಕೊರೆದು ಅವುಗಳಿಗೆ ಬಲವಾದ ಕಾಂಕ್ರೀಟ್ ಬಾಗಿಲುಗಳನ್ನು ನಿರ್ಮಿಸಿ, ಗೋಡೆಗಳ ಉಳಿದ ಭಾಗಗಳಿಗೆ ಹೊಂದಿಕೆಯಾಗುವ ಟೈಲ್ಸ್ಗಳನ್ನು ಅಂಟಿಸಿ ರಹಸ್ಯ ಅಡಗುದಾಣಗಳನ್ನು ನಿರ್ಮಿಸಲಾಗಿದೆ. ಅವುಗಳೊಳಗೆ ಯುವತಿಯರನ್ನು ಬಚ್ಚಿಡಲಾಗುತ್ತಿದ್ದ ಸಂಗತಿಯನ್ನು ಮತ್ತು ಕೆಲವಡೆ ಟಿ.ವಿ ಸ್ಟ್ಯಾಂಡ್ನ ಒಳಭಾಗ, ಶೋಕೇಸ್ಗಳ ಮಧ್ಯಭಾಗ, ನೀರಿನ ತೊಟ್ಟಿ ಹಾಗೂ ಚರಂಡಿಗಳ ಒಳ ಹಾಗೂ ತಳ ಭಾಗ ಮತ್ತಿತ್ತರ ಊಹಿಸಲು ಅಸಾಧ್ಯವಾದ ಸ್ಥಳಗಳಲ್ಲಿ, ಗುರುತಿಸಲಾಸಾಧ್ಯವಾಗುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದ್ದ ಹಲವಾರು ಅಡಗುದಾಣಗಳನ್ನು ಭೇದಿಸಿತ್ತು.

ದಾಳಿ ವೇಳೆ ಪೊಲೀಸರೇ ಬೆಚ್ಚಿ ಬಿದ್ದಿದ್ದರು
ಹಲವು ವರ್ಷಗಳ ಅನುಭವವಿರುವ ಪೊಲೀಸರೂ ಸಹ ಈ ಸುರಂಗಸದೃಶ್ಯ ಅಡಗುದಾಣಗಳನ್ನು ಮೊದಲ ಬಾರಿಗೆ ನೋಡಿ ದಿಗ್ಬ್ರಾಂತರಾದ ನಿದರ್ಶನಗಳಿದ್ದವು. ಇಂತಹ ಅನೇಕ ಲಾಡ್ಜ್ಗಳ ಪಕ್ಕದಲ್ಲಿದ್ದ ಮದದಂಗಡಿ ಹಾಗೂ ಹೋಟೆಲ್ಗಳ ಶೌಚಾಲಯದ ಹಿಂಬದಿಯಿಂದ ವೇಶ್ಯಾವಾಟಿಕೆಯ ಅಡ್ಡೆಗಳ ಸುರುಳುಸುತ್ತಿನ ಕಬ್ಬಿಣದ ಮೆಟ್ಟಿಲುಗಳನ್ನು ದಾಳಿಯ ಸಂದರ್ಭದಲ್ಲಿ ಆರೋಪಿಗಳು ಪರಾರಿಯಾಗಲು ಅನುಕೂಲವಾಗುವಂತೆ ಅಳವಡಿಸಿಕೊಂಡಿದ್ದನ್ನು ಗ್ರಹಿಸಲಾಗಿತ್ತು.

ನುರಿತ ಮೇಸ್ತ್ರಿಗಳಿಂದ ಅಡಗುದಾಣ ನಿರ್ಮಾಣ
ಅನಾಮಧೇಯರ ಹೆಸರುಗಳಲ್ಲಿ ಈ ಲಾಡ್ಜ್ಗಳನ್ನು ನಡೆಸುವ ದಂಧೆಕೋರರು ಮೂಲ ಮಾಲೀಕರ ಗಮನಕ್ಕೆ ಬಾರದಂತೆ ಮುಂಬೈ, ಕಲ್ಕತ್ತಾ, ದೆಹಲಿಗಳಿಂದ ನುರಿತ ಮೇಸ್ತ್ರಿಗಳನ್ನು ಕರೆಸಿ, ಒಳವಿನ್ಯಾಸಗಳನ್ನು ಮಾರ್ಪಡಿಸಿ, ಅಡಗುದಾಣಗಳನ್ನು ನಿರ್ಮಿಸುತ್ತಿರುವ ಅಂಶವನ್ನು ಹಾಗೂ ಅನ್ಯಕ್ರಾಂತವಾಗದ ಕೃಷಿ ಭೂಮಿಯನ್ನು ಬಾಡಿಗೆ ಅಥವಾ ಭೋಗ್ಯಕ್ಕೆ ಪಡೆದು ಯಾವುದೇ ಪರವಾನಗಿ ಪಡೆಯದೇ ವಸತಿ ಗೃಹಗಳನ್ನು ನಿರ್ಮಿಸಿ ಅವ್ಯವಹಾರವನ್ನು ನಡೆಸುತ್ತಿದ್ದ ಅಂಶವನ್ನು ಒಡನಾಡಿಯ ಸಂಸ್ಥೆ ಮೂಲಕ ಆಯೋಗದ ಗಮನಕ್ಕೆ ತಂದಿತ್ತು.

ವೇಶ್ಯಾವಾಟಿಕೆಯನ್ನು ಶಾಶ್ವತವಾಗಿ ಮುಚ್ಚಬೇಕು
ದೇಶದ ಹಾಗೂ ಸ್ಥಳೀಯ ಕಾನೂನು ಚೌಕಟ್ಟಿಗೆ ಬಾರದೇ ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ, ಬೆಟ್ಟಿಂಗ್ ದಂಧೆ, ಮಟ್ಕಾದಂತಹ ಸಂಘಟಿತ ಅಪರಾಧ ಜಾಲಗಳ ಅಡ್ಡೆಗಳಾಗುತ್ತಿರುವ ಇಂಥಹ ಹೋಟೆಲ್, ಲಾಡ್ಜ್ ಹಾಗೂ ವಸತಿ ಕೇಂದ್ರಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಅವುಗಳ ರಹದಾರಿಯನ್ನು ಅಮಾನ್ಯಗೊಳಿಸಿ, ಸಾಮಾಜಿಕ ಆರೋಗ್ಯದ ಹಿತದೃಷ್ಟಿಯಿಂದ ಅವುಗಳನ್ನು ಶಾಶ್ವತವಾಗಿ ಮುಚ್ಚಿಸಬೇಕೆಂದು 'ಮಾನವ ಹಕ್ಕುಗಳ ಆಯೋಗ'ಕ್ಕೆ ಮನವಿ ಸಲ್ಲಿಸಿದ್ದನ್ನು ಅವರು ಸ್ಮರಿಸಿದ್ದಾರೆ.

ವೇಶ್ಯಾವಾಟಿಕೆ ದಂಧೆ ತಡೆಯುವುದು ಎಲ್ಲರ ಕರ್ತವ್ಯ
ರಾಜ್ಯ ಮಾನವ ಹಕ್ಕು ಆಯೋಗದ ಆದೇಶವನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರ ತನಿಖೆ ನಡೆಸಿ ವರದಿ ನೀಡುವುದರ ಜೊತೆಗೆ ಮುಂದಿನ ದಿನಗಳಲ್ಲಿ ಸೂಕ್ತ ನೀತಿಗಳನ್ನು ರೂಪಿಸಿ, ವೇಶ್ಯಾವಾಟಿಕೆ ಜಾಲಗಳ ವಿರುದ್ಧ ತೀಕ್ಷ್ಣ ಕ್ರಮ ಕೈಗೊಂಡಿದ್ದೇ ಆದಲ್ಲಿ ಮಾನವ ಸಾಗಾಣಿಕೆ, ಹಾಗೂ ವೇಶ್ಯಾವಾಟಿಕೆಗೆ ಕಡಿವಾಣ ಹಾಕಬಹುದೆಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.












Click it and Unblock the Notifications