ದಸರಾಕ್ಕೆ ಭರದ ಸಿದ್ಧತೆ: ಬರಲಿವೆ 10 ರಾಜ್ಯಗಳ ಸಾಂಸ್ಕೃತಿಕ ತಂಡ
ಮೈಸೂರು, ಸೆಪ್ಟೆಂಬರ್. 27: ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಸಿದ್ಧತೆಗಳು ಭರದಿಂದ ಸಾಗುತ್ತಿವೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲೊಂದಾದ ಅರಮನೆ ಆವರಣದಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಬಾರಿ ಅತ್ಯಂತ ಆಕರ್ಷಕ ಹಾಗೂ ಗುಣಮಟ್ಟದಿಂದ ಕೂಡಿರಬೇಕು ಎಂದು ಮುಖ್ಯಮಂತಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲಾವಿದರ ಆಯ್ಕೆಯತ್ತ ಗಮನಹರಿಸಿದ್ದಾರೆ.
ಈ ಬಾರಿ ಕಳೆದ 3 ವರ್ಷಗಳಲ್ಲಿ ಆಹ್ವಾನಿಸಲಾಗಿದ್ದ ಕಲಾವಿದರನ್ನು ಕೈಬಿಟ್ಟು, ಬೇರೆ ಖ್ಯಾತ ಕಲಾವಿದರನ್ನು ಆಹ್ವಾನಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಉಪಸಮಿತಿಯು ಈ ವರ್ಷದ ಅಂದಾಜು ವೆಚ್ಚವನ್ನು ಹೆಚ್ಚಿಸಿ 1.80 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದೆ.

ಅಂತಾರಾಷ್ಟ್ರೀಯ ಕಲಾವಿದರ ಆಯ್ಕೆ ಸಂಬಂಧ ಸಾಂಸ್ಕೃತಿಕ ಸಂಬಂಧಗಳ ಭಾರತೀಯ ಮಂಡಳಿ (ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್)ಗೆ ಹಾಗೂ ರಾಷ್ಟ್ರೀಯ ಕಲಾವಿದರ ಆಯ್ಕೆ ಕುರಿತು ತಂಜಾವೂರಿನಲ್ಲಿರುವ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರಕ್ಕೆ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಈ ಹಿನ್ನೆಲೆಯಲ್ಲಿ 10 ರಾಜ್ಯಗಳ ಸಾಂಸ್ಕೃತಿಕ ತಂಡವನ್ನು ದಸರಾಕ್ಕೆ ಕಳುಹಿಸಿಕೊಡಲಿದೆ. ಮೊದಲ ತಂಡದಲ್ಲಿ 5 ರಾಜ್ಯಗಳ ಕಲಾವಿದರ ತಂಡ ಬರಲಿದೆ. ಇವರ ಕಲಾ ಪ್ರದರ್ಶನದ ನಂತರ 2ನೇ ತಂಡದಲ್ಲಿ ಬೇರೆ 5 ರಾಜ್ಯಗಳ ಕಲಾ ತಂಡಗಳು ಭಾಗವಹಿಸಲಿವೆ.
ಅಲ್ಲದೆ 3 ಅಂತರಾಜ್ಯ ಶ್ರೇಷ್ಟ ಕಲಾ ತಂಡಗಳು ದಸರಾ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಈ ಬಾರಿ ಒಟ್ಟು 208 ತಂಡಗಳು ವಿವಿಧ ವೇದಿಕೆಗಳಲ್ಲಿ ಪ್ರದರ್ಶನ ನೀಡಲಿವೆ.
ಅರಮನೆ ಆವರಣದಲ್ಲಿ ಸಂಗೀತ, ನೃತ್ಯ, ಸುಗಮ ಸಂಗೀತ, ಜಾನಪದ ಸೇರಿದಂತೆ ಒಟ್ಟು 21 ಕಲಾ ತಂಡಗಳಿಗೆ, ಕಲಾಮಂದಿರದಲ್ಲಿ 36, ಜಗನ್ಮೋಹನ ಅರಮನೆಯಲ್ಲಿ 36, ಗಾನಭಾರತಿಯಲ್ಲಿ 36, ಪುರಭವನದಲ್ಲಿ 26, ಕಿರು ರಂಗಮಂದಿರದಲ್ಲಿ 18 ಹಾಗೂ ಚಿಕ್ಕ ಗಡಿಯಾರದ ಮುಂದಿನ ವೇದಿಕೆಯಲ್ಲಿ 36 ಕಲಾತಂಡಗಳಿಗೆ ಅವಕಾಶ ಕಲ್ಪಿಸುವುದು ಈ ಬಾರಿ ದಸರೆಯ ವಿಶೇಷ ಆಕರ್ಷಣೆಗಳಲ್ಲೊಂದು.












Click it and Unblock the Notifications