ದೇವೇಗೌಡರ ಕುಟುಂಬವನ್ನು ತರಾಟೆಗೆ ತೆಗೆದುಕೊಂಡ ಶಾಸಕ ಪ್ರೀತಂಗೌಡ
Recommended Video

ಮೈಸೂರು, ಮಾರ್ಚ್ 7 : ರಾಮನಗರದಲ್ಲಿ ಗಂಡ, ಚನ್ನಪಟ್ಟಣದಲ್ಲಿ ಹೆಂಡ್ತಿ, ಹಾಸನ ಅಣ್ಣನ ಮಗನಿಗೆ, ಇನ್ನು ಮಂಡ್ಯದಲ್ಲಿ ಮಗ ಅಂತೆ. ಅಬ್ಬಾ..ಕರ್ನಾಟಕ ಏನು ಇವರಪ್ಪನ ಮನೆ ಆಸ್ತಿನಾ? ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಕುಮಾರಸ್ವಾಮಿ ಕುಟುಂಬವನ್ನು ತರಾಟೆಗೆ ತೆಗೆದುಕೊಂಡರು.
ಮೈಸೂರಿ ಜೆಕೆ ಮೈದಾನದಲ್ಲಿ ನಡೆದ ಬಿಜೆಪಿ ಶಕ್ತಿ ಪ್ರದರ್ಶನದಲ್ಲಿ ಮಾತನಾಡಿದ ಅವರು, ಗೌಡರೇನು ದೇವೇಗೌಡರ ಕುಟುಂಬಕ್ಕೆ ಜಿಪಿಎ ಮಾಡಿಕೊಟ್ಟಿಲ್ಲ. ನಾವ್ಯಾರೂ ಸಹ ಬ್ರಾಂಡೆಡ್ ಲೇಬರ್ಸ್ ಅಲ್ಲ. ದೇವೇಗೌಡರ ಕುಟುಂಬಕ್ಕೆ ಓಟ್ ಹಾಕಿದರೆ ಅದು ಪ್ರೈವೇಟ್ ಪ್ರಾಪರ್ಟಿ ಇದ್ದ ಹಾಗೆ. ಬಿಜೆಪಿಗೆ ಓಟ್ ಹಾಕಿದರೇ ಅದು ದೇಶದ ಅಭಿವೃದ್ಧಿಗೆ ಪೂರಕ ಎಂದರು.
ಮೊದಲು ಮನೆಯ ಕುಟುಂಬಸ್ಥರು ಆಸ್ತಿ ಭಾಗ ಮಾಡುವಾಗ ಮೇಲ್ಗಡೆ ಗದ್ದೆ ನಿನಗೆ, ಕೆಳಗಡೆ ತೋಟ ತಮ್ಮನಿಗೆ ಅಂತ ಹಂಚುತ್ತಿದ್ದರು. ಇದೀಗ ದೇವೇಗೌಡರು ಕರ್ನಾಟಕದ ಕ್ಷೇತ್ರಗಳನ್ನು ಮಕ್ಕಳು, ಮೊಮ್ಮಕಳಿಗೆ ಹಂಚುತ್ತಾ ಬರುತ್ತಿದ್ದಾರೆ. ಗೌಡರು ಎಂಬ ಹೆಸರು ದೇವೇಗೌಡರ ಕುಟುಂಬಕ್ಕೆ ಸೀಮಿತವಾಗಿಲ್ಲ. ಸಂಸದ ಪ್ರತಾಪ್ ಸಿಂಹ, ನಾಗೇಂದ್ರ ಅವರು ಸಹ ಗೌಡರೇ ಅವರು ಬೇರೆ ದೇಶದಿಂದ ಬಂದಿಲ್ಲ. ಅವರು ಇಲ್ಲಿಯ ಗೌಡರೇ ಎಂದು ದೇವೇಗೌಡರ ಕುಟುಂಬದ ವಿರುದ್ಧ ಪ್ರೀತಂಗೌಡ ಹರಿಹಾಯ್ದರು.

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್, ಸಂಸತ್ತಿಗೆ ಕೈಹಿಡಿದುಕೊಂಡು ಹೋಗಲು ದೇವೇಗೌಡರು ತಮ್ಮ ಮೊಮ್ಮಕ್ಕಳನ್ನು ಸಜ್ಜು ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲೂ ನಿಮಗೆ ಚುನಾವಣೆ ಬೇಕಿತ್ತಾ? ದೇವೇಗೌಡರೇ ನಿಮಗೆ ನಾಚಿಕೆ ಆಗಲ್ವಾ? 90 ಆದರೂ ಪಾರ್ಲಿಮೆಂಟಿಗೆ ಹೋಗುತ್ತಾರೆ. ಪಾರ್ಲಿಮೆಂಟಿನಲ್ಲಿ ಈವರೆಗೂ ಅವರು ಮಾತನಾಡಿಲ್ಲ. ಹೋಗಿ ಕುಳಿತುಕೊಂಡು ಬರ್ತಾರೆ ಅಷ್ಟೇ. ಈ ವಯಸ್ಸಿನಲ್ಲಿ ನಿಮಗೆ ಚುನಾವಣೆ ಬೇಕಿತ್ತಾ ಎಂದು ಕಿಡಿಕಾರಿದರು.
ಮೈಸೂರು ಕೊಡಗು ಕ್ಷೇತ್ರಕ್ಕೆ ಯಾರಾದರೂ ಬರಲಿ, ಅದು ದೊಡ್ಡ ಗೌಡರಾದರೂ ಸರಿ, ಸಣ್ಣ ಗೌಡರಾದರೂ ಸರಿ, ಮರಿಗೌಡರಾದರೂ ಸರಿ ಅವರನ್ನು ಸೋಲಿಸಿ ಕಳುಹಿಸುತ್ತೇವೆ ಎಂದು ಇದೇ ವೇಳೆ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.












Click it and Unblock the Notifications