ವಿಡಿಯೋ: ನಡುರಸ್ತೆಯಲ್ಲಿ ಪ್ರತಾಪ್ ಸಿಂಹಗೆ ಸ್ವಪಕ್ಷದವರಿಂದಲೇ ಮಂಗಳಾರತಿ
Recommended Video
ಮೈಸೂರು, ಸೆಪ್ಟೆಂಬರ್ 13: ಮೈಸೂರು-ಕೊಡಗು ಸಂಸದ ಬಿಜೆಪಿಯ ಪ್ರತಾಪ್ ಸಿಂಹ ಅವರು ಇಂದು ಸ್ವಪಕ್ಷದವರಿಂದಲೇ ಬೈಸಿಕೊಳ್ಳಬೇಕಾಯಿತು. ಅದೂ ನಡು ರಸ್ತೆಯಲ್ಲಿ.
ಕೊಡಗು ಜಿಲ್ಲೆಯ ಹೆಬ್ಬೆಟ್ಟಗೆರಿಗೆ ಇಂದು ಕೇಂದ್ರದ ನೆರೆ ಅಧ್ಯಯನ ತಂಡ ಪರಿಶೀಲನೆ ಬಂದಿತ್ತು. ಆ ಅಧಿಕಾರಿಗಳಿಗೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಮಾಹಿತಿ ನೀಡುತ್ತಿದ್ದರು.
ಚಿತ್ರಗಳು : ಕೊಡಗಿನಲ್ಲಿ ಕೇಂದ್ರ ಅಧ್ಯಯನ ತಂಡದಿದ ನಷ್ಟ ಅಂದಾಜು
ಈ ಸಮಯದಲ್ಲಿ ಅಲ್ಲೇ ಇದ್ದ ದೇವಯ್ಯ ಎಂಬ ಬಿಜೆಪಿ ಮುಖಂಡ ಏಕಾಏಕಿ ಪ್ರತಾಪ್ ಸಿಂಹ ಅವರ ಮೇಲೆ ಸಿಟ್ಟಾಗಿ 'ನಿಮ್ಮನ್ನು ಸಂಸದರಾಗಿ ಮಾಡಿದ್ದು ನಮ್ಮ ತಪ್ಪು' ಎಂದು ತರಾಟೆಗೆ ತೆಗೆದುಕೊಂಡರು. ಪ್ರತಾಪ್ ಸಿಂಹ ಅವರು ಅಧಿಕಾರಿಗಳಿಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂಬುದೇ ದೇವಯ್ಯ ಅವರ ಸಿಟ್ಟಿಗೆ ಕಾರಣ.
ದೇವಯ್ಯ ಅವರನ್ನು ಸಮಾಧಾನ ಪಡಿಸಲು ಪ್ರತಾಪ್ ಸಿಂಹ ಯತ್ನಿಸಿದರಾದರೂ ದೇವಯ್ಯ ತಣ್ಣಗಾಗಲಿಲ್ಲ. 'ನಿಮ್ಮಂತಹವರಿಂದಲೇ ಪಕ್ಷ ಹಾಳಾಗುತ್ತಿರುವುದು, ಮೊದಲು ನಮ್ಮ ಜೊತೆ ಚರ್ಚೆ ಮಾಡಿ ಆ ನಂತರ ಮಾಹಿತಿ ನೀಡಬೇಕು, ನಿಮ್ಮಂತವರಿಂದ ಪಕ್ಷ ಉದ್ಧಾರವಾಗಲ್ಲ' ಎಂದು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡರು.
ಮೈಸೂರಿಗೆ ಏನೇನು ತಂದಿದ್ದೀನಿ ನೋಡಿ: ಪ್ರತಾಪ್ ಸಿಂಹ ರಿಪೋರ್ಟ್ ಕಾರ್ಡ್
ಜಮೀನೊಂದು ಖಾಸಗಿ ಸಂಸ್ಥೆಗೆ ಭೂ ಪರಿವರ್ತನೆ ಎಂದು ಪ್ರತಾಪ್ ಸಿಂಹ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅದು ಸಂಪೂರ್ಣ ತಪ್ಪು, ಪ್ರತಾಪ್ ಸಿಂಹ ಜನರನ್ನು ಒಕ್ಕಲೆಬ್ಬಿಸುವ ಯತ್ನ ಮಾಡುತ್ತಿದ್ದಾರೆ. ಆ ನಂತರ ದೇವಯ್ಯ ಅವರು ಮಾಧ್ಯಮಗಳ ಜೊತೆ ಮಾತನಾಡಿ ಹೇಳಿದ್ದಾರೆ.
ಈ ಮುಂಚೆ ಇದೇ ದೇವಯ್ಯ ಅವರು ಬಿಜೆಪಿ ಶಾಸಕರಾದ ಅಪ್ಪಚ್ಚು ರಂಜನ್, ಬೋಪಯ್ಯ ಅವರ ವಿರುದ್ಧವೂ ಹರಿಹಾಯ್ದಿದ್ದರು ಎನ್ನಲಾಗಿದೆ.