ಪ್ರತಾಪ್ ಸಿಂಹಗೆ ಏಕವಚನದಲ್ಲೇ ಕ್ಲಾಸ್ ತೆಗೆದುಕೊಂಡ ಸಿದ್ದರಾಮಯ್ಯ
Recommended Video

ಮೈಸೂರು, ಮಾರ್ಚ್ 15:ಯಾರ್ರೀ ಪ್ರತಾಪ್ ಸಿಂಹ ? ಮೈಸೂರಿನ ಪ್ರತಾಪ್ ಸಿಂಹ ಏನು ಕೊಡುಗೆ ಕೊಟ್ಟಿದ್ದಾನೆ? ಈ ಹಿಂದೆ ನಾನು, ಮಹದೇವಪ್ಪ ಬೆಂಗಳೂರು - ಮೈಸೂರು ರಸ್ತೆ ಅಭಿವೃದ್ಧಿ ಪಡಿಸುವಾಗ ಅವನು ಎಲ್ಲಿದ್ದ?.ನಾವು ಮಾಡಿದ ಕೆಲಸವನ್ನು ತಾನು ಮಾಡಿದ್ದು ಎಂದು ಹೇಳಿ ತಿರುಗುತ್ತಿದ್ದಾನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಾಪ್ ಸಿಂಹ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಮಾತ್ರವಲ್ಲ, ಬಿಜೆಪಿ ಯಾವ ಸಂಸದರು ಯಾವ ಕೆಲಸವನ್ನು ಮಾಡಿಲ್ಲ. ಏನು ಮಾಡದೆ ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನಮ್ಮ ಧೃವನಾರಾಯಣ್ ಜೊತೆಗೆ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಯವರು ಚರ್ಚೆಗೆ ಬರುತ್ತಾರಾ? ಶೋಭ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಬರುತ್ತಾರಾ? ಎಂದು ಚರ್ಚೆಗೆ ಆಹ್ವಾನಿಸಿದರು.
ದೇಶದ ರಕ್ಷಣೆ ವಿಚಾರದಲ್ಲಿ ಕಾಂಗ್ರೆಸ್ ಎಂದು ರಾಜಕಾರಣ ಬಳಸಿಕೊಂಡಿಲ್ಲ. ಬಿಜೆಪಿಯವರು ಬಡತನ, ನಿರುದ್ಯೋಗ, ರೈತರ ಸಮಸ್ಯೆಯಂತ ವಿಚಾರಗಳ ಮೇಲೆ ಚುನಾವಣೆ ಎದುರಿಸಲ್ಲ. ಅವರು ಏನಿದ್ದರೂ ಭಾವನಾತ್ಮಕ ವಿಚಾರ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಈ ಬಾರಿ ಅವರು ಯಾವ ಅಭಿವೃದ್ಧಿಯನ್ನು ಮಾಡಿಲ್ಲ. ಹೀಗಾಗಿ ಈ ವಿಚಾರ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಸರ್ಜಿಕಲ್ ಸ್ಟ್ರೈಕ್ ನಿಂದ ತಮಗೆ ಲಾಭವಾಗಿದೆ ಎಂದು ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ. ಆದರೆ ಸರ್ಜಿಕಲ್ ಸ್ಟ್ರೈಕ್ ಮುಂಚೆ ಮೋದಿ ವರ್ಚಸ್ಸು ಬಿದ್ದು ಹೋಗಿತ್ತಾ? ಎಂದು ಸಿದ್ದರಾಮಯ್ಯ ಟೀಕಿಸಿದರು.

ಈ ಬಗ್ಗೆ ಮಾತನಾಡುವುದಿಲ್ಲ
ಮಂಡ್ಯದಿಂದ ಸುಮಲತಾ ಸ್ಪರ್ಧೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಈ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಪಾರ್ಟಿಯಿಂದ ಅವರು ನಿಲ್ಲುವುದಿಲ್ಲ. ಹಾಗಾಗಿ ಅವರ ಬಗ್ಗೆ ಮಾತನಾಡಲ್ಲ. ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿದ್ದೇವೆ. ಉಳಿದದ್ದು ಅವರಿಗೆ ಬಿಟ್ಟದ್ದು ಎಂದರು.

ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ
ನಿಖಿಲ್ ಜೆಡಿಎಸ್ ಅಭ್ಯರ್ಥಿ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕ್ಷೇತ್ರವನ್ನು ಅವರಿಗೆ ಬಿಟ್ಟಾಗಿದೆ. ಜೆಡಿಎಸ್ ಯಾರನ್ನು ಬೇಕಾದರೂ ಕ್ಯಾಂಡಿಡೇಟ್ ಅಂತ ಹೇಳಲಿ. ನಾನು ಮಂಡ್ಯ ಮಾತ್ರವಲ್ಲ, 28 ಕ್ಷೇತ್ರದಲ್ಲೂ ಪ್ರವಾಸ ಮಾಡುತ್ತೇನೆ. ಎಲ್ಲಾ ಕಡೆ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.

ನಮ್ಮಲ್ಲಿ ಯಾವುದೇ ಬಿರುಕಿಲ್ಲ
ನಾವು 20 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದ ಸಿದ್ದರಾಮಯ್ಯ, ನಮ್ಮಲ್ಲಿ ಯಾವುದೇ ಬಿರುಕಿಲ್ಲ. ಹಾಗೆಯೇ ಎ.ಮಂಜು ಪಕ್ಷ ಬಿಡುವುದಿಲ್ಲ. ನಾನು ಅವರ ಜತೆ ಮಾತನಾಡಿದ್ದೇನೆ. ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಹ ನಮ್ಮ ಜತೆಯಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಒಂದೇ ಬಾರಿ ಬಿಡುಗಡೆಯಾಗಲಿದೆ
ಈ ಬಾರಿ ಲೋಕಸಭಾ ಚುನಾವಣೆಗೆ ಒಂದೇ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಒಂದು, ಎರಡು ಎಂದು ಪಟ್ಟಿ ಬಿಡುಗಡೆ ಆಗೋದಿಲ್ಲ. ಒಂದೇ ಬಾರಿ 20 ಕ್ಷೇತ್ರದ ಪಟ್ಟಿ ಬಿಡುಗಡೆ ಆಗಲಿದೆ ಎಂದರು.












Click it and Unblock the Notifications