ಟಿಪ್ಪು ನಮ್ಮ ಕುಟುಂಬಕ್ಕೆ ಸಾಕಷ್ಟು ತೊಂದರೆ ನೀಡಿದ್ದ:ಪ್ರಮೋದಾ ದೇವಿ ಒಡೆಯರ್
Recommended Video

ಮೈಸೂರು, ನವೆಂಬರ್. 15: ಟಿಪ್ಪುವಿನಿಂದ ನಮ್ಮ ರಾಜಮನೆತನಕ್ಕೆ ದೊಡ್ಡ ಹಾನಿಯಾಗಿದೆ. ನಮ್ಮ ಕುಟುಂಬ, ಪರಿವಾರಕ್ಕೆ ಟಿಪ್ಪು ಸುಲ್ತಾನ್ ಸಾಕಷ್ಟು ತೊಂದರೆ ನೀಡಿದ್ದ. ಹೀಗಾಗಿ ನಾನು ವೈಯಕ್ತಿಕವಾಗಿ ಟಿಪ್ಪು ಜಯಂತಿಯನ್ನು ವಿರೋಧಿಸುತ್ತೇನೆ ಎಂದು ಮೈಸೂರಿನ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಹೇಳಿದರು.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರ ಏಕೆ ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ? ಇದರ ಹಿಂದಿನ ಉದ್ದೇಶವೇನೆಂಬುದು ನಮಗೆ ತಿಳಿಯುತ್ತಿಲ್ಲ. ಇದಕ್ಕೆ ನಮ್ಮ ಬೆಂಬಲವೂ ಇಲ್ಲ ಎಂದಿದ್ದಾರೆ.
ದೀಪಾವಳಿಯ ದಿನದಂದೇ ಮೇಲುಕೋಟೆಯ ಅಯ್ಯಂಗಾರ್ ಸಮುದಾಯದ ಮೇಲೆ ಸಾಮೂಹಿಕ ನರಮೇಧ ನಡೆಸಿದ್ದ ಟಿಪ್ಪು, ಮುಮ್ಮಡಿ ಚಿಕ್ಕರಾಜ ಒಡೆಯರ್ ಕಾಲದಲ್ಲಿ ರಾಜಮನೆತನದವರನ್ನು ಬಂಧನದಲ್ಲಿರಿಸಿದ್ದನು.
ಇಷ್ಟೆಲ್ಲಾ ಮಾಡಿದ್ದರೂ ನಮ್ಮ ಹಿರಿಯರ ಮಾತಿನಂತೆ ನೋವುಂಟು ಮಾಡಿದವರ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ. ಟಿಪ್ಪುವಿನ ವಿರುದ್ಧ ನಾನು ಹೇಳಿಕೆ ನೀಡಲಾರೆ ಎಂದು ತಿಳಿಸಿದ್ದಾರೆ.

ಸರ್ಕಾರವನ್ನು ಪ್ರಶ್ನಿಸಲಾರೆ
ನಾನು ಈ ದೇಶದ ನಾಗರೀಕಳಾಗಿದ್ದು, ಟಿಪ್ಪು ಜಯಂತಿಯ ವಿಚಾರದಲ್ಲಿ ಸರ್ಕಾರವನ್ನು ಪ್ರಶ್ನಿಸಲಾರೆ. ಇದು ಅವರಿಗೆ ಬಿಟ್ಟ ವಿಚಾರ. ಈ ಕುರಿತು ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ಪ್ರಮೋದಾ ದೇವಿ ತಿಳಿಸಿದ್ದಾರೆ.

ರಾಜಕೀಯಕ್ಕೆ ಇಳಿಯುವುದಿಲ್ಲ
ಇನ್ನು ರಾಜಕೀಯ ಪ್ರವೇಶದ ಕುರಿತಂತೆ ಮಾತನಾಡಿದ ಪ್ರಮೋದಾದೇವಿ, ತಾವೆಂದೂ ರಾಜಕೀಯಕ್ಕೆ ಪ್ರವೇಶಿಸಲ್ಲ. ಜನಸೇವೆ ಮಾಡಲು ರಾಜಕಾರಣಕ್ಕೆ ಸೇರ್ಪಡೆಯಾಗುವುದು ಅನಿವಾರ್ಯವಲ್ಲ. ಪುತ್ರ ಯದುವೀರ್ ಸಹ ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯಕ್ಕೆ ಇಳಿಯುವುದಿಲ್ಲ. ಮುಂದೆ ಅವರೇನಾದರೂ ಮನಸ್ಸು ಬದಲಿಸಿದರೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಧಾರ್ಮಿಕ ನಂಬಿಕೆಯನ್ನು ಅಲ್ಲಗೆಳೆಯಲಾಗದು
ಶಬರಿಮಲೆಗೆ ಮಹಿಳೆಯರ ಪ್ರವೇಶ ಸಂಬಂಧ ವಿಚಾರವಾಗಿ ಮಾತನಾಡಿದ ಪ್ರಮೋದಾ ದೇವಿ ಕಾನೂನು ಪ್ರಕಾರ ಎಲ್ಲರಿಗೂ ಸಮಾನ ಹಕ್ಕಿದೆ. ಮಹಿಳೆಯರು ದೇವಾಲಯ ಪ್ರವೇಶ ಮಾಡುವುದು ಅಪರಾಧವಲ್ಲ. ಆದರೆ ಧಾರ್ಮಿಕ ನಂಬಿಕೆಯನ್ನು ಅಲ್ಲಗೆಳೆಯಲಾಗದು.

ಅವರವರ ಭಾವಕ್ಕೆ ಬಿಟ್ಟ ವಿಚಾರ
ನಮ್ಮ ಕುಟುಂಬದಲ್ಲಿ ಹಿಂದಿನವರ ಪರಂಪರೆಯನ್ನೇ ಪಾಲನೆ ಮಾಡುವುದು ನಡೆದುಕೊಂಡು ಬಂದಿದೆ. ಹೀಗಾಗಿ ನಾನು ಈ ಕುರಿತಂತೆ ಏನನ್ನೂ ಹೇಳಲಾರೆ. ದೇವಾಲಯಕ್ಕೆ ಹೋಗುವುದು, ಬಿಡುವುದು ಅವರವರ ಭಾವಕ್ಕೆ ಬಿಟ್ಟ ವಿಚಾರ ಎಂದು ಪ್ರಮೋದಾ ದೇವಿ ಒಡೆಯರ್ ತಿಳಿಸಿದ್ದಾರೆ.












Click it and Unblock the Notifications