ಉಡುಪಿ ಕಾಲೇಜಿನ ವಿಡಿಯೋ ಪ್ರಕರಣದ ಹಿಂದೆ ಇಸ್ಲಾಮಿಕ್ ಕೈವಾಡವಿದೆ-ಪ್ರಮೋದ್ ಮುತಾಲಿಕ್ ಆರೋಪ
ಮೈಸೂರು, ಆಗಸ್ಟ್ 02: ಉಡುಪಿ ಖಾಸಗಿ ಕಾಲೇಜಿನ ವಿಡಿಯೋ ಪ್ರಕರಣದ ಬಗ್ಗೆ ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಸಮಗ್ರವಾಗಿ ತನಿಖೆಯಾಗಲಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ವಿಡಿಯೋ ಪ್ರಕರಣದ ಹಿಂದೆ ಇಸ್ಲಾಮಿಕ್ ಕೈವಾಡವಿದೆ. ಈ ಪ್ರಕರಣದಲ್ಲಿ ಮಕ್ಕಳಿಂದ ಯಾಕೆ ತಪ್ಪೊಪ್ಪಿಗೆ ಪತ್ರ ಬರೆಸಿದ್ದಾರೆ. ಅಂದ ಮೇಲೆ ತಪ್ಪು ಮಾಡಿದ್ದಾರೆ ಎಂದು ಅಲ್ವಾ? ಎಂದು ಪ್ರಶ್ನಿಸಿದರು.

ಆರಂಭದಲ್ಲೇ ಪ್ರಕರಣ ದಾರಿ ತಪ್ಪಿಸುವ ಕೆಲಸ ಆಗಿತ್ತು. ಗೃಹ ಸಚಿವರ ಹೇಳಿಕೆ ನಾವು ಒಪ್ಪುವುದಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಆ ರೀತಿ ಹೇಳಬಾರದಿತ್ತು. ಎಷ್ಟು ವಿಡಿಯೋಗಳು ಅಫ್ಘಾನಿಸ್ಥಾನ, ಪಾಕಿಸ್ತಾನಕ್ಕೆ ಹೋಗಿದ್ದಾವೋ ಗೊತ್ತಿಲ್ಲ ಎಂದರು.
ಮುಸ್ಲಿಂ ಸಂಘಟನೆಗಳು ಹದ್ದು ಮೀರಿ ವರ್ತಿಸುತ್ತಿವೆ. ಪ್ರಪಂಚದಲ್ಲಿ ಎಲ್ಲಾದರೂ ಜ್ಞಾನವಾಪಿ ಹೆಸರಿನ ಮಸೀದಿ ಇದೆಯಾ? ಅಲ್ಲಿನ ಬಸವ ಸಂಪೂರ್ಣ ಮಸೀದಿ ಕಡೆಗೆ ಮುಖ ಮಾಡಿದೆ. ಅದು ದೇವಸ್ಥಾನ ಎನ್ನಲು ಸಾಕಷ್ಟು ದಾಖಲೆಗಳಿವೆ. ಹೀಗಾಗಿ ಮುಸ್ಲಿಮರು ಸೌಜನ್ಯದಿಂದ ಬಿಟ್ಟು ಕೊಡಬೇಕು ಎಂದು ಹೇಳಿದರು.
ರಾಮಮಂದಿರ ನಿರ್ಮಾಣದಲ್ಲಿ ಅಲ್ಪಸಂಖ್ಯಾತ ಗುತ್ತಿಗೆದಾರರನ್ನು ಕೈಬಿಡಿ
ಇನ್ನು ಅಯೋಧ್ಯೆ ರಾಮ ಮಂದಿರದಲ್ಲಿ ಅಲ್ಪಸಂಖ್ಯಾತರು ಕೆಲಸ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು, ಶ್ರೀ ರಾಮಚಂದ್ರನ ಜನ್ಮಸ್ಥಳ ಅಯೋಧ್ಯೆಯಲ್ಲಿ ಭವ್ಯವಾಗಿ ಮರು ನಿರ್ಮಾಣವಾಗುತ್ತಿರುವ ರಾಮ ಮಂದಿರದ ಕಟ್ಟಡದ ಕೆಲಸಕ್ಕೆ ನೇಮಿಸಿರುವ ಅಲ್ಪಸಂಖ್ಯಾತ ಗುತ್ತಿಗೆದಾರರು ಹಾಗೂ ಕೆಲಸಗಾರರನ್ನು ಕೈಬಿಡುವಂತೆ ಆಗ್ರಹಿಸಿದ್ದಾರೆ.
500 ವರ್ಷಗಳ ಹೋರಾಟದ ನಂತರ ಪವಿತ್ರ ಸ್ಥಳವನ್ನು ಪಡೆಯಲಾಗಿದೆ. ಪುನರ್ ನಿರ್ಮಾಣ ಕಾರ್ಯ ಆರಂಭವಾಗಿದೆ. ಗರ್ಭಗುಡಿ ನಿರ್ಮಾಣದ ಜವಾಬ್ದಾರಿಯನ್ನು ಅಲ್ಪಸಂಖ್ಯಾತ ಗುತ್ತಿಗೆದಾರರಿಗೆ ನೀಡಿ ಅಪವಿತ್ರಗೊಳಿಸಲಾಗಿದೆ. ಕೂಡಲೇ ಅವರನ್ನು ಕಾಮಗಾರಿಯಿಂದ ಕೈಬಿಡಬೇಕು ಎಂದು ಆಗ್ರಹಿಸಿದರು. ಅಲ್ಲದೇ ರಾಮ ಮಂದಿರ ನಿರ್ಮಾಣದಲ್ಲಿ ಅಲ್ಪಸಂಖ್ಯಾತ ಗುತ್ತಿಗೆದಾರರನ್ನು ಕೈ ಬಿಡುವಂತೆ ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ವಿಶ್ವಸ್ಥ ಮಂಡಳಿ ಸದಸ್ಯರಾಗಿರುವ ಉಡುಪಿ ಪೇಜಾವರ ಶ್ರೀಗಳಿಗೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮನವಿ ಪತ್ರ ಸಲ್ಲಿಸಿದ್ದಾರೆ.












Click it and Unblock the Notifications