ಮುರುಘಾ ಶ್ರೀ ಪ್ರಕರಣ ಬಯಲು ಮಾಡಿದ ಮೈಸೂರಿನ 'ಒಡನಾಡಿ' ಬಗ್ಗೆ ನಿಮಗೆಷ್ಟು ಗೊತ್ತು?
ಮೈಸೂರು, ಆಗಸ್ಟ್, 30: ಲೈಂಗಿಕ ಕಿರುಕುಳ ಅರೋಪ ಹಿನ್ನೆಲೆ ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಬೆಳಕಿಗೆ ಬರಲು ಮೈಸೂರಿನ ಒಡನಾಡಿ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ಹಾಗಾದರೆ ಒಡನಾಡಿ ಸಂಸ್ಥೆ ಎಲ್ಲಿದೆ? ಅದು ಬೆಳೆದು ಬಂದ ಹಾದಿ ಹೇಗಿದೆ? ಅದರ ಸೇವಾ ಕಾರ್ಯದ ಬಗ್ಗೆ ಇಲ್ಲಿದೆ ಮಾಹಿತಿ.
ಒಡನಾಡಿ ಸೇವಾ ಸಂಸ್ಥೆ ಒಂದು ಸಾಮಾಜಿಕ, ಸರ್ಕಾರೇತರ ಸಂಸ್ಥೆ. ಮೈಸೂರಿನ ಇಲವಾಲ ಹೋಬಳಿಯ ಬೋಗಾದಿ ರಸ್ತೆಯಲ್ಲಿ ಈ ಸಂಸ್ಥೆ ಇದೆ. ಲೈಂಗಿಕವಾಗಿ ಶೋಷಿಸಲ್ಪಟ್ಟ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸುವುದು, ಅವರಿಗೆ ಪುನರ್ವಸತಿ ಕಲ್ಪಿಸುವುದು, ಮಹಿಳೆಯರ ಸಬಲೀಕರಣ, ಇತ್ಯಾದಿ ಸಮಾಜಮುಖಿ ಕಾರ್ಯಗಳನ್ನು ಈ ಸಂಸ್ಥೆ ಮಾಡುತ್ತಿದೆ. ಈ ಸಂಸ್ಥೆಯನ್ನು 1989ರಲ್ಲಿ ಕೆ.ವಿ ಸ್ಟಾನ್ಲಿ ಮತ್ತು ಎಂ.ಎಲ್. ಪರಶುರಾಮ ಪ್ರಾರಂಭಿಸಿದರು. ಆದರೆ 1992ರಲ್ಲಿ ಅಧಿಕೃತ ಸಂಸ್ಥೆಯಾಗಿ ನೋಂದಾಯಿಸಲಾಯಿತು. ಒಡನಾಡಿಯ ಕಾರ್ಯಾಚರಣೆಗಳು ದಕ್ಷಿಣ ಭಾರತದೆಲ್ಲೆಡೆ ಹಬ್ಬಿದೆ. ಅವರ ಪುನರ್ವಸತಿ ಕೇಂದ್ರ ಕರ್ನಾಟಕ ರಾಜ್ಯದ ಮೈಸೂರು ನಗರದಲ್ಲಿದೆ.
ಮುರುಘಾ ಶ್ರೀಗಳ ಮೇಲೆ ಪೋಕ್ಸೋ ಪ್ರಕರಣ: ಮಕ್ಕಳ ಮೇಲೆ ಬಕಾಸುರನಂತೆ ಸರದಿಯಲ್ಲಿ ದೌರ್ಜನ್ಯ!
ಒಡನಾಡಿ ಸಂಸ್ಥೆಯ ಪ್ರಮುಖ ಪಾತ್ರಗಳು
ಸ್ಟಾನ್ಲಿ ಮತ್ತು ಪರಶು ಅವರು ಕನಸಿನ ಸಂಸ್ಥೆ ಒಡನಾಡಿ ಸಂಸ್ಥೆ ಆಗಿದೆ. ಇವರಿಬ್ಬರು ಸರ್ಕಾರದ ಸಂಪೂರ್ಣ ಸಾಕ್ಷರತೆ ಯೋಜನೆಯಲ್ಲಿ ಜಿಲ್ಲಾ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದರು. ಈ ಯೋಜನೆಯಲ್ಲಿ ಲೈಂಗಿಕ ಕಾರ್ಯಕರ್ತೆಯರು ಆಗಿದ್ದ ಮಹಿಳೆಯರನ್ನು ದೂರ ಇಡಲಾಗಿತ್ತು. ಆಗ ಒಡನಾಡಿ ಸಂಸ್ಥೆ ಕಟ್ಟಬೇಕೆಂಬ ಛಲ ಹುಟ್ಟಿಕೊಂಡಿತ್ತು. ಸ್ಟಾನ್ಲಿ ಮತ್ತು ಪರಶು ಲೈಂಗಿಕ ಕಾರ್ಯಕರ್ತೆ ಆಗಿದ್ದ ಮಹಿಳೆಯರ ಉದ್ಧಾರಕ್ಕಾಗಿ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ಒಡನಾಡಿ ಸಂಸ್ಥೆಯನ್ನು ಸ್ಥಾಪಿಸಿದರು.
32 ವರ್ಷಗಳಿಂದ ಒಡನಾಡಿ ಸಂಸ್ಥೆ ಅತ್ಯಾಚಾರ, ಲೈಂಗಿಕ ಶೋಷಣೆಗೆ ಒಳಪಟ್ಟ ಮಹಿಳೆಯರು ಮತ್ತು ಮಕ್ಕಳು, ಕೌಟುಂಬಿಕ ದೌರ್ಜನ್ಯಕ್ಕೆ ಒಳಪಟ್ಟ ಗೃಹಿಣಿಯರು, ಮಾನವ ಸಾಗಣೆಗೆ ತಳ್ಳಲ್ಟಟ್ಟ ಪ್ರಕರಣಳನ್ನು ಭೇದಿಸುವಲ್ಲಿಯೂ ಪ್ರಧಾನ ಪ್ರಮುಖ ಪಾತ್ರ ವಹಿಸಿದೆ. ಅನಾಥ ಹಾಗೂ ಸಂತ್ರಸ್ತ ಮಹಿಳೆಯರಿಗೂ ಸಂಸ್ಥೆ ಆಸರೆ ಒದಗಿಸಿದೆ. ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ಊಟ, ವಸತಿ ವ್ಯವಸ್ಥೆ ಒದಗಿಸುತ್ತಿದ್ದು, ಆರೈಕೆ, ಘೋಷಣೆಯನ್ನೂ ನಿರ್ವಹಿಸುತ್ತಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಂಸ್ಥೆ ಟೊಂಕಕಟ್ಟಿ ನಿಂತಿದೆ. ಇಲ್ಲಿರುವ ಮಕ್ಕಳು ಪ್ರಾಥಮಿಕ ಶಾಲೆ, ಎಸ್ಎಸ್ಎಲ್ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಮಾಡುತ್ತಿದ್ದಾರೆ. ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಂಸ್ಥೆ ಸಾಕಷ್ಟು ಶ್ರಮಿಸುತ್ತಿದೆ.
ಮುರುಘಾ ಶ್ರೀಗಳ ಮೇಲೆ ಪೋಕ್ಸೋ ಪ್ರಕರಣ: ವೈದ್ಯಕೀಯ ಪರೀಕ್ಷೆಗಳು ಹೇಗೆ? ಪೋಕ್ಸೋ ಕೇಸ್ ತನಿಖೆ ಹೇಗೆ?
ಒಡನಾಡಿ ಸಂಸ್ಥೆಯ ಸಮಾಜಮುಖಿ ಕಾರ್ಯ
ಒಡನಾಡಿಯಲ್ಲಿ ಆಸರೆ ಪಡೆದಿದ್ದ ಮಕ್ಕಳು ಇಂದು ಸಮಾಜದಲ್ಲಿ ಸ್ವಾವಲಂಬನೆ ಜೀವನವನ್ನು ಕಂಡುಕೊಂಡಿದ್ದಾರೆ. 98 ಹೆಣ್ಣು ಮಕ್ಕಳಿಗೆ ಮದುವೆ ಮಾಡಲಾಗಿದೆ. ಬೇರೆ ಬೇರೆ ರಂಗದಲ್ಲಿ ಈ ಮಕ್ಕಳು ಕಾರ್ಯ ನಿರ್ವಹಿಸುತ್ತಿದ್ದಾರೆ. ವಕೀಲೆ, ಪತ್ರಕರ್ತೆ, ರಂಗಕರ್ಮಿ, ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸದ್ಯ 50 ಹೆಣ್ಣು ಮಕ್ಕಳು ಹಾಗೂ 25 ಗಂಡು ಮಕ್ಕಳು ಒಡನಾಡಿಯಲ್ಲಿ ಆಶ್ರಯ ಪಡೆದಿದ್ದಾರೆ.
ಕಳೆದ ವರ್ಷ ತುಮಕೂರು ನಗರದಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ವೊಂದರ ಮೇಲೆ ಪೊಲೀಸರು ದಾಳಿ ಮಾಡಿದ್ದು, ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದರು. ನಗರದ ರಿಂಗ್ ರಸ್ತೆಯ ಬಳಿಯ ಲಾಡ್ಜ್ ಮೇಲೆ ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಪೊಲೀಸರ ನೇತೃತ್ವದಲ್ಲಿ ದಾಳಿ ಮಾಡಲಾಗಿತ್ತು. ಈ ವೇಳೆ ರೂಂ ಒಂದರಲ್ಲಿ ಪೊಲೀಸರು ಸುರಂಗ ಪತ್ತೆ ಹಚ್ಚಿದ್ದು, ಸುರಂಗದಲ್ಲಿ ಅವಿತಿದ್ದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿ ಓರ್ವನನ್ನು ಬಂಧಿಸಿದ್ದರು. ಈ ಲಾಡ್ಜ್ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಶಿ ರಾಶಿ ಕಾಂಡೋಮ್ಗಳ ಕಂಡು ಬಂದಿದ್ದವು. ವಿಷಯ ತಿಳಿದ ಒಡನಾಡಿ ಸಂಸ್ಥೆ ಮಾಹಿತಿ ಕಲೆ ಹಾಕಿತ್ತು. ನಿಖರ ಮಾಹಿತಿ ಸಿಕ್ಕ ಬಳಿಕ ತಡರಾತ್ರಿ ಪೊಲೀಸರೊಂದಿಗೆ ಲಾಡ್ಜ್ ಮೇಲೆ ದಾಳಿ ಮಾಡಿದ್ದರು.
ಹಣದ ಆಮಿಷವೊಡ್ಡಿ ಕಳ್ಳ ಸಾಗಣೆ
ಇದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ಹುಣಸೂರಿನಲ್ಲಿ ಹೆಣ್ಣುಮಕ್ಕಳನ್ನು ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮೇರೆಗೆ ಪೊಲೀಸರು ದಾಳಿ ಮಾಡಿದ್ದರು. ಮೈಸೂರಿನಲ್ಲಿ ಹಣದ ಆಮಿಷವೊಡ್ಡಿ ಹಲವು ಹೆಣ್ಣುಮಕ್ಕಳನ್ನು ಸಾಗಾಣಿಕೆ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಹುಣಸೂರಿನ ಪೊಲೀಸರ ತಂಡದೊಂದಿಗೆ ಒಡನಾಡಿ ಸಂಸ್ಥೆಯ ನಿರ್ದೇಶಕರು ಹಾಗೂ ಸದಸ್ಯರು ಭಾಗಿ ಆಗಿದ್ದರು. ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಿಸಲಾಗಿತ್ತು.
ಅಮೆರಿಕಾದ ವರದಿ ಪ್ರಕಾರ ಭಾರತದಲ್ಲಿ ಮಾನವ ಕಳ್ಳಸಾಗಣೆಕೆಯ ಪ್ರಮುಖ ಪಾತ್ರದಲ್ಲಿ ರಾಜ್ಯವೂ ಒಂದಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ವಿ.ಎಸ್ ಮಳೀಮಠ ಅವರ ಪ್ರಕಾರ, ಮುಂಬೈ ಮತ್ತು ಗೋವಾದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವವರಲ್ಲಿ ಸುಮಾರು 80ರಷ್ಟು ಕರ್ನಾಟಕದಿಂದ ಬಂದವರಾಗಿದ್ದರು. ರಾಜ್ಯದಲ್ಲಿ ಗ್ರಾಮೀಣ ಜನಸಂಖ್ಯೆ, ವಿಶೇಷವಾಗಿ ಬಡ ದಲಿತರ ಮೇಲೆ ಕಳ್ಳಸಾಗಣೆದಾರರ ಜಾಲವು ತನ್ನ ಭದ್ರಕೋಟೆಯನ್ನು ಹೊಂದಿದೆ. ತುಮಕೂರಿನ ದಲಿತರು, ಹೆಚ್ಡಿ ಕೋಟೆ, ಹುಣಸೂರಿನ ಆದಿವಾಸಿಗಳು ಮತ್ತು ಮಡಿಕೇರಿ ಬುಡಕಟ್ಟು ಜನಾಂಗದವರನ್ನು ವಿಶೇಷವಾಗಿ ದುರ್ಬಲರು ಎಂದು ಗುರುತಿಸಲಾಗಿದೆ.
ಕಾರ್ಯಾಚರಣೆಗೆ ಅವಧಿ ಎಷ್ಟು?
ಒಡನಾಡಿ ಸೇವಾ ಸಂಸ್ಥೆ ಮೈಸೂರು ಮೂಲದ ಸಂಸ್ಥೆಯಾಗಿದ್ದು, ಕಳ್ಳಸಾಗಾಣಿಕೆಗೆ ಒಳಗಾದ ವ್ಯಕ್ತಿಗಳನ್ನು ರಕ್ಷಣೆ ಮಾಡುವುದಾಗಿತ್ತು. ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರ ಕಳ್ಳಸಾಗಣೆಯನ್ನು ತಡೆಗಟ್ಟುವುದು, ಕಳ್ಳಸಾಗಾಣಿಕೆದಾರರನ್ನು ಅತ್ಯಂತ ಕಠಿಣ ಕಾನೂನುಗಳ ಅಡಿಯಲ್ಲಿ ಬಂಧಿಸುವುದು ಸಂಸ್ಥೆ ಪ್ರಮುಖ ಉದ್ದೇಶವಾಗಿತ್ತು. ಸಂಘಟನೆಯು ತಳಮಟ್ಟದಲ್ಲಿ ಬಲವಾದ ನೆಟ್ವರ್ಕ್ ಅನ್ನು ಹೊಂದಿದೆ. ಕ್ಷೇತ್ರದ ಕಾರ್ಯಕರ್ತರು ಮತ್ತು ಆನಿಮೇಟರ್ಗಳನ್ನು ಒಳಗೊಂಡಿದೆ. ಇವರು ಮೊದಲಿಗೆ ಶಂಕಿತರ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಅವರೊಂದಿಗೆ ಬಾಂಧವ್ಯವನ್ನು ಬೆಳೆಸಿದ ನಂತರ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಾರೆ. ರಕ್ಷಣಾ ಕಾರ್ಯಾಚರಣೆಯನ್ನು ಎಚ್ಚರಿಕೆಯಿಂದ ಸಂಸ್ಥೆಯ ಮುಖ್ಯಸ್ಥರು ಕೈಗೊಳ್ಳುತ್ತಾರೆ. ಒಂದು ಕಾರ್ಯಾಚರಣೆಯ ಕನಿಷ್ಠ ಅವದಿಯು 15 ರಿಂದ 20 ದಿನಗಳಾಗಿರುತ್ತದೆ. ರಕ್ಷಣಾ ತಂಡವು ಮುಖ್ಯವಾಗಿ ಸಂಸ್ಥೆಯ ಮುಖ್ಯಸ್ಥರು, ಕೆಲವು ಕ್ಷೇತ್ರ ಆನಿಮೇಟರ್ಗಳು, ಕಾರ್ಯಕರ್ತರು, ವೀಡಿಯೋಗ್ರಾಫರ್/ಫೋಟೋಗ್ರಾಫರ್ ಮತ್ತು ಅಗತ್ಯಕ್ಕೆ ಅನುಗುಣವಾಗಿ ಸ್ವಯಂ ಸೇವಕರನ್ನು ಒಳಗೊಂಡಿರುತ್ತದೆ.
ಸ್ಟಾನ್ಲಿ ಬಿಚ್ಚಿಟ್ಟ ಪ್ರಮುಖ ವಿಚಾರಗಳು
ಸಂಸ್ಥೆಯ ಕರಪತ್ರವಾದ 'ಒಡನಾಡಿ - ದಿ ಸೋಲ್ಮೇಟ್' ಪ್ರಕಾರ, ಈ ಗುಂಪು ಇದುವರೆಗೆ 35 ಕಳ್ಳಸಾಗಣೆ ಜಾಲಗಳನ್ನು ಭೇದಿಸಿದೆ. 1,230 ಮಹಿಳೆಯರನ್ನು ರಕ್ಷಿಸಿದೆ. ಮತ್ತು ಅವರಿಗೆ ಪರ್ಯಾಯ ಜೀವನೋಪಾಯದೊಂದಿಗೆ ಪುನರ್ವಸತಿ ಕಲ್ಪಿಸಿದೆ. 650 ಅಪ್ರಾಪ್ತ ವಯಸ್ಕರನ್ನು ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ 550ಕ್ಕೂ ಹೆಚ್ಚು ಮಕ್ಕಳನ್ನು ಅವರ ಕುಟುಂಬಗಳೊಂದಿಗೆ ಪುನಃ ಸಂಯೋಜಿಸಿದೆ.
ಸಾಕ್ಷಿ ಸಂಗ್ರಹ ವಿಧಾನಗಳಲ್ಲಿ ಒಡನಾಡಿ ರಕ್ಷಣಾ ತಂಡ ಬಲಿಷ್ಠವಾಗಿದೆ. ಸಂಶಯಾಸ್ಪದ ವ್ಯಕ್ತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುತ್ತದೆ. ಸಿಡಿಗಳು, ವಿಸಿಡಿಗಳು, ಹಾಲ್ಕೋಹಾಲ್, ಡ್ರಗ್ಸ್, ಕಾಂಡೋಮ್ಗಳು, ಸೈಟ್ನಿಂದ ಸಂಗ್ರಹಿಸಿದ ಹಣವನ್ನು ವಶಕ್ಕೆ ಪಡೆಯುತ್ತದೆ. ಇದು ಮಕ್ಕಳು, ಹೆಣ್ಣುಮಕ್ಕಳ ಮಾರಾಟಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಕಲೆಹಾಕುತ್ತದೆ. ಒಪ್ಪಂದ ನಿಜವಾಗಿಯೂ ನಡೆದಿದೆಯೇ ಎಂದು ಸಾಬೀತುಪಡಿಸಲು ಸಹಾಯ ಮಾಡುತ್ತದೆ. ಕ್ಯಾಮೆರಾವನ್ನು ಬಳಸುತ್ತಿರುವ ವ್ಯಕ್ತಿಯು ಸಂಪೂರ್ಣ ರಕ್ಷಣಾ ಕಾರ್ಯಾಚರಣೆಯ ಪ್ರಕ್ರಿಯೆಯಲ್ಲಿ ತೊಡಗಿರುತ್ತಾನೆ.
"ಕಳೆದ 32 ವರ್ಷದಿಂದ ಒಡನಾಡಿ ಸಂಸ್ಥೆ ನೊಂದವರ, ಶೋಷಣೆಗೆ ಒಳಗಾದ ಮಹಿಳೆಯರ ಪರ ನಿಂತಿದೆ. ಹಲವು ಕಳ್ಳ ಸಾಗಣೆಯನ್ನು ತಡೆದಿದೆ. ವೇಶ್ಯಾವಾಟಿಕೆಯಿಂದ ಮಹಿಳೆಯರನ್ನು ರಕ್ಷಿಸಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಸ್ವಾವಲಂಬನೆ ಜೀವನ ನಡೆಸಲು ಅವಕಾಶ ಕಲ್ಪಿಸಿದೆ. ಹಲವು ಹೆಣ್ಣುಮಕ್ಕಳಿಗೆ ಮದುವೆ ಮಾಡಲಾಗಿದೆ," ಎಂದು ಒಡನಾಡಿ ಸಂಸ್ಥೆಯ ಸ್ಥಾಪಕರಾದ ಸ್ಟಾನ್ಲಿ ಅವರು ವಿವರವನ್ನು ಬಿಚ್ಚಿಟ್ಟಿದ್ದಾರೆ.