ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ; ಆರೋಪಿ ಕಾಲಿಗೆ ಗುಂಡು
ಮೈಸೂರು, ಫೆಬ್ರವರಿ 10: ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಂಡು ಓಡುತ್ತಿದ್ದ ಕೊಲೆಯತ್ನ ಪ್ರಕರಣದ ಆರೋಪಿ ಜಯಂತ್ ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿ, ಬಂಧಿಸಿದ್ದಾರೆ. ಗಾಯಗೊಂಡಿರುವ ಆರೋಪಿಗೆ ಕೆ. ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಶೂಟೌಟ್ ನಡೆದಿದೆ. ಘಟನೆಯಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ರವಿ ಹಾಗೂ ಕಾನ್ಸ್ಟೇಬಲ್ ರವಿ ಎಂಬುವವರು ಗಾಯಗೊಂಡಿದ್ದು, ಹುಣಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆರೋಪಿ ಜಯಂತ್ ಗೌಡ ಕಾಲಿಗೆ ಸಬ್ ಇನ್ಸ್ಪೆಕ್ಟರ್ ಜಯಪ್ರಕಾಶ್ ಗುಂಡು ಹಾರಿಸಿದ್ದಾರೆ. ಬಿಳಿಕೆರೆಯ ಗುಡ್ಡೆ ಬಸವೇಶ್ವರ ದೇವಾಲಯದ ಬಳಿ ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆತರುವ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದ.

ಆರೋಪಿ ಜಯಂತ್ ಗೌಡ ದೊಣ್ಣೆಯಿಂದ ಮುಖ್ಯಪೇದೆ ರವಿ ಹಾಗೂ ಪೇದೆ ರವಿ ಮೇಲೆ ಹಲ್ಲೆ ಮಾಡಿದರು. ಈ ವೇಳೆ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ ಜಯಪ್ರಕಾಶ್ ಆರೋಪಿಗೆ ಎಚ್ಚರಿಕೆ ನೀಡಿದರು. ಕೊನೆಗೆ ಬಲಗಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದರು.
ಜಯಂತ್ ಗೌಡ, ದೀಪಕ್ ಮತ್ತು ವಿಘ್ನೇಶ್ ಎಂಬ ಆರೋಪಿಗಳು ಚಿತ್ರದುರ್ಗದ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ತಲೆ ಮರೆಸಿಕೊಂಡಿದ್ದರು. ಜಯಂತ್ ಗೌಡ ಕೆಎಸ್ಆರ್ಟಿಸಿ ಬಸ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ.
ಜನವರಿ 20ರಂದು ಕೆ. ಆರ್. ನಗರ ತಾಲೂಕಿನ ಬೋಳನಹಳ್ಳಿ ಬಳಿ ಬಸ್ ಚಾಲಕನ ಮೇಲ ಹಲ್ಲೆ ನಡೆದಿತ್ತು. ಬಸ್ ಓವರ್ ಟೇಕ್ ಮಾಡಿದ್ದ ಕಾರಣಕ್ಕೆ ಅಡ್ಡಗಟ್ಟಿ ಹಲ್ಲೆ ಮಾಡಲಾಗಿತ್ತು. ಚಾಕುವಿನಿಂದ ಚಾಲಕನಿಗೆ ಇರಿದು ಆರೋಪಿ ತಲೆಮರೆಸಿಕೊಂಡಿದ್ದರು.












Click it and Unblock the Notifications