ಮೈಸೂರು, ಕೊಡಗಿಗೆ ವಾಹನದಲ್ಲಿ ಹೋಗುವಾಗ ತುಸು ಎಚ್ಚರ!
ಮೈಸೂರು,ಫೆಬ್ರವರಿ,17: ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯ ಕಾವು ಹೆಚ್ಚುತ್ತಿದ್ದಂತೆಯೇ ಚುನಾವಣಾಧಿಕಾರಿಗಳು ಎಲ್ಲೆಡೆ ಎಚ್ಚರಿಕೆ ವಹಿಸಿದ್ದು, ಚುನಾವಣೆ ಶಾಂತಿಯುತವಾಗಿ ನಡೆಯಲು ಅನುಕೂಲವಾಗುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಚುನಾವಣಾ ಅಭ್ಯರ್ಥಿಗಳು ಮತದಾರರಿಗೆ ಆಮಿಷವೊಡ್ಡುವುದನ್ನು ತಡೆಯಲು ಮತ್ತು ಅಕ್ರಮ ಹಣ, ಮದ್ಯ ಸೇರಿದಂತೆ ಇನ್ನಿತರ ವಸ್ತುಗಳನ್ನು ಸಾಗಿಸುವ ಸಾಧ್ಯತೆ ಇರುವುದರಿಂದ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ.[ಹೆಬ್ಬಾಳದಲ್ಲಿ ಸೋತರೂ ಕಾಂಗ್ರೆಸ್ಸಿಗೆ ಲಾಭ! ಹೇಗೆ?]

ಕೊಡಗು ಮತ್ತು ಮೈಸೂರು ಗಡಿಭಾಗವಾದ ಕೊಪ್ಪ ಗೇಟಿನಲ್ಲಿ ಕಾರು, ವ್ಯಾನು ಸೇರಿದಂತೆ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಕಳೆದ ಹದಿನೈದು ದಿನಗಳಿಂದ ತಪಾಸಣಾ ಕಾರ್ಯ ನಡೆಯುತ್ತಿದೆಯಾದರೂ ಯಾವುದೇ ಅಕ್ರಮ ಸಾಗಾಟಕ್ಕೆ ಸಂಬಂಧಿಸಿದ ಪ್ರಕರಣ ಬೆಳಕಿಗೆ ಬಂದಿಲ್ಲ.
ಕೊಡಗಿಗೆ ಮೈಸೂರು ನಂಟು ತುಸು ಹೆಚ್ಚಾಗಿದ್ದು ಮೈಸೂರು ಭಾಗದ ನಾಯಕರು ಕೊಡಗಿನತ್ತ ತೆರಳಿ ಚುನಾವಣೆ ಪ್ರಕ್ರಿಯೆಯನ್ನು ಅವಲೋಕಿಸುತ್ತಿದ್ದಾರೆ. ಕುಶಾಲನಗರ ಸುತ್ತಮುತ್ತ ಗಿರಿಜನ ಸೇರಿದಂತೆ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಅವರಿಗೆ ಹಣ, ಹೆಂಡ ಹಂಚಿ ಮತಗಳನ್ನು ಪಡೆಯುವ ಸಾಧ್ಯತೆಯಿದೆ.[ಉಪಚುನಾವಣೆ: ಹೆಬ್ಬಾಳದಲ್ಲಿ ನಿಜವಾಗಿ ಗೆದ್ದಿದ್ದು ಯಾರು?]
ಅಕ್ರಮ ಮದ್ಯ ಸಾಗಾಟ ಇನ್ನಿತರ ಉಡುಗೊರೆಯನ್ನು ಮೈಸೂರು ಕಡೆಯಿಂದ ಸಾಗಿಸುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದು ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಲಾಗುತ್ತಿದೆ. ತಪಾಸಣಾ ಕಾರ್ಯದಲ್ಲಿ ಪೊಲೀಸ್, ಲೋಕೋಪಯೋಗಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳಿದ್ದು, ದಿನಕ್ಕೆ ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.












Click it and Unblock the Notifications