ಅರಣ್ಯಾಧಿಕಾರಿಯೆಂದು ಸುಳ್ಳು ಹೇಳಿ 1 ತಿಂಗಳು ಪುಕ್ಕಟೆ ಸೌಲಭ್ಯ ಅನುಭವಿಸಿ ಸಿಕ್ಕಿಬಿದ್ದ ಭೂಪ
ಮೈಸೂರು, ಆಗಸ್ಟ್.16: ಆಂಧ್ರಪ್ರದೇಶದ ಅರಣ್ಯಾಧಿಕಾರಿ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ವಿಶೇಷ ಅಧ್ಯಯನಕ್ಕೆ ಬಂದಿದ್ದ ವ್ಯಕ್ತಿಯೊಬ್ಬರನ್ನು ನಜರಬಾದ್ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿಯ ಬೂದಿಹಾಲ್ ನಿವಾಸಿ ಲಕ್ಷ್ಮಣ್ ಎಂಬುವವರ ಪುತ್ರ ಡಿ.ಹರೀಶ್ ಎಂಬಾತನೇ ಬಂಧಿತ ಆರೋಪಿ. ಈತ ಜು.9ರಂದು ಮೈಸೂರು ನಗರದ ಮೃಗಾಲಯಕ್ಕೆ ಬಂದು ಅಲ್ಲಿನ ಅಧಿಕಾರಿಗಳನ್ನು ಭೇಟಿ ಮಾಡಿ, "ನಾನು ಆಂಧ್ರಪ್ರದೇಶದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ.
ಮದುವೆ ಹೆಸರಲ್ಲಿ ಮಹಿಳೆಯರಿಗೆ ಮೋಸ ಮಾಡುತ್ತಿದ್ದ ಮುರುಗನ್ ಕಂಬಿ ಹಿಂದೆ
ಆಂಧ್ರ ಸರ್ಕಾರವು ಇಲ್ಲಿನ ಮೃಗಾಲಯಗಳ ವಿಶೇಷ ಆಡಳಿತಾತ್ಮಕ ನಿರ್ವಹಣೆಯ ಬಗ್ಗೆ ಅಧ್ಯಯನಕ್ಕೆಂದು ನಿಯೋಜಿಸಿದೆ" ಎಂದು ಹೇಳಿದ್ದಲ್ಲದೆ, ಅದಕ್ಕೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ್ದಾನೆ.
ಆತನ ಮಾತನ್ನು ನಂಬಿದ ಮೃಗಾಲಯದ ಅಧಿಕಾರಿಗಳು, ಆತನಿಗೆ ಅನೇಕ ಸೌಲಭ್ಯಗಳನ್ನೂ ಒದಗಿಸಿದೆ. ನಂತರದ ದಿನಗಳಲ್ಲಿ ಆತನ ನಡೆಯ ಬಗ್ಗೆ ಅನುಮಾನಗೊಂಡು ಆಂಧ್ರಪ್ರದೇಶದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಆತನ ಬಗ್ಗೆ ಮಾಹಿತಿ ಕೋರಿದಾಗ ಅಂತಹ ಹೆಸರಿನ ಅಧಿಕಾರಿಗಳ್ಯಾರೂ ಇಲ್ಲ ಎಂಬ ಮಾಹಿತಿ ಸಿಕ್ಕಿದೆ.
ಹೀಗಾಗಿ ಅರಣ್ಯಾಧಿಕಾರಿಗಳು ಕೂಡಲೇ ಆತನನ್ನು ನಜರ್ ಬಾದ್ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. "ನನಗೆ ಅರಣ್ಯಾಧಿಕಾರಿಯಾಗಬೇಕು ಎಂಬ ಆಸೆ ಇತ್ತು. ಹೀಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ನನ್ನ ಆಸೆಯನ್ನು ತೀರಿಸಿಕೊಂಡಿದ್ದೇನೆ" ಎಂದು ಹರೀಶ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.