ಆಸ್ತಿ ವಿಚಾರಕ್ಕಾಗಿ ಗಂಡನ ಕಡೆಯವರಿಂದಲೇ ಕೊಲೆ; ಏಳು ಮಂದಿ ಬಂಧನ
ಮೈಸೂರು, ಆಗಸ್ಟ್ 17: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಆಕೆಯ ಗಂಡನ ಅಣ್ಣಂದಿರೇ ಸುಪಾರಿ ನೀಡಿ ಕೊಲೆಗೈದಿರುವ ಘಟನೆ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ಪೊಲೀಸರು ಕಾರ್ಯಾಚರಣೆ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದಾರೆ.
ಪಿರಿಯಾಪಟ್ಟಣದ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅಪರ ಪೊಲೀಸ್ ಅಧೀಕ್ಷಕ ಶಿವಕುಮಾರ್ ಮಾಹಿತಿ ನೀಡಿದರು. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ನಿವಾಸಿ ದಿ.ವಿರೂಪಾಕ್ಷ ಎಂಬುವರ ಪತ್ನಿ ಗಂಗಮ್ಮ (42) ಅವರು ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಅವರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದರು. ಗಂಗಮ್ಮ ಅವರ ಪತಿ 7 ವರ್ಷಗಳ ಹಿಂದೆ ತೀರಿಹೋಗಿದ್ದು, ಇವರಿಗೆ ಮಕ್ಕಳಿಲ್ಲದ ಕಾರಣ ಬೆಟ್ಟದಪುರದಲ್ಲಿ ಒಬ್ಬರೇ ವಾಸವಿದ್ದರು.
ಆದರೆ ಈಚೆಗೆ ಜಮೀನಿನ ವಿಷಯವಾಗಿ ಇವರ ಗಂಡನ ಅಣ್ಣಂದಿರು ಮತ್ತು ಮಕ್ಕಳು ಗಲಾಟೆ ಮಾಡಿದ್ದರು. ಈ ಸಂಬಂಧ ಬೆಟ್ಟದಪುರ ಪೊಲೀಸ್ ಠಾಣೆಗೆ ಗಂಗಮ್ಮ ದೂರು ನೀಡಿದ್ದರು. ಈ ನಡುವೆ ಗಂಗಮ್ಮ ಅವರು ಒಂದು ನಿವೇಶನವನ್ನು ಮಾರಾಟ ಮಾಡಿದ್ದರು. ಇದರಿಂದ ಕೋಪಗೊಂಡ ಗಂಗಮ್ಮನ ಗಂಡನ ಅಣ್ಣಂದಿರು ಮತ್ತು ಅವರ ಮಕ್ಕಳು ಇವರನ್ನು ಹತ್ಯೆಗೈಯ್ಯುವ ತೀರ್ಮಾನ ಮಾಡಿದ್ದರು.

ಆ.3ರಂದು ಗಂಗಮ್ಮ ನಾಪತ್ತೆಯಾಗಿದ್ದು, ಈಕೆಯ ಅಣ್ಣ ಆ.13ರಂದು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳನ್ನು ವಿಚಾರಿಸಿದಾಗ ಕೊಲೆಯ ರಹಸ್ಯ ಬಾಯಿಬಿಟ್ಟಿದ್ದಾರೆ. ಸುಪಾರಿ ನೀಡಿ ಕೊಲೆ ಮಾಡಿ ಶವವನ್ನು ನದಿಗೆ ಎಸೆದಿರುವುದು ತಿಳಿದುಬಂದಿದೆ. ಈ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದೆ.












Click it and Unblock the Notifications