ಮೈಸೂರು ಜಿಲ್ಲೆಗೆ ಕಂಟಕರಾಗಿದ್ದ ದರೋಡೆಕೋರರ ಬಂಧನ
ಮೈಸೂರು, ನವೆಂಬರ್ 06: ಮೈಸೂರು ನಗರದಲ್ಲಿ ಚಿನ್ನಾಭರಣ ಕಳ್ಳತನ, ಮಂಗಳಮುಖಿಯರಿಂದ ಹಣ ಸುಲಿಗೆ ಸೇರಿದಂತೆ ಪ್ರತ್ಯೇಕ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಆರೋಪಿಗಳಿಂದ ಹಣ, ಚಿನ್ನಾಭರಣ, ಕಾರು, ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ನಗರದಲ್ಲಿ ಕಳ್ಳತನ, ವಂಚನೆ, ವಸೂಲಿ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಪೊಲೀಸರು ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಖದೀಮರು ತಮ್ಮ ಕೈಚಳಕ ಪ್ರದರ್ಶಿಸುತ್ತಲೇ ಇದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೋಟದ ಮನೆಗೆ ಕನ್ನ ಹಾಕಿ ಕೆಲವೇ ಗಂಟೆಗಳಲ್ಲಿ ಸಿಕ್ಕಿಬಿದ್ದ ಕಳ್ಳರು
ಗುಂಪಿನಲ್ಲಿದ್ದ ಮಹಿಳೆಯರ ಬ್ಯಾಗ್ ನಲ್ಲಿದ್ದ ಚಿನ್ನಾಭರಣಗಳನ್ನು ಕಳುವು ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಲಷ್ಕರ್ ಠಾಣೆ ಪೊಲೀಸರು ಬಂಧಿತನಿಂದ ಸುಮಾರು 7,53,500ರೂ.ಮೌಲ್ಯದ 160ಗ್ರಾಂ ಚಿನ್ನಾಭರಣ ಹಾಗೂ 25ಗ್ರಾಂ ಬೆಳ್ಳಿ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಮೈಸೂರು ತನ್ವೀರ್ ಸೇಠ್ ನಗರದ ನಿವಾಸಿ ಮಹಮ್ಮದ್ ಯೂಸಫ್ ಅಲಿಯಾಸ್ ಕೋಳಿ ಫಯಾಜ್ ಎಂದು ಹೇಳಲಾಗಿದೆ.
ಈತ ಅ.21ರಂದು ಸುಮಂಗಲಿ ಸಿಲ್ಕ್ ಬಟ್ಟೆ ಅಂಗಡಿಗೆ ಬಂದಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ 74 ಗ್ರಾಂ ಚಿನ್ನಾಭರಣ ಮತ್ತು 10 ಸಾವಿರ ರೂ.ನಗದನ್ನು ಅಪಹರಿಸಿದ್ದ. ಈ ಕುರಿತು ಲಷ್ಕರ್ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು. ಬಳಿಕ ಲಷ್ಕರ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕೆಎಸ್ ಆರ್ ಟಿಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಈತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದರು. ವಿಚಾರಣೆ ವೇಳೆ ಈತ ತಪ್ಪೊಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಅರವಿಂದನಗರದ ಮನೆಯೊಂದರ ಬಾಗಿಲನ್ನು ಮೀಟಿ ತೆಗೆದು ಚಿನ್ನದ ಮತ್ತು ಬೆಳ್ಳಿಯ ಪದಾರ್ಥಗಳನ್ನು ಕಳುವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಕೇಶವ ಅಯ್ಯಂಗಾರ್ ರಸ್ತೆಯಲ್ಲಿರುವ ಗಗನ್ ರೆಸಿಡೆನ್ಸಿಯಲ್ಲಿ ಕುಮಾರ್ ಎಂಬುವರ ಮೇಲೆ ಹಲ್ಲೆ ನಡೆಸಿ ಹಣ ಕಿತ್ತುಕೊಳ್ಳಲು ಯತ್ನಿಸಿದ್ದಾಗಿಯೂ ತಿಳಿಸಿದ್ದಾನೆ.
ಮತ್ತೊಂದು ಪ್ರಕರಣದಲ್ಲಿ ಮೈಸೂರಿನ ತೌಸಿಫ್ (28), ಗುಣವರ್ಧನ್ (23) ಹಾಗೂ ಮಂಜುನಾಥ (22) ಎಂಬುವವರನ್ನು ಬಂಧಿಸಲಾಗಿದೆ. ಮಂಗಳಮುಖಿಯರನ್ನೇ ಟಾರ್ಗೆಟ್ ಮಾಡಿ ಅವರನ್ನು ಪುಸಲಾಯಿಸಿ ತಮ್ಮ ಕಾರಿನಲ್ಲಿ ಕರೆದೊಯ್ದು ಬಳಿಕ ಅವರ ಬಳಿಯಿದ್ದ ಹಣವನ್ನು ಬೆದರಿಸಿ ಕಿತ್ತುಕೊಳ್ಳುತ್ತಿದ್ದರು. ಇಷ್ಟೇ ಅಲ್ಲದೆ, ಮೈಸೂರು ನಗರದ ಮಂಡಿ ಠಾಣೆ, ಮಂಡ್ಯ ಜಿಲ್ಲೆಯ ನಾಗಮಂಗಲ, ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ದ್ವಿ ಚಕ್ರ ವಾಹನಗಳನ್ನು ಕೂಡ ಕಳ್ಳತನ ಮಾಡಿದ್ದರು.
ಇವರು ಅ.29ರಂದು ಸಂಜೆ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿ ಚಹಾ ಕುಡಿಯುತ್ತಿದ್ದ ಮೂವರು ಮಂಗಳಮುಖಿಯರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಅವರ ಬಳಿ ಇದ್ದ 9,100ರೂ.ನಗದು ಮತ್ತು ಒಂದು ಮೊಬೈಲ್ ಫೋನ್ ಕಿತ್ತುಕೊಂಡು ಕಾರಿನಿಂದ ಇಳಿಸಿ ಹೊರಟು ಹೋಗಿದ್ದರು. ಇವರನ್ನು ಕೂಡ ಬಂಧಿಸಲಾಗಿದೆ.
ಮೈಸೂರು ನಗರದ ಡಿ.ಸಿ.ಪಿ. (ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ) ಗೀತಪ್ರಸನ್ನ ಹಾಗೂ ದೇವರಾಜ ವಿಭಾಗದ ಎ.ಸಿ.ಪಿ. ಶಶಿಧರ್ ಮಾರ್ಗದರ್ಶನದಲ್ಲಿ ಲಷ್ಕರ್ ಪೊಲೀಸ್ ಠಾಣೆಯ ಪೊಲೀಸರು ಈ ಕಳ್ಳರನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.