ಪ್ರಧಾನಿ ಮೋದಿ ಸಹೋದರನ ಆರೋಗ್ಯದಲ್ಲಿ ಚೇತರಿಕೆ: ಕರ್ನಾಟಕ ಜನತೆಗೆ ಧನ್ಯವಾದ ತಿಳಿಸಿದ ಪ್ರಹ್ಲಾದ್ ಮೋದಿ
ಮೈಸೂರು, ಡಿಸೆಂಬರ್ 28: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಅವರ ಕಾರು ಮಂಗಳವಾರ ಮೈಸೂರಿನಲ್ಲಿ ಅಪಘಾತಕ್ಕೀಡಾಗಿತ್ತು. ಕಾರಿನಲ್ಲಿದ್ದ ಪ್ರಹ್ಲಾದ್ ಮೋದಿ ಹಾಗೂ ಅವರ ಕುಟುಂಬಸ್ಥರು ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಇದೀಗ ಪ್ರಹ್ಲಾದ್ ಮೋದಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಅಪಘಾತ ನಡೆದ ಬಳಿಕ ತಮಗೆ ಸಹಕರಿಸಿದ ಸರ್ವರಿಗೂ ಧನ್ಯವಾದ ತಿಳಿಸಿದ್ದಾರೆ.
ಅಪಘಾತ:ಪ್ರಧಾನಿ ಸಹೋದರನ ಮೇಲೆ ಕಾಳಜಿ, ಜನಸಾಮಾನ್ಯರ ನಿರ್ಲಕ್ಷ್ಯ: ಎಎಪಿ
ಈ ಬಗ್ಗೆ ಮಾತನಾಡಿರುವ ಪ್ರಹ್ಲಾದ್ ಮೋದಿ, "ನಾನು, ನಮ್ಮ ಕುಟುಂಬದವರು ಕಾರಿನಲ್ಲಿ ಪ್ರಯಾಣ ಮಾಡುವಾಗ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯಿತು. ಸದ್ಯ ಘಟನೆಯಲ್ಲಿ ಯಾರಿಗೂ ತೊಂದರೆ ಆಗಲಿಲ್ಲ. ಕರ್ನಾಟಕ ಸರಕಾರ, ಮುಖಂಡರು, ವಿರೋಧ ಪಕ್ಷದವರು ಹಾಗೂ ನಾಡಿನ ಜನತೆಗೆ ತುಂಬು ಹೃದಯದಿಂದ ಧನ್ಯವಾದಗಳು" ಎಂದರು.
"ಅಪಘಾತದ ನಂತರ ಕಮಾಂಡ್, ಪೊಲೀಸ್ ಸಿಬ್ಬಂದಿ ನಮ್ಮ ಜೊತೆಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು. ಕರ್ನಾಟಕದ ಜನತೆ ಅನುಕಂಪ ತೋರಿಸಿದ್ದಾರೆ. ಅವರ ಪ್ರೀತಿಗೆ ಧನ್ಯವಾದಗಳು" ಎಂದು ಹೇಳಿದರು.
ಈ ವೇಳೆ ಪ್ರಹ್ಲಾದ್ ಮೋದಿ ತಮ್ಮ ಕಾರು ಅಪಘಾತ ಹೇಗಾಯಿತು ಎಂದು ವಿವರಿಸಿದರು. "ನಾವು ಎರಡು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದೆವು. ಒಂದು ಕಾರಿನಲ್ಲಿ ನಾನು, ಮಗ, ಸೊಸೆ, ಮೊಮ್ಮಗ, ಮತ್ತೊಂದು ಕಾರಿನಲ್ಲಿ ಮಗಳು, ಅಳಿಯ ಮತ್ತು ಕುಟುಂಬದವರು ಇದ್ದರು. ಚಾಲಕನದ್ದೂ ಏನೂ ತಪ್ಪಿಲ್ಲ. ಎಸ್ಕಾರ್ಟ್ ಇದ್ದ ಕಾರಣ ವೇಗದಲ್ಲಿ ಹೋಗಲು ಅವಕಾಶವೇ ಇರಲಿಲ್ಲ. ಆಕಸ್ಮಿಕವಾಗಿ ಅಪಘಾತವಾಗಿದೆ. ಸೀಟ್ ಬೆಲ್ಟ್ ಹಾಕಿದ್ದೇವು. ಏರ್ಬ್ಯಾಗ್ ಓಪನ್ ಆಗಿದ್ದರಿಂದ ತೊಂದರೆ ಆಗಲಿಲ್ಲ" ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ದಾಖಲಾಗಿರುವ ಪ್ರಹ್ಲಾದ್ ಮೋದಿ ಅವರ ಕುಟುಂಬಸ್ಥರಿಗೆ ಚಿಕಿತ್ಸೆ ನೀಡಿರುವ ವೈದ್ಯರು ಮಾತನಾಡಿ, "ಎಲ್ಲರೂ ಆರೋಗ್ಯವಾಗಿದ್ದಾರೆ. ಕಾರಿನಲ್ಲಿದ್ದ ಐವರಲ್ಲಿ ಮಗುವಿಗೆ ಮಾತ್ರ ಒಂದು ಸಣ್ಣ ಪ್ರಾಕ್ಚರ್ ಆಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಇಂದು ಎಲ್ಲಾ ಪರೀಕ್ಷೆಗಳ ನಡೆಸಿ ಸಂಜೆ ಡಿಸ್ಚಾರ್ಜ್ ಮಾಡುವ ಪ್ರಕ್ರಿಯೆ ನಡೆಯುತ್ತದೆ," ಎಂದು ತಿಳಿಸಿದರು.
ಇನ್ನು ಪ್ರಧಾನಿ ಮೋದಿ ಅವರು ಈಗಾಗಲೇ ಸಹೋದರನಿಗೆ ಕರೆ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಚಿಕಿತ್ಸೆ ಮುಗಿಸಿದ ಬಳಿಕ ವಾಪಸ್ ಗುಜರಾತ್ಗೆ ಹೋಗುವ ಇಂಗಿತವನ್ನು ಪ್ರಹ್ಲಾದ್ ಮೋದಿ ಅವರ ಕುಟುಂಬದವರು ವ್ಯಕ್ತಪಡಿಸಿದ್ದಾರೆ.