ಮೈಸೂರಿನಲ್ಲಿಇನ್ಮುಂದೆ ರಾತ್ರಿ 8ರ ಬಳಿಕ ಬಾಗಿಲು ಮುಚ್ಚುತ್ತವೆ ಪೆಟ್ರೋಲ್ ಬಂಕ್ ಗಳು?
Recommended Video

ಮೈಸೂರು, ಡಿಸೆಂಬರ್ 20 : ಕಳೆದ ಕೆಲವು ದಿನಗಳಿಂದ ರಾತ್ರಿಯ ವೇಳೆ ಪೆಟ್ರೋಲ್ ಬಂಕ್ ಸಿಬ್ಬಂದಿಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ 8 ಗಂಟೆ ಬಳಿಕ ಮೈಸೂರು ನಗರದಲ್ಲಿ ಪೆಟ್ರೋಲ್ ಬಂಕ್ ಗಳನ್ನು ಮುಚ್ಚಲಾಗುವುದು ಎಂಬ ಎಚ್ಚರಿಕೆ ಸಂದೇಶವನ್ನು ಫೆಡರೇಷನ್ ಆಫ್ ಇಂಡಿಯಾ ಪೆಟ್ರೋಲಿಯಂ ಟ್ರೇಡರ್ಸ್ ನೀಡಿದೆ.
ಪೆಟ್ರೋಲಿಯಂ ಟ್ರೇಡರ್ಸ್ ಸಂಘದ ಅಧ್ಯಕ್ಷ ಬಸವೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಮಾಜಘಾತುಕ ಕಿಡಿಗೇಡಿಗಳಿಂದ ಪೆಟ್ರೋಲ್ ಬಂಕ್ ಗಳ ಮೇಲೆ ಪದೇ ಪದೆ ಹಲ್ಲೆ ನಡೆಯುತ್ತಿದೆ. ತಮ್ಮ ಜೀವಕ್ಕೆ ಭದ್ರತೆ ಇಲ್ಲದ ಕಾರಣ ಇನ್ನೂ ಮುಂದೆ ಸಂಜೆ 8 ಗಂಟೆಗೆ ಪೆಟ್ರೋಲ್ ಬಂಕ್ ಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದರು.
ಡಿ.15ರ ಮಧ್ಯರಾತ್ರಿ ಸುಮಾರು 12.45ಕ್ಕೆ ಹಿನಕಲ್ ಬಳಿಯ ಅನ್ನಪೂರ್ಣ ಸರ್ವಿಸ್ ಸ್ಟೇಷನ್ ನ ಸಿಬ್ಬಂದಿ ಮತ್ತು ಮಾಲೀಕರ ಮೇಲೆ ಕಿಡಿಗೇಡಿಗಳ ತಂಡವೊಂದು ಹಲ್ಲೆ ನಡೆಸಿದ್ದು, ಬಂಕ್ ಮಾಲೀಕ ವಿನೋದ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಮಾಡಲಾಗಿತ್ತು.

ಮತ್ತೊಂದು ಪ್ರಕರಣದಲ್ಲಿ ಹೂಟಗಳ್ಳಿಯ ಹೇಮಂತ್ ಎಂಬುವವರು ಅಂದು ರಾತ್ರಿ ಪೆಟ್ರೋಲ್ ಭರಿಸಲು ಆಗಮಿಸಿದ್ದು, ಬಂಕ್ ವ್ಯಾಪ್ತಿಯಲ್ಲಿ ಸಿಗರೇಟ್ ಸೇದಲು ಮುಂದಾದರು, ಅದನ್ನು ತಡೆದು ಹೊರ ಕಳಿಸಲಾಯಿತು, ಇದರಿಂದ ಕೂಪಿತರಾದ ಅವರು, ತಂಡವೊಂದನ್ನು ಕಟ್ಟಿಕೊಂಡು ಬಂದು ತಮ್ಮ ಮೇಲೆ ಏಕಾ ಏಕಿ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ, ಹಲ್ಲೆಯಿಂದ ಕಣ್ಣು, ತಲೆ, ಸೇರಿದಂತೆ ದೇಹದ ಇತರೆ ಭಾಗಗಳಿಗೆ ಗಾಯವಾಗಿದೆ. ಈ ಘಟನೆಯಿಂದ ಭಯ ಮೂಡಿದೆ ಎಂದು ಹಲ್ಲೆಗೊಳಗಾದ ವಿನೋದ್ ಅವರು ಬೇಸರ ವ್ಯಕ್ತಪಡಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೋಪಿಗಳಿಗೆ ಪ್ರಭಾವಿಗಳ ಶ್ರೀರಕ್ಷೆಯಿದೆ. ಆರೋಪಿಗಳ ಮೇಲೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 506, 143, 149, 323,324 ಮೇಲೆ ದೂರು ದಾಖಲಾಗಿದೆ, ಇದೊಂದು ಜಾಮೀನು ರಹಿತ ಪ್ರಕರಣವಾಗಿದ್ದರೂ ಪ್ರಭಾವಿಗಳ ಕೃಪಾಕಟಾಕ್ಷದಿಂದ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ ಎಂದು ಆಕ್ರೋಶ ಪಡಿಸಿದರು.
ಇಂತಹ ದುರ್ಘಟನೆಗಳು ಬಂಕ್ ಗಳಲ್ಲಿ ಪದೇ ಪದೆ ನಡೆಯುತ್ತಿದೆ ಇದರಿಂದ ಭಯದ ವಾತಾವರಣ ಮೂಡಿದೆ ಎಂದು ತಿಳಿಸಿದರು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಉದ್ಯಮಕ್ಕೆ ಹಾಗೂ ತಮಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಜಿಲ್ಲಾ ಪೊಲೀಸ್ ಆಯುಕ್ತರಾದ ಡಾ.ಸುಬ್ರಮಣ್ಯೇಶ್ವರ ರಾವ್ ಅವರಿಗೆ ಸಂಘದಿಂದ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.












Click it and Unblock the Notifications