ಮಲ್ಲಿಗೆ 400, ಕಾಕಡ 600; ವರಮಹಾಲಕ್ಷ್ಮೀ ಹಬ್ಬ ಈ ಬಾರಿ ಬಲು ದುಬಾರಿ
ಮೈಸೂರು, ಆಗಸ್ಟ್ 8 :ಮಳೆಯ ಅಬ್ಬರದ ನಡುವೆ ಹೆಣ್ಣು ಮಕ್ಕಳ ಹಬ್ಬವೆಂದೇ ಹೆಸರಾದ ವರಮಹಾಲಕ್ಷ್ಮೀ ಪೂಜೆ ಈ ಬಾರಿ ದುಬಾರಿಯೆಂದು ಜನರಿಗೆ ಭಾಸವಾಗುತ್ತಿದೆ. ವಿಶೇಷವಾಗಿ ಹೂಗಳ ದರ ಗಗನಕ್ಕೇರಿದ್ದು, ಗ್ರಾಹಕರ ಕೈ ಸುಡುತ್ತಿದೆ.
ಹಬ್ಬಕ್ಕೆ ಮಾವಿನಸೊಪ್ಪು, ಬಾಳೆಕಂದು, ತಾವರೆ ಮೊಗ್ಗು, ಲಕ್ಷ್ಮಿ ಮುಖವಾಡ ಹೀಗೆ ಅಗತ್ಯವಾದ ಪರಿಕರಗಳು ನಗರದ ವಿವಿಧ ಮಾರುಕಟ್ಟೆಗಳಿಗೆ ಆವಕವಾಗಿದ್ದು, ಹಬ್ಬದ ಪರಿಣಾಮ ಬಿರುಸಿನ ವ್ಯಾಪಾರ ನಡೆಯುತ್ತಿದೆ. ನಗರದ ಹೃದಯಭಾಗವಾದ ಸಯ್ಯಾಜಿರಾವ್ ರಸ್ತೆ, ಚಿಕ್ಕಗಡಿಯಾರ, ದೇವರಾಜ ಮಾರುಕಟ್ಟೆಯಲ್ಲಿ ವ್ಯಾಪಾರ ಹೆಚ್ಚಾಗಿತ್ತು. ಅಗ್ರಹಾರ ವೃತ್ತ, ವಾಣಿವಿಲಾಸ ಮಾರುಕಟ್ಟೆ, ಎಂ.ಜಿ.ರಸ್ತೆ ಮಾರುಕಟ್ಟೆ, ನಂಜುಮಳಿಗೆ ಮಾರುಕಟ್ಟೆಗಳಲ್ಲೂ ವ್ಯಾಪಾರ ಕಳೆಗಟ್ಟಿದೆ.
ಹಬ್ಬಕ್ಕೆ ಅತ್ಯಗತ್ಯವಾಗಿ ಬೇಕಿರುವ ಗುಲಾಬಿ ಹೂವಿನ ದರ 300-400 ರೂ.ಕ್ಕೆ ಏರಿಕೆಯಾಗಿದೆ. ಸೇವಂತಿಗೆ ಕೆ.ಜಿಗೆ 80ರಿಂದ 300 ರೂ. ಕ್ಕೆ ಹೆಚ್ಚಾಗಿದೆ. ಕೆ.ಜಿಗೆ ಮಲ್ಲಿಗೆ 400 ರೂ. ಕ್ಕೆ, ಕಾಕಡ 600 ರೂ ಕ್ಕೆ, ಈ ಬಾರಿ ವರಮಹಾಲಕ್ಷ್ಮಿ ಹಬ್ಬ ದುಬಾರಿ ಎನಿಸಿದೆ.
ವಿಶೇಷವಾಗಿ ಹೂಗಳ ದರ ಗಗನಕ್ಕೇರಿದ್ದು, ಗ್ರಾಹಕರ ಕೈ ಸುಡುತ್ತಿದೆ. ಹಣ್ಣುಗಳ ಪೈಕಿ ಸೇಬು, ದಾಳಿಂಬೆ, ಸೀಬೆ, ಸೀತಾಫಲಗಳಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿಲ್ಲ. ಆದರೆ, ಸೀಸನ್ ಅಲ್ಲದ ಕಿತ್ತಳೆ ಹಣ್ಣಿನ ಬೆಲೆ ಏರಿಕೆ ಕಂಡಿದೆ. ಹಬ್ಬಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿರುವುದರಿಂದ ಅಗತ್ಯಕ್ಕೆ ತಕ್ಕಷ್ಟು ಕಿತ್ತಳೆ ಮಾರುಕಟ್ಟೆಗೆ ಬರುತ್ತಿಲ್ಲ.

ಇನ್ನು ಹಬ್ಬಕ್ಕೆ ಅಗತ್ಯ ಎನಿಸುವ ತಾವರೆ ಹೂಗೆ ಬೇಡಿಕೆ ಸೃಷ್ಟಿಯಾಗಿದೆ. ಒಂದು ತಾವರೆ ಮೊಗ್ಗು 20 ರಿಂದ 30 ರೂ ವರೆಗೆ ಮಾರಾಟವಾಗುತ್ತಿದೆ. ಸೀತಾಫಲಕ್ಕೂ ಹೆಚ್ಚಿನ ಬೇಡಿಕೆ ಇರುವುದರಿಂದ ಮಾಗದ ಸೀತಾಫಲಗಳೇ ಹೆಚ್ಚಾಗಿ ಕಂಡು ಬರುತ್ತಿದೆ.
ಕೈಬಳೆಗಳಿಗೂ ಬೇಡಿಕೆ ಇರುವುದರಿಂದ ದೇವರಾಜ ಮಾರುಕಟ್ಟೆಯ ಮುಂದೆ ಸಯ್ಯಾಜಿರಾವ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಕೈ ಬಳೆಗಳನ್ನು ಹರಡಿಕೊಂಡು ವ್ಯಾಪಾರಸ್ಥರು ಕುಳಿತಿದ್ದಾರೆ. ಬಣ್ಣ, ಗುಣಮಟ್ಟ, ವಿನ್ಯಾಸಕ್ಕೆ ತಕ್ಕಂತೆ ಬೆಲೆ ಇದೆ.
ಈ ಹಿಂದೆ ಮಳೆ ಅಭಾವ ಎದುರಾಗಿ ಹೂಗಳ ಇಳುವರಿ ಶೇ.50 ಕಡಿಮೆ ಆಗಿರುವುದರಿಂದ ಪರಿಣಾಮ ಗ್ರಾಹಕರ ಮೇಲೆ ಬೀರಿದೆ. ಹೀಗೆ ಹಬ್ಬದ ಅವಶ್ಯಕತೆಯನ್ನೇ ಬಂಡವಾಳವಾಗಿಸಿಕೊಂಡು ಮಾರುಕಟ್ಟೆಯಲ್ಲಿ ದುಬಾರಿ ದರ ನಿಗದಿ ಮಾಡಿರುವ ಬಗ್ಗೆ ಗ್ರಾಹಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications