"ಹಿಂದೂಗಳು ಒಟ್ಟಿಗಿರೋಣ ಎಂದಿದ್ದೇ ತಪ್ಪಾ?" ಎಂಬಿ ಪಾಟೀಲ್ ಹೇಳಿಕೆಗೆ ಪೇಜಾವರ ಶ್ರೀ ಪ್ರತ್ಯುತ್ತರ
ಮೈಸೂರು, ಆಗಸ್ಟ್ 3: "ಎಂ.ಬಿ ಪಾಟೀಲರು, ದಲಿತರನ್ನು ಮಠಾಧೀಶರನ್ನಾಗಿ ಮಾಡಿ ಎಂದು ನನಗೆ ಹೇಳಿದ್ದಾರೆ. ಆ ಕೆಲಸವನ್ನು ಅವರು ಮಾಡಿ ತೋರಿಸಲಿ. ಅವರು ನನ್ನ ಮಾತಿಗೆ ಅಷ್ಟೊಂದು ಸಿಟ್ಟಾಗಲು ಕಾರಣವೇನೋ ಗೊತ್ತಿಲ್ಲ. ಹಿಂದೂಗಳು ಒಟ್ಟಿಗೆ ಇರೋಣ ಎಂದಿದ್ದೇ ತಪ್ಪಾ" ಎಂದು ಪೇಜಾವರ ಶ್ರೀಗಳು ತಿರುಗೇಟು ನೀಡಿದ್ದಾರೆ.
ಪೇಜಾವರ ಶ್ರೀಗಳು ಇತ್ತೀಚೆಗೆ ಲಿಂಗಾಯತ ಧರ್ಮದ ಬಗ್ಗೆ ಚರ್ಚಿಸಲು ಎಲ್ಲಾ ನಾಯಕರಿಗೂ ಪಂಥಾಹ್ವಾನ ನೀಡಿದ್ದರು. ಈ ಕುರಿತು ಗುಡುಗಿರುವ ಶಾಸಕ ಎಂಬಿ ಪಾಟೀಲ್, "ನಮಗೆ ಪಂಥಾಹ್ವಾನ ನೀಡಲು ಅವರ್ಯಾರು" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಧರ್ಮದ ಬಗ್ಗೆ ಮಾತನಾಡುವ ಪೇಜಾವರರು ದಲಿತರ ಜೊತೆ ಊಟ ಮಾಡಲಿ: ಎಂಬಿ ಪಾಟೀಲ್
"ಎಂ.ಬಿ.ಪಾಟೀಲರ ಉದ್ವೇಗ ಹಾಗೂ ಆಕ್ರೋಶದ ಮಾತು ಸರಿಯಲ್ಲ. ನಾನು ಲಿಂಗಾಯಿತ ಮತವನ್ನು ಸರಿ ಪಡಿಸಲು ಹೋಗುತ್ತಿಲ್ಲ. ನಮಗೆ ಬಸವಣ್ಣನವರ ಬಗ್ಗೆ ಬಹಳ ಗೌರವ ಉಂಟು. ನಾನು ಸ್ನೇಹದಿಂದ, ಸಹೋದರತ್ವದಿಂದ ನಮ್ಮಲ್ಲೇ ಇರಿ ಎಂದು ಹೇಳುತ್ತಿದ್ದೇನೆ. ನೀವು ಹಿಂದುಗಳೇ. ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಸೌಜನ್ಯದಿಂದ ಕೇಳಿದ್ದೇನಷ್ಟೆ. ಅವರು ಆಕ್ರೋಶವಾಗಲು ಕಾರಣವೇನೆಂದು ತಿಳಿಯುತ್ತಿಲ್ಲ" ಎಂದರು.
"ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇನೆ. ಧರ್ಮದ ವಿಚಾರದಲ್ಲಿ ಆದೇಶ ಕೊಟ್ಟಿಲ್ಲ, ಸಲಹೆ ಕೊಟ್ಟಿದ್ದೇನೆ ಅಷ್ಟೆ. ಲಿಂಗಾಯತ, ವೀರಶೈವ ಧರ್ಮದ ಬಗ್ಗೆ ನಾನು ಪಂಥಾಹ್ವಾನ ಮಾಡಿಯೇ ಇಲ್ಲ. ನಮ್ಮನ್ನ ವಿರೋಧ ಮಾಡುವವರು ಸಂವಾದಕ್ಕೆ ಬನ್ನಿ ಎಂದು ಸ್ನೇಹದ ಆಹ್ವಾನ ನೀಡಿದ್ದೇನೆ" ಎಂದರು.
ನಾವು ನಮ್ಮ ಹಕ್ಕು ಕೇಳುತ್ತಿದ್ದೇವಷ್ಟೆ; ಜಯಮೃತ್ಯುಂಜಯ ಸ್ವಾಮೀಜಿ ತಿರುಗೇಟು
ದಲಿತರನ್ನು ಮಠಾಧೀಶರನ್ನಾಗಿ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, "ಆ ಕೆಲಸವನ್ನು ಅವರು ಮಾಡುತ್ತಾರಾ? ಅವರವರ ಧರ್ಮದ ಬಗ್ಗೆ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಅವರವರಿಗೆ ಉಂಟು. ನೀವು ನಮ್ಮನ್ನು ಬಿಟ್ಟುಹೋಗಬೇಡಿ ಎಂದು ಸಲಹೆ ನೀಡಿದ್ದೇನಷ್ಟೆ" ಎಂದರು.