ಒಲ್ಲದ ಮನಸ್ಸಿನಿಂದ ಹೊರಟ ಆನೆಗಳು; ಅರಮನೆ ಮುಂದೊಂದು ಭಾವನಾತ್ಮಕ ಕ್ಷಣ
ಮೈಸೂರು, ಅಕ್ಟೋಬರ್ 10: ಕಳೆದ 40 ದಿನಗಳಿಂದ ಮೈಸೂರಿನಲ್ಲಿ ಬೀಡು ಬಿಟ್ಟು ದಸರಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಅರಣ್ಯ ಇಲಾಖೆಯ ಆನೆಗಳು ತಮ್ಮ ಶಿಬಿರಗಳಿಗೆ ತೆರಳಲು ಇಂದು ಹಿಂದೇಟು ಹಾಕಿದ ಘಟನೆ ನಡೆಯಿತು. ಇಂದು ಬೀಳ್ಕೊಡುಗೆ ಪಡೆದ ಎಲ್ಲ 10 ಆನೆಗಳನ್ನು ಲಾರಿಗಳಿಗೆ ಹತ್ತಿಸುವಾಗ ಸಮೀಪವಿದ್ದ ಜನರು ಹಾಗೂ ಅಧಿಕಾರಿಗಳು ಮೂಕ ಪ್ರಾಣಿಗಳ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದರು.
ಇಲ್ಲಿ ಉತ್ತಮವಾದ, ರುಚಿಯಾದ ಪೌಷ್ಟಿಕ ಆಹಾರದ ಜತೆಗೆ ಲಕ್ಷಾಂತರ ಜನರ ದರ್ಶನ, ನಗರ ವಾಸಕ್ಕೆ ಮನಸೋತಿದ್ದ ಆನೆಗಳು ತಮ್ಮ ವಾಸ ಸ್ಥಳದ ಶಿಬಿರಗಳಿಗೆ ತೆರಳಲು ಒಲ್ಲೆ ಎನ್ನುತಿದ್ದವು. ಅದರಲ್ಲೂ ಗಜ ಪಡೆಯ ಅತ್ಯಂತ ಕಿರಿಯ ಆನೆ ಲಕ್ಷ್ಮಿ ಲಾರಿ ಏರದೆ ಸತಾಯಿಸುತ್ತಿತ್ತು.
ಸತತ ಎರಡು ಗಂಟೆಗಳ ಕಾಲ ಅರ್ಜುನ, ಗೋಪಿ, ವಿಕ್ರಮ ಆನೆಗಳು ಲಕ್ಷ್ಮಿ ಆನೆಯನ್ನು ಲಾರಿ ಹತ್ತಿಸಲು ಎಷ್ಟೇ ಪ್ರಯತ್ನಪಟ್ಟರು ಲಾರಿ ಏರದೇ ಹಟ ಹಿಡಿದಿತ್ತು. ತನ್ನ ಹಗ್ಗ ಜಗ್ಗಿ ಬೇರೆ ಆನೆಗಳ ಮೇಲೂ ಆಕ್ರೋಶ ವ್ಯಕ್ತಪಡಿಸಿತು. ಲಕ್ಷ್ಮಿಯನ್ನು ಸಮಾಧಾನಪಡಿಸಿ ಶಿಬಿರಕ್ಕೆ ಕರೆದೊಯ್ಯಲು ಕ್ಯಾಪ್ಟನ್ ಅರ್ಜುನನೇ ಬಂದರೂ ಪ್ರಯೋಜನವಾಗಲಿಲ್ಲ. ಮೊದಲಿಗೆ ಗೋಪಿ, ನಂತರ ಅರ್ಜುನ, ದುರ್ಗಾಪರಮೇಶ್ವರಿ ಹಾಗೂ ವಿಕ್ರಂ ಆನೆಗಳು ಸೊಂಡಲಿನಿಂದ ತಳ್ಳಿ, ದಂತದಿಂದ ನೂಕಿದರೂ ಲಕ್ಷ್ಮಿ ಮಾತು ಕೇಳಲಿಲ್ಲ. ಇದನ್ನು ಲಾರಿಗೆ ಹತ್ತಿಸುವ ಪ್ರಯತ್ನದಲ್ಲಿ ಮಾವುತರು, ಸಹಾಯಕರು, ಅರಣ್ಯ ಸಿಬ್ಬಂದಿಯೂ ಸುಸ್ತಾಗಿ ಹೋದರು.

ಎರಡೂವರೆ ಗಂಟೆ ದಾಟುತ್ತಿದ್ದಂತೆ ಸಿಬ್ಬಂದಿ ಮತ್ತೊಂದು ಲಾರಿ ತರಿಸಿ ಹೊಸ ತಂತ್ರಕ್ಕೆ ಮೊರೆಹೋದರು. ಸುತ್ತ ಮೂರು ಲಾರಿ ನಿಲ್ಲಿಸಿ, ಗೋಪಿ ಆನೆ ಸಹಾಯದಿಂದ ಲಕ್ಷ್ಮಿಯನ್ನು ಲಾರಿ ಏರುವಂತೆ ಮಾಡಲಾಯಿತು. ಆನೆಗಳು ಒಲ್ಲದ ಮನಸ್ಸಿನಿಂದ ಲಾರಿ ಏರುತ್ತಿರುವುದು ಅವುಗಳ ವರ್ತನೆಯೇ ತೋರುತ್ತಿತ್ತು.
ಗಜ ಪಡೆಯ ಮೂರು ಆನೆಗಳನ್ನು ನಿನ್ನೆಯೇ ಚಾಮರಾಜನಗರಕ್ಕೆ ಹುಲಿ ಹಿಡಿಯುವ ಕಾರ್ಯಾಚರಣೆಗಾಗಿ ಕಳುಹಿಸಲಾಗಿದೆ.












Click it and Unblock the Notifications