ಎತ್ತ ಸಾಗುತ್ತಿದೆ ನಾಗರೀಕ ಸಮಾಜ? ಸಿಕ್ಕ ಅನಾಥ ಶವಗಳಲ್ಲಿ ಹೆಚ್ಚಿನವರು ವೃದ್ಧರೇ!
ಮೈಸೂರು, ಫೆಬ್ರವರಿ 06: ನಿವೃತ್ತರ ಸ್ವರ್ಗ ಎಂದೇ ಹೆಸರುವಾಸಿಯಾಗಿರುವ ಮೈಸೂರು ನಗರ ವಯೋವೃದ್ಧರಿಗೆ ಒಂದರ್ಥದಲ್ಲಿ ನರಕವಾಗುತ್ತಿದೆ. ಕಾರಣ ವರ್ಷಕ್ಕೆ 100ಕ್ಕೂ ಹೆಚ್ಚು ಅನಾಥ ಶವಗಳಿಗೆ ವಾರಸುದಾರರೇ ಇಲ್ಲದ ಪರಿಸ್ಥಿತಿ ಎದುರಾಗಿದೆ.
ಪೋಷಕರ ಪಾಲನೆ - ಪೋಷಣೆ ಜವಾಬ್ದಾರಿಯನ್ನು ಹೊರಬೇಕಾದ ಮಕ್ಕಳು ಅದರಿಂದ ವಿಮುಖರಾದ ಪರಿಣಾಮ ನಗರದಲ್ಲಿ ಹಿರಿಯ ನಾಗರಿಕರು ಬೀದಿಗೆ ಬೀಳುವಂತಾಗಿದೆ. ಮತ್ತೊಂದೆಡೆ ನಗರದಲ್ಲಿ ದಿನೇ ದಿನೆ ಅನಾಥಾಶ್ರಮಗಳು ಹೆಚ್ಚುತ್ತಲೇ ಇದೆ. ಈಗಾಗಲೇ ಒಟ್ಟು 18 ಕ್ಕೂ ಹೆಚ್ಚು ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳು ಕಾರ್ಯನಿರ್ವಹಿಸುತ್ತಿವೆ.
ವೃದ್ಧರ ಶೋಷಣೆ: ಮಂಗಳೂರು ನಂ.1: ಸಮೀಕ್ಷೆ ವರದಿ
ಆದರೂ ಮಕ್ಕಳಿಂದ ಹೊರದೂಡಲ್ಪಟ್ಟ ಹಿರಿಯ ಜೀವಗಳಿಗೆ ಸೂಕ್ತ ನೆಲೆ ಸಿಕ್ಕದೆ, ಅನಾಥರಾಗಿ ಬೀದಿ - ಬೀದಿಗಳಲ್ಲಿ ಭಿಕ್ಷೆ ಬೇಡಿ ಬದುಕುವ ಸ್ಥಿತಿ ನಿರ್ಮಾಣವಾಗುತ್ತಿದೆ. ಇದೇ ರೀತಿ ಮಾನಸಿಕ ಅಸ್ವಸ್ಥರು, ಕಾಯಿಲೆಗೊಳಗಾದವರು ಮನೆಯಿಂದ ಹೊರ ಹಾಕಲ್ಪಟ್ಟವರನ್ನು ಆರೈಕೆ ಮಾಡುವವರ ಸಂಖ್ಯೆ ನಗರದಲ್ಲಿ ಕ್ಷೀಣಿಸಿದ ಪರಿಣಾಮ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಹಾಗಾಗಿ ಪ್ರತಿ ವರ್ಷ ಪತ್ತೆಯಾಗುತ್ತಿರುವ ಅನಾಥ ಶವಗಳಿಗೆ ಪೊಲೀಸರೇ ವಾರಸುದಾರರಾಗಿ ನಿಂತು ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ.
ಫುಟ್ ಪಾತ್, ಬಸ್ ಸ್ಟ್ಯಾಂಡ್ , ಚರಂಡಿ , ಪಾಳು ಬಿದ್ದ ಮನೆ, ಪ್ರಮುಖ ರಸ್ತೆಗಳು ಹೀಗೆ ನಗರದ ವಿವಿಧ ಕಡೆಗಳಲ್ಲಿ ಪತ್ತೆಯಾಗುವ ಅನಾಥ ಶವಗಳಿಗೆ ದಿಕ್ಕು ದೆಸೆ ಇಲ್ಲದಾಗಿದೆ. ಮುಂದೆ ಓದಿ...
ಪೊಲೀಸರೇ ಅಂತ್ಯಕ್ರಿಯೆ ಮಾಡುತ್ತಾರೆ
ಹೀಗೆ ದೊರೆತ ಅನಾಥ ಶವಗಳನ್ನು ಮೊದಲು ಪೊಲೀಸರು ಪೋಸ್ಟ್ ಮಾರ್ಟಮ್ ಮಾಡಿ ಮಾಧ್ಯಮಗಳ ಮೂಲಕ ಅನಾಥ ಶವ ಪತ್ತೆ ಶೀರ್ಷಿಕೆಯ ಹೆಸರಿನಲ್ಲಿ ಪ್ರಕಟಣೆ ಹೊರಡಿಸುತ್ತಾರೆ.
ಆದರೆ ಹತ್ತು ದಿನವಾದರೂ ವಾರಸುದಾರು ಬಾರದಿದ್ದರೆ ವಿಧಿಯಿಲ್ಲದೆ ಪೊಲೀಸರೇ ರುದ್ರಭೂಮಿಯಲ್ಲಿ ಸಾಂಕೇತಿಕವಾಗಿ ಪುಷ್ಪಹಾರ ಅರ್ಪಿಸಿ, ಪೂಜೆ ಸಲ್ಲಿಸಿ, ಮಣ್ಣು ಮಾಡುವ ಮೂಲಕ ಅಂತ್ಯಕ್ರಿಯೆ ನಡೆಸುತ್ತಾರೆ.
ವೃದ್ಧರು ಹೆಚ್ಚಿರುತ್ತಾರೆ
ನಗರದ ವಿವಿಧೆಡೆಗಳಲ್ಲಿ ತಿಂಗಳಿಗೆ ಸುಮಾರು 8ಕ್ಕೂ ಹೆಚ್ಚು ಅನಾಥ ಶವಗಳು ಕಾಣಸಿಗುತ್ತಿದೆ. ಅದರಲ್ಲಿ ವೃದ್ಧರ ಪಾಲು ಹೆಚ್ಚಿನದಾಗಿದೆ. ಮಾನಸಿಕ ಹಾಗೂ ದೈಹಿಕವಾಗಿ ಕಾಯಿಲೆಗೆ ತುತ್ತಾಗಿ ಮನೆಯಿಂದ ಹೊರ ನೂಕಲ್ಪಟ್ಟವರು, ತೆವಳುತ್ತಾ ಭಿಕ್ಷೆ ಬೇಡುತ್ತಾ ಕುಂತಲ್ಲಿಯೇ ಮಲಮೂತ್ರ ಮಾಡಿಕೊಂಡು ನಡೆಯಲಾಗದ ನಿತ್ರಾಣ ಸ್ಥಿತಿ ತಲುಪಿರುವವರನ್ನು ಆರೈಕೆ ಮಾಡುವ ಮನಸ್ಸುಗಳು ನಮ್ಮ ಸುತ್ತಮತ್ತ ಕಡಿಮೆಯಾಗಿದೆ. ಇನ್ನು ಅಪರಿಚಿತರು ಸತ್ತರೆ ಸುತ್ತಮುತ್ತ ಓಡಾಡುವ ಜನರು ಶವದ ವಾಸನೆಗೆ ಅಥವಾ ನಾಯಿ ಬೊಗಳುವಿಕೆಯಿಂದ ಅನುಮಾನದಿಂದಲೇ ಪೊಲೀಸರಿಗೆ ಮಾಹಿತಿ ನೀಡುತ್ತಾರೆ.
ಹಿರಿಯರು ರಸ ಹೀರಿ ಬಿಸಾಡಿದ ಕಬ್ಬಿನ ಜಲ್ಲೆಯಲ್ಲ!
ಸಾಕಲಾಗದೆ ಬಿಟ್ಟು ಹೋಗುತ್ತಾರೆ
ಈ ಕುರಿತಾಗಿ ಮಾತನಾಡುವ ಪೊಲೀಸರು ಶುಚಿಗೊಳಿಸದ ಬಟ್ಟೆ, ದೇಹ , ಕೆದರಿದ ಕೂದಲು , ಸೊರಗಿದ ದೇಹ ಅನಾಥ ಶವಗಳ ಕುರುಹುಗಳಾಗಿದ್ದು ಕಾಯಿಲೆಗೆ ಅಥವಾ ವಯಸ್ಸಾದ ಕಾರಣ ಪೋಷಕರನ್ನು ಸಾಕಲಾಗದೆ ಬಿಟ್ಟು ಹೋಗುತ್ತಾರಂತೆ.
ಭಿಕ್ಷೆ ಬೇಡಿ ತಿಂದು ಬದುಕುತ್ತಿದ್ದಾರೆ
ಆಸ್ಪತ್ರೆಗೂ ಅಥವಾ ಇನ್ನೆಲ್ಲಿಗೋ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ನಂತರ ಅವರನ್ನು ದಿಕ್ಕು ತಪ್ಪಿಸಿ ನಗರದ ಯಾವುದಾದರೊಂದು ಪ್ರದೇಶದಲ್ಲಿ ಬಿಟ್ಟು ಹೋಗಿರುವ ಅನೇಕ ಉದಾಹರಣೆಗಳಿವೆ. ಅಲ್ಲದೇ ಮೃತಪಟ್ಟವರ ಚಹರೆಯನ್ನು ಮಾಧ್ಯಮಗಳ ಮೂಲಕ ಪ್ರಕಟಿಸಿದಾಗಲೂ ಬಂದು ನೋಡದವರೂ ಇದ್ದಾರೆ. ಒಂದಲ್ಲ ಒಂದು ಕಾರಣದಿಂದ ರಸ್ತೆಗೆ ಬಿದ್ದ ಹಿರಿಯ ಜೀವಗಳು ಭಿಕ್ಷೆ ಬೇಡಿ ತಿಂದು ಬದುಕು ಸಾಗಿಸುತ್ತಿದ್ದಾರೆ.