ಮೈಸೂರು ಓಪನ್ ಸ್ಟ್ರೀಟ್ ಸಾಂಸ್ಕೃತಿಕ ದಿಬ್ಬಣಕ್ಕೆ ಅದ್ಧೂರಿ ಚಾಲನೆ
ಮೈಸೂರು, ಅಕ್ಟೋಬರ್ 13: ಐತಿಹಾಸಿಕ ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನಲ್ಲಿ ಓಪನ್ ಸ್ಟ್ರೀಟ್ ಹಬ್ಬ ಆರಂಭವಾಗಿದ್ದು, ಕೃಷ್ಣರಾಜ ಬುಲ್ವರ್ಡ್ ರಸ್ತೆಯಲ್ಲಿ ಜನಸಾಗರವೇ ನೆರೆದಿದೆ.
ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಚಾಲನೆ ನೀಡಿದ್ದಾರೆ. ಮಕ್ಕಳು, ದೊಡ್ಡವರು, ವಿದ್ಯಾರ್ಥಿಗಳೆನ್ನದೇ ಸಾವಿರಾರು ಬಂದಿ ಆಗಮಿಸುತ್ತಿದ್ದಾರೆ. ಕೃಷ್ಣರಾಜ ಬುಲ್ವರ್ಡ್ ರಸ್ತೆಯಲ್ಲಿ ಓಪನ್ ಸ್ಟ್ರೀಟ್ ಹಬ್ಬ ನಡೆಯುತ್ತಿದೆ. ಎಲ್ಲರೂ ಕಣ್ತುಂಬಿಕೊಳ್ಳುತ್ತಿದ್ದಾರೆ.
ಓಪನ್ಸ್ಟ್ರೀಟ್ ಫೆಸ್ಟಿವಲ್ನಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಪಾಲಿಕೆ ಆಯುಕ್ತ ಜಗದೀಶ್ ಭಾಗಿಯಾಗಿದ್ದರು. ವಿವಿಧ ಕಲಾತಂಡ ಜತೆಗೆ ನಾಗರಿಕರು ಸೇರಿ ನೃತ್ಯ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಓಪನ್ ಸ್ಟ್ರೀಟ್ ಫೆಸ್ಟಿವಲ್ ಉದ್ಘಾಟನೆ ಬಿಜೆಪಿ ನಾಯಕರು ಕಾದು ಕಾದು ಸುಸ್ತಾದ ಘಟನೆಯೂ ನಡೆಯಿತು.
ಶಾಸಕ ಎಸ್ಎ ರಾಮ್ದಾಸ್ ಹಾಗೂ ನಾಗೇಂದ್ರ ಕಾರ್ಯಕ್ರಮದಿಂದ ವಾಪಸ್ಸಾದರು. ಓಪನ್ಸ್ಟ್ರೀಟ್ ಕಾರ್ಯಕ್ರಮಕ್ಕೆ ಸ್ವಲ್ಪ ಮುಂಚಿತವಾಗಿಯೇ ಆಗಮಿಸಿದ್ದ ಬಿಜೆಪಿ ನಾಯಕರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರವಾಸೋದ್ಯಮ ಸಚಿವರಿಗಾಗಿ ಕಾದು ಸುಸ್ತಾದರು. 10 ಗಂಟೆಗೆ ಆರಂಭಗೊಳ್ಳಬೇಕಿದ್ದ ಕಾರ್ಯಕ್ರಮ 11 ಗಂಟೆಯಾದರೂ ಪ್ರಾರಂಭವಾಗಿರಲಿಲ್ಲ.

ಕುಂಬಾರ ಕಲೆ ತರಬೇತಿ
ಓಪನ್ ಸ್ಟ್ರೀಟ್ ಪೆಸ್ಟಿವಲ್ನಲ್ಲಿ ಮಡಿಕೆ ಇನ್ನಿತರೆ ಮಣ್ಣಿನಿಂದ ಮಾಡುವ ಸವ್ತುಗಳ ಕುರಿತು ತರಬೇತಿ ನೀಡಲಾಯಿತು, ಯುವ ಸಮುದಾಯವು ಆಸಕ್ತಿಯಿಂದ ಮಡಿಕೆ ಮಾಡುವ ವಿಧಾನವನ್ನು ಕಲಿತುಕೊಂಡರು.

ಜ್ಯೂನಿಯರ್ ವಿಷ್ಣುವರ್ಧನ್ ನೋಡಿ ಬೆರಗಾದ ಜನತೆ
ಸಾಹಸಸಿಂಹ ವಿಷ್ಣುವರ್ಧನ್ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ, ಹಾಗೆಯೇ ಇಲ್ಲೊಬ್ಬ ಜ್ಯೂನಿಯರ್ ವಿಷ್ಣುವರ್ಧನ್ ಬಂದು ಜನರು ಬಾಯ್ಮೇಲೆ ಬೆರಳಿಡುವಂತೆ ಮಾಡಿದರು. ಆಪ್ತಮಿತ್ರದಲ್ಲಿ ವಿಷ್ಣುವರ್ಧನ್ ತೊಟ್ಟಿದ್ದ ಉಡುಗೆ ಶೈಲಿಯ ಬಟ್ಟೆಯನ್ನು ತೊಟ್ಟು ಬಂದಿದ್ದರು. ಜನರು ತದೇಕಚಿತ್ತದಿಂದ ಅವರನ್ನೇ ವೀಕ್ಷಿಸುತ್ತಿದ್ದರು.

ಕಲಾವಿದರ ಜತೆಗೆ ಯುವತಿಯರ ಸೆಲ್ಫೀ
ಓಪನ್ ಸ್ಟ್ರೀಟ್ ಫೆಸ್ಟಿವಲ್ಗೆ ಆಗಮಿಸಿದ್ದ ಅನೇಕ ಕಲಾವಿದರ ಜತೆಗೆ ಯುವಕ, ಯುವತಿಯರು ಸೆಲ್ಫೀ ತೆಗೆದುಕೊಂಡರು. ಕಲಾತಂಡಗಳಿಂದ ನೃತ್ಯ ಕಾರ್ಯಕ್ರಮವೂ ನಡೆಯಿತು.

ಕಾರ್ಯಕ್ರಮದಿಂದ ಹೊರನಡೆದ ರಾಮ್ದಾಸ್
ಬಿಜೆಪಿ ಶಾಸಕ ರಾಮ್ದಾಸ್ ಓಪನ್ಸ್ಟ್ರೀಟ್ ಹಬ್ಬದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು, ಆದರೆ ನಿಗಧಿತ ಅವಧಿಗಿಂತ ಒಂದು ಗಂಟೆ ಮೀರಿದರೂ ಸಚಿವರು ಆಗಮಿಸಿರಲಿಲ್ಲ ಹಾಗಾಗಿ ಬೇಸರದಿಂದ ಕಾರ್ಯಕ್ರಮ ಅರ್ಧಕ್ಕೇ ಬಿಟ್ಟು ಹೊರ ನಡೆದರು.












Click it and Unblock the Notifications