ಇನ್ನೆರಡು ದಿನಗಳಲ್ಲಿ ಆರೆಂಜ್ ಝೋನ್ ಆಗುತ್ತದಾ ಮೈಸೂರು? ಇನ್ನುಳಿದಿರುವ ಕೇಸ್ ಎಷ್ಟು?
ಮೈಸೂರು, ಮೇ 13: ಲಾಕ್ ಡೌನ್ ಸಡಿಲಿಕೆ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟ ನಂತರ ಹೊರರಾಜ್ಯಗಳಿಂದ ಜಿಲ್ಲೆಗೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲಾಡಳಿತದ ಅವಿರತ ಶ್ರಮದ ಪರಿಣಾಮವಾಗಿ ಜಿಲ್ಲೆಯಲ್ಲಿ ಕಳೆದ 12 ದಿನಗಳಿಂದ ಕೊರೊನಾ ಸೋಂಕು ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಕೋವಿಡ್-19 ಪ್ರೋಟೊಕಾಲ್ ಅನುಸಾರ ಮತ್ತೆರಡು ದಿನ ಯಾವುದೇ ಹೊಸ ಪ್ರಕರಣ ದಾಖಲಾಗದಿದ್ದಲ್ಲಿ, ಕೆಂಪು ವಲಯದಲ್ಲಿರುವ ಮೈಸೂರು ಕಿತ್ತಳೆ ವಲಯ ವ್ಯಾಪ್ತಿಗೆ ಬರಲಿದೆ.
ಕಿತ್ತಳೆ ವಲಯ ವ್ಯಾಪ್ತಿಗೆ ಬಂದಲ್ಲಿ ಮತ್ತಷ್ಟು ಲಾಕ್ ಡೌನ್ ಸಡಿಲಗೊಳ್ಳಲಿದ್ದು, ಸ್ಥಗಿತಗೊಂಡಿರುವ ವಾಣಿಜ್ಯ ವಹಿವಾಟು ಚಟುವಟಿಕೆ ಹೆಚ್ಚಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ನಿರ್ಬಂಧಗಳಲ್ಲೂ ಬದಲಾವಣೆಗಳಾಗುವ ಸಾಧ್ಯತೆ ಇದೆ. ನಂಜನಗೂಡಿನ ಜುಬಿಲಿಯೆಂಟ್ ಕಾರ್ಖಾನೆಯ ಸಿಬ್ಬಂದಿ ಮತ್ತು ತಬ್ಲಿಘಿಗಳು ಸೇರಿದಂತೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 90ಕ್ಕೇರಿತ್ತಲ್ಲದೇ ಬೆಂಗಳೂರು ನಂತರ ಮೈಸೂರು 2ನೇ ಸ್ಥಾನದಲ್ಲಿತ್ತು.
ಸದ್ಯ 86 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇದೀಗ ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ ನಾಲ್ಕು ಆಗಿದೆ. ಇಡೀ ಜಿಲ್ಲೆಯಲ್ಲಿ ಈತನಕ ಕೊರೊನಾ ಸೋಂಕಿನಿಂದ ಒಬ್ಬರೂ ಮೃತಪಟ್ಟಿಲ್ಲ. ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು, ಆರೋಗ್ಯ ಇಲಾಖೆ, ಪೊಲೀಸರ ಶ್ರಮದಿಂದ ಮೈಸೂರು ಇನ್ನೆರಡು ದಿನಗಳಲ್ಲಿ ಕಿತ್ತಳೆ ವಲಯವಾಗುವ ನಿರೀಕ್ಷೆಯಿದೆ.

ಹೊರರಾಜ್ಯಗಳಿಂದ ಬರುವವರಿಗೆ ಸ್ಕ್ರೀನಿಂಗ್ ಪರೀಕ್ಷೆ ಹಾಗೂ ಕ್ವಾರೆಂಟೈನ್ ನಿಂದ ತಪ್ಪಿಸಿಕೊಳ್ಳದಂತೆ ತೀವ್ರ ಕಟ್ಟೆಚ್ಚರವಹಿಸಲಾಗಿದೆ. ಹೋಂ ಕ್ವಾರೆಂಟೈನ್ ಮಾಡಿದರೆ ತಪ್ಪಿಸಿಕೊಂಡು ಓಡಾಡುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಎಲ್ಲರನ್ನೂ ಕಡ್ಡಾಯವಾಗಿ ಫೆಸಿಲಿಟೇಟೆಡ್ ಕ್ವಾರೆಂಟೈನ್ ಗೆ ಒಳಪಡಿಸಲಾಗುತ್ತಿದೆ. ಹೊರರಾಜ್ಯಗಳಿಂದ ಬರುತ್ತಿರುವವರ ಮೇಲೆ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹದ್ದಿನ ಕಣ್ಣಿರಿಸಿದೆ.











Click it and Unblock the Notifications