ದಸರಾಗೆ ರಾಜಮನೆತನಕ್ಕೆ ಆಹ್ವಾನ, 36 ಲಕ್ಷ ಗೌರವಧನ
ಮೈಸೂರು, ಸೆಪ್ಟೆಂಬರ್ 18: ನಾಡಹಬ್ಬ ದಸರಾಕ್ಕೆ ಜಿಲ್ಲಾಡಳಿತದ ವತಿಯಿಂದ ಸೋಮವಾರ ರಾಜ ಕುಟುಂಬಕ್ಕೆ ಅಧಿಕೃತ ಆಹ್ವಾನ ನೀಡಲಾಗಿದೆ.
ಮೈಸೂರು ರಾಜಮನೆತನಕ್ಕೆ ಮೈಸೂರು ಜಿಲ್ಲಾಡಳಿತ ಹಾಗೂ ಸರಕಾರದಿಂದ ಅಧಿಕೃತ ಆಹ್ವಾನ ನೀಡಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ರಾಜ ಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೆ ದಸರೆಗೆ ಅನುವು ಮಾಡಿಕೊಡುವಂತೆ ಕೋರಿದರು.
ಮೈಸೂರು ಅರಮನೆಯಲ್ಲಿರುವ ರಾಜಮನೆತನದ ನಿವಾಸಕ್ಕೆ ಆಗಮಿಸಿದ ಉಸ್ತುವಾರಿ ಸಚಿವರು ಹಾಗೂ ದಸರಾ ವಿಶೇಷಾಧಿಕಾರಿ ಡಿ.ರಂದೀಪ್ ಅಧಿಕೃತ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಮೇಯರ್ ಎಂ.ಜೆ.ರವಿಕುಮಾರ್ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸಚಿವ ಮಹದೇವಪ್ಪನವರು ಮಾತನಾಡಿ, ರಾಜಮನೆತನಕ್ಕೆ 36 ಲಕ್ಷ ರುಪಾಯಿ ಗೌರವ ಧನವನ್ನು ನೀಡಿದ್ದೇವೆ. ಕಳೆದ ವರ್ಷ 35 ಲಕ್ಷ ನೀಡಿದ್ದೆವು. ಈ ವರ್ಷ 1 ಲಕ್ಷ ಹೆಚ್ಚು ನೀಡಿದ್ದೇವೆ. ದಸರೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಪ್ರಮೋದಾ ದೇವಿ ಒಡೆಯರ್ ತಿಳಿಸಿದ್ದಾರೆ. ದಸರಾಗೆ ಸಕಲ ಸಿದ್ಧತೆ ನಡೆದಿದೆ ಎಂದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಮಾತೆ ಪ್ರಮೋದಾ ದೇವಿ ಒಡೆಯರ್, ಖಾಸಗಿ ದರ್ಬಾರ್ ನಲ್ಲಿ ಯಾವುದೇ ಬದಲಾವಣೆ ಇಲ್ಲ. ಖಾಸಗಿ ದರ್ಬಾರ್ ನಲ್ಲಿ ಯದುವೀರ ಅವರೊಂದಿಗೆ ತ್ರಿಷಿಕಾ ಕುಮಾರಿ ಅವರೂ ಭಾಗವಹಿಸುತ್ತಾರೆ. ಪ್ರತಿವರ್ಷದಂತೆ ಖಾಸಗಿ ದರ್ಬಾರ್ ನಡೆಯಲಿದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಜಂಬೂ ಸವಾರಿಯ ಪುಷ್ಪಾರ್ಚನೆಯಲ್ಲೂ ಭಾಗಹಿಸುವರು ಎಂದರು.
ಜಿಲ್ಲಾಡಳಿತದ ಅಧಿಕೃತ ದಸರಾ ಆಮಂತ್ರಣ ಸ್ವೀಕರಿಸಿದ ಬಳಿಕ ಪುತ್ಥಳಿ ನಿರ್ಮಾಣದ ವಿಚಾರವಾಗಿ ಜಿಲ್ಲಾಧಿಕಾರಿಗೆ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ಈಗಲೇ ಉತ್ತರಿಸುವುದಿಲ್ಲ ಎಂದರು.












Click it and Unblock the Notifications