ಮೈಸೂರು ರಾಜವಂಶಸ್ಥರಿಗೆ 36 ಲಕ್ಷ ಗೌರವ ಧನ ನೀಡಲು ಆಕ್ಷೇಪ, ಏಕೆ?
ಮೈಸೂರು, ಸೆಪ್ಟೆಂಬರ್ 8 : ನಾಡಹಬ್ಬ ದಸರೆಗೆ ಮೈಸೂರು ರಾಜವಂಶಸ್ಥರಿಗೆ ಸರಕಾರದಿಂದ ಗೌರವಧನ ನೀಡುವುದಕ್ಕೆ ಮೈಸೂರು ವಿ.ವಿ ನಿವೃತ್ತ ಪ್ರಾಧ್ಯಾಪಕ ಪಿ.ವಿ.ನಂಜರಾಜ ಅರಸು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ ಮನೆತನಕ್ಕೆ 5 ವರ್ಷಗಳಲ್ಲಿ ನೀಡಿರುವ ಗೌರವಧನ ಕುರಿತು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ಕೋರಿದ್ದರು. 2012ರಿಂದ 2016-17ನೇ ಸಾಲಿನವರೆಗೆ ಒಟ್ಟು 1.36 ಕೋಟಿ ನೀಡಿರುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಈ ವರ್ಷವೂ ಯದುವಂಶದ ರಾಜಮಾತೆ ಪ್ರಮೋದಾದೇವಿ ಅವರಿಗೆ ಸರಕಾರ ನೀಡುವ 36 ಲಕ್ಷ ರುಪಾಯಿ ಹಣವನ್ನು ಈ ವರ್ಷವಾದರೂ ರದ್ದು ಪಡಿಸಿ, ಅದನ್ನು ಕೊಡಗು ಸಂತ್ರಸ್ತರ ಪರಿಹಾರ ನಿಧಿಗೆ ನೀಡುವಂತೆ ಮನವಿ ಮಾಡಿದ್ದಾರೆ.

ರಾಜವಂಶಸ್ಥರ ಆಧಿಪತ್ಯವೇ?
ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆಯೇ ಅಥವಾ ರಾಜವಂಶಸ್ಥರ ಆಧಿಪತ್ಯದಲ್ಲಿ ಇದ್ದೇವೆಯೇ ಎಂದು ಅರಸು ಪ್ರಶ್ನಿಸಿದ್ದಾರೆ. ಈ ಹಿಂದೆ ಪಾಳೇಗಾರರು ವಿಜಯನಗರ ಅರಸರಿಗೆ ಕಪ್ಪ- ಕಾಣಿಕೆ ನೀಡುತ್ತಿದ್ದರು. ಹಾಗಾದರೆ ಈಗ ರಾಜ್ಯ ಸರಕಾರದಿಂದ ರಾಜವಂಶಸ್ಥರಿಗೆ ಕಪ್ಪ- ಕಾಣಿಕೆ ನೀಡುತ್ತಿದ್ದಾರೆಯೇ ಅಥವಾ ಅದು ಲಂಚವೇ ಎಂದು ಅವರು ಪ್ರಶ್ನಿಸಿದ್ದಾರೆ.
ಗೌರವಧನ ನೀಡುವುದು ಹಿಂದಿನಿಂದ ಬಂದಿರುವ ಸಂಪ್ರದಾಯ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಇದೆಂಥ ಸಂಪ್ರದಾಯ ಎಂದು ಪ್ರಶ್ನಿಸಿದರೆ ಉತ್ತರವನ್ನು ಯಾರೂ ನೀಡುತ್ತಿಲ್ಲ. ಇಷ್ಟು ದೊಡ್ಡ ಮೊತ್ತವನ್ನು ರಾಜವಂಶಸ್ಥರಿಗೆ ನೀಡುವ ಬದಲು ಅದನ್ನು ಕೊಡಗಿನ ನೆರೆ ಸಂತ್ರಸ್ತರಿಗೆ ನೀಡಿದರೆ ದೊಡ್ಡ ಕಾಣಿಕೆಯಾಗುತ್ತದೆ. ಈ ಕೆಲಸವನ್ನು ರಾಜವಂಶಸ್ಥರೇ ಮಾಡಿದರೂ ಅವರು ದೊಡ್ಡವರಾಗುತ್ತಾರೆ ಎಂದಿದ್ದಾರೆ.

ಸರಕಾರ ನೀಡುವ ಹಣ ಹಾಗೂ ರಾಜಮನೆತನದವರು ತೆಗೆದುಕೊಳ್ಳುವ ಹಣ ಸಾರ್ವಜನಿಕರದಾಗಿದೆ. ಆದ್ದರಿಂದ ಈ ಬಾರಿಯಾದರೂ ಸರಕಾರ ಆ ಹಣವನ್ನು ಕೊಡಗಿಗೆ ನೀಡಬೇಕು. ಇಲ್ಲವಾದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಾದರೂ ಸ್ವಇಚ್ಛೆಯಿಂದ ಹಣ ಬೇಡವೆಂದೋ ಅಥವಾ ಅವರೇ ವೈಯಕ್ತಿಕವಾಗಿ ಗೌರವಧನವನ್ನು ಕೊಡಗಿಗೆ ನೀಡಬೇಕು ಎಂದು ಕನ್ನಡ ವೇದಿಕೆ ಅಧ್ಯಕ್ಷ ಬಾಲು ಅವರು ಹೇಳಿದ್ದಾರೆ.












Click it and Unblock the Notifications