ಕರ್ನಾಟಕ ರಾಜ್ಯ ಮುಕ್ತ ವಿವಿ ಕರ್ಮಕಾಂಡ: ಚಾಲೆಂಜ್ ಸ್ವೀಕರಿಸಿದ ಮಾಜಿ ಉಪಕುಲಪತಿ
ಮೈಸೂರು, ಜುಲೈ: 01 ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಸ್ಎಸ್ಒಯು) ಕರ್ಮಕಾಂಡ ಗೊತ್ತಿಲ್ಲದವರಿಲ್ಲ. ಈ ಕರ್ಮಕಾಂಡ, ಭ್ರಷ್ಟಾಚಾರದಿಂದಾಗಿ 10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ಮುಸುಕಾಗಿರುವುದು ಹಳೆಯ ಸಂಗತಿ.
ಈ ಸಂಬಂಧ ಬಿಜೆಪಿ ನಾಯಕ ಗೋ ಮಧುಸೂದನ್ ಅವರು ಆಗ್ಗಾಗ್ಗೆ ಸುದ್ದಿಗೋಷ್ಠಿ ನಡೆಸಿ, ಮಾಜಿ ಉಪಕುಲಪತಿ, ಹಾಲಿ ಜೆಡಿಎಸ್ ನಾಯಕ ಕೆಎಸ್ ರಂಗಪ್ಪ ವಿರುದ್ಧ ಹರಿಹಾಯುತ್ತಿರುತ್ತಾರೆ.
ಬುಧವಾರ ಅವರು ಈ ಸಂಬಂಧ ಮುಕ್ತ ಚರ್ಚೆಗೆ ರಂಗಪ್ಪನವರನ್ನು ಆಹ್ವಾನಿಸಿದ್ದರು. ಇದೀಗ ರಂಗಪ್ಪ ಈ ಚಾಲೆಂಜ್ ಒಪ್ಪಿಕೊಂಡಿದ್ದಾರೆ. ಸ್ಥಳ ಮತ್ತು ದಿನಾಂಕ ನಿಗದಿ ಮಾಡುವಂತೆ ವಿಶ್ರಾಂತ ಅವರು ಕೋರಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ರಂಗಪ್ಪ ಅವರು ಗೋ. ಮಧುಸೂದನ ಅವರ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸುತ್ತೇನೆ. ಬಹಿರಂಗ ಚರ್ಚೆಗೆ ಈ ಹಿಂದೆ ಹಲವು ಬಾರಿ ಆಹ್ವಾನ ನೀಡಿದ್ದೆ. ಆ ಸಮಯದಲ್ಲಿ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಈಗ ಚರ್ಚೆಗೆ ಮುಂದಾಗಿರುವುದು ನಿಜಕ್ಕೂ ಸಂತಸ ತಂದಿದೆ. ಇದು ಸಾರ್ವಜನಿಕ ವಲಯದಲ್ಲಿ ಉದ್ಭವಿಸಿರುವ ಗೊಂದಲಗಳಿಗೆ ತೆರೆ ಎಳೆಯಲಿದೆ ಎಂಬ ವಿಶ್ವಾಸ ನನ್ನದು ಎಂದು ತಿಳಿಸಿದ್ದಾರೆ.

ಹಿರಿಯ ರಾಜಕಾರಣಿ ಗೋ.ಮಧೂಸೂದನ ಅವರು ಬಹಿರಂಗ ಚರ್ಚೆಗೆ ದಿನಾಂಕ, ವೇದಿಕೆ ನಿಗದಿಪಡಿಸಲಿ. ಇಂದಿನಿಂದ ಒಂದು ವಾರಗಳ ತನಕ ತಾನು ಮೈಸೂರಿನಿಂದ ಹೊರ ತೆರಳದೆ ಅವರ ಆಹ್ವಾನಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.












Click it and Unblock the Notifications