ಬೆಂಗಳೂರಿನಿಂದ ಮೈಸೂರಿಗೆ ರಾತ್ರಿ ರೈಲು ಸಂಚಾರವಿಲ್ಲ
ಮೈಸೂರು, ಡಿಸೆಂಬರ್ 18 : ಬೆಂಗಳೂರಿನಿಂದ ಮೈಸೂರಿನತ್ತ ಪ್ರಯಾಣಿಸುವವರಿಗೆ ವಾರದಲ್ಲಿ 4 ದಿನ ಸಂಜೆ 7ರ ನಂತರ ಪ್ರಯಾಣಿಸಲು ರೈಲು ಇರುವುದಿಲ್ಲ. ರಾತ್ರಿ 7 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲು ನಿಲ್ದಾಣದಿಂದ ಹೊರಡುವ ಪ್ಯಾಸೆಂಜರ್ ಕಡೆಯ ರೈಲು. ಇದು ತಪ್ಪಿದರೆ ಮಧ್ಯರಾತ್ರಿ 12ರವರೆಗೂ ರೈಲ್ವೆ ನಿಲ್ದಾಣದಲ್ಲೇ ಕಾಲ ಕಳೆಯಬೇಕು!
ಪ್ರತಿದಿನ ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಇಂತಹದೊಂದು ಸುದ್ದಿ ಸಿಡಿಲು ಬಡಿದಂತಾಗಿದೆ. ಹೌದು! ಈ ರೀತಿಯ ಸೂಚನೆ ನೀಡುವ ಮೂಲಕ ನೈರುತ್ಯ ರೈಲ್ವೆ ಮೈಸೂರು-ಬೆಂಗಳೂರು ನಿತ್ಯ ಪ್ರಯಾಣಿಕರಿಗೆ ಶಾಕ್ ನೀಡಿದೆ.
ಮೈಸೂರು ಮಾರ್ಗವಾಗಿ ಸಂಚರಿಸುತ್ತಿದ್ದ ಬೆಂಗಳೂರು-ಕಣ್ಣೂರು, ಕಾರವಾರ ರೈಲು 2018ರ ಫೆ.10ರಿಂದ ಆರಂಭಿಸಿ ಪ್ರತಿ ಭಾನುವಾರದಿಂದ ಬುಧವಾರದವರೆಗೆ ಕುಣಿಗಲ್ ಮಾರ್ಗವಾಗಿ ಸಂಚರಿಸಲಿದೆ. ಇದರಿಂದ ಬೆಂಗಳೂರು-ಮೈಸೂರು ನಡುವೆ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಭಾರೀ ಅನಾನುಕೂಲವಾಗಲಿದೆ. ಈ ಎಕ್ಸ್ ಪ್ರೆಸ್ ರೈಲು ಉಳಿದ 3 ದಿನ ಈವರೆಗಿನಂತೆ ಮೈಸೂರು
ಮಾರ್ಗದಲ್ಲಿ ಸಂಚರಿಸಲಿದೆ.

ನಿತ್ಯ ರಾತ್ರಿ 8.30ಕ್ಕೆ ಬೆಂಗಳೂರಿನಿಂದ ಹೊರಡುತ್ತಿದ್ದ ಕಣ್ಣೂರು (ಕಾರವಾರ) ಎಕ್ಸ್ ಪ್ರೆಸ್ ರೈಲು ಫೆ.10ರ ನಂತರ ರಾತ್ರಿ 7.15ಕ್ಕೆ ಬೆಂಗಳೂರಿನಿಂದ ಹೊರಟು ಕುಣಿಗಲ್ ಮಾರ್ಗವಾಗಿ ಕಣ್ಣೂರು ಮತ್ತು ಕಾರವಾರದತ್ತ ತೆರಳಲಿದೆ. ಹಾಗಾಗಿ, ಮೈಸೂರು ಮಾರ್ಗದ ಪ್ರಯಾಣಿಕರಿಗೆ ಸಂಜೆ 7ರ ರೈಲು ತಪ್ಪಿದರೆ ರಾತ್ರಿ 12ಕ್ಕೆ ಹೊರಡುವ ಪ್ಯಾಸೆಂಜರ್ ರೈಲಿಗೇ ಕಾಯಬೇಕಾಗಿದೆ.
ಇದಕ್ಕೆ ಪ್ರಯಾಣಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಪ್ರವಾಸಿ ತಾಣವಾಗಿರುವ ಮೈಸೂರಿಗೆ ಕಣ್ಣೂರು ಎಕ್ಸ್ ಪ್ರೆಸ್ ರೈಲಿನಲ್ಲಿ ಹೆಚ್ಚು ಜನ ಸಂಚರಿಸುತ್ತಾರೆ. ಈಗ ಏಕಾಏಕಿ ಮಾರ್ಗ ಬದಲಾವಣೆಯಿಂದ ಸಾಕಷ್ಟು ಸಮಸ್ಯೆ ಆಗಲಿದೆ. ಅಲ್ಲದೇ, ಮೈಸೂರು ಭಾಗದಿಂದ ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ, ಮಂಗಳೂರು, ಕಾರವಾರದತ್ತ ಈ ರೈಲಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೂ ಅನಾನುಕೂಲವಾಗಲಿದೆ. ಆದ್ದರಿಂದ ಕೂಡಲೇ ಇದಕ್ಕೆ ಪರ್ಯಾಯ ಸೇವೆ ಕಲ್ಪಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಬೆಂಗಳೂರು-ಮೈಸೂರು ನಡುವೆ ನಿತ್ಯವೂ ಅತಿ ಹೆಚ್ಚು ಅಂದರೆ 20ಕ್ಕೂ ಅಧಿಕ ರೈಲುಗಳು ಸಂಚರಿಸುತ್ತವೆ. ನಿತ್ಯ ಕನಿಷ್ಠ 20 ಸಾವಿರ ಜನ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಮಂಡ್ಯ,ರಾಮನಗರ, ಚನ್ನಪಟ್ಟಣ ಸುತ್ತಲ ಪ್ರದೇಶದಿಂದಲೇ 5-6 ಸಾವಿರ ಜನ ನಿತ್ಯವೂ ಬೆಂಗಳೂರಿಗೆ ಕೆಲಸಕ್ಕಾಗಿ ಹೋಗಿ ಬರುತ್ತಾರೆ. ಅವರಲ್ಲಿ ಬಹುತೇಕರು ರಾತ್ರಿ 8.30ರ ಕಣ್ಣೂರು ಎಸ್ ರೈಲನ್ನೇ ಅವಲಂಬಿಸಿದ್ದಾರೆ. ಅವರೆಲ್ಲರಿಗೂ ಕೆಲಸ ಮುಗಿಸಿ ವಾಪಸಾಗಲು ಸಮಸ್ಯೆಯಾಗಲಿದೆ.
ಇನ್ನೊಂದೆಡೆ, ಮಂಗಳೂರು, ಕಾರವಾರಕ್ಕೆ ಹೋಗುವ ಪ್ರಯಾಣಿಕರಿಗೆ ಬೆಂಗಳೂರಿನಿಂದ ಕುಣಿಗಲ್ ಮಾರ್ಗವಾಗಿ ಮಂಗಳೂರಿಗೆ ಸಂಚರಿಸುವುದರಿಂದ 80 ಕಿ.ಮೀ.ಗಳಷ್ಟು ಅಂತರ ಕಡಿಮೆ ಆಗಲಿದೆ. ಜತೆಗೆ ಪ್ರಯಾಣ ಅವಧಿಯಲ್ಲಿ 2 ತಾಸು ಉಳಿತಾಯವೂ ಆಗಲಿದೆ.
ದೂರದೂರಿನ ಪಯಾಣಿಕರ ದೃಷ್ಟಿಯಿಂದ ಈ ಮಾರ್ಗ ಬದಲಾವಣೆ ಒಳ್ಳೆಯದೆ. ಇದನ್ನು ವಾರದಲ್ಲಿ 4 ದಿನಕ್ಕೆ ಸೀಮಿತಗೊಳಿಸದೆ, ವಾರದ ಏಳೂ ದಿನಗಳಿಗೆ ವಿಸ್ತರಿಸಬೇಕು. ಪರ್ಯಾಯವಾಗಿ ಮೈಸೂರಿಗೆ ರಾತ್ರಿ 8 ಅಥವಾ 8.30ರ ವೇಳೆ ಹೆಚ್ಚುವರಿ ರೈಲು ಸೇವೆ ಆರಂಭಿಸಬೇಕು. ಇದರಿಂದ ಸಾವಿರಾರು ಜನರಿಗೆ ಅನುಕೂಲ ಆಗಲಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ












Click it and Unblock the Notifications