ಅವ್ಯವಹಾರ ನಡೆಸಿಲ್ಲ : ಮೈಸೂರಿನ ವಿಕ್ರಂ ಆಸ್ಪತ್ರೆ ಸ್ಪಷ್ಟನೆ
ನಗರದ ನಿವಾಸಿ ರವೀಂದ್ರ ಎಂಬುವವರು ವಿಕ್ರಂ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ಹಣ ಸುಲಿಗೆಯ ಬಗ್ಗೆ ದೂರು ಮೂರು ದಾಖಲಿಸಿದ್ದರು. ಜತೆಗೆ ಕಾನೂನು ಹೋರಾಟ ಆರಂಭಿಸಿದ್ದರು.
ಮೈಸೂರು, ಡಿಸೆಂಬರ್ 17 : ನಗರದ ಯಾದವಗಿರಿಯಲ್ಲಿರುವ ಪ್ರತಿಷ್ಠಿತ ವಿಕ್ರಂ ಆಸ್ಪತ್ರೆ 'ಕರ್ನಾಟಕ ಪ್ರೈವೆಟ್ ಮೆಡಿಕಲ್ ಆಕ್ಟ್'ನ ನಿಯಮಗಳನ್ನು ಪಾಲಿಸುತ್ತಿದ್ದು, ಯಾವುದೇ ಅವ್ಯವಹಾರ ಹಾಗೂ ಅವ್ಯವಸ್ಥೆಗಳಿಗೆ ಎಡೆ ಮಾಡಿಕೊಟ್ಟಿಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಶನಿವಾರ ಸ್ಪಷ್ಟನೆ ನೀಡಿದೆ.
ಆಸ್ಪತ್ರೆಯ ಅವ್ಯವಹಾರ ಹಾಗೂ ಅವ್ಯವಸ್ಥೆ ಬಗ್ಗೆ ದೂರು ಬಂದಿದ್ದ ಹಿನ್ನೆಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯೂ ಆಗಿರುವ ಕರ್ನಾಟಕ ಖಾಸಗಿ ವೈದ್ಯಕೀಯ ನೊಂದಣಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಆಸ್ಪತ್ರೆಯ ಆಡಳಿತಾಧಿಕಾರಿಗೆ ಡಿಸೆಂಬರ್ 2ರಂದು ಷೋಕಾಸ್ ನೋಟಿಸ್ ಜಾರಿ ಮಾಡಿ ಆಸ್ಪತ್ರೆಯ ಬಾಗಿಲು ಮುಚ್ಚಿಸುವ ಎಚ್ಚರಿಕೆ ನೀಡಿದ್ದರು.
ಈ ಕುರಿತು ಒನ್ಇಂಡಿಯಾ ಕನ್ನಡ ಕೂಡ ಕಳೆದೆರಡು ದಿನಗಳ ಕೆಳಗೆ ಸುದ್ದಿ ಬಿತ್ತರಿಸಿತ್ತು. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಸ್ಪತ್ರೆಯ ಆಡಳಿತ ಮಂಡಳಿ, 18 ಆಗಸ್ಟ್ 2014ರಂದು ಜಿಲ್ಲಾ ಆರೋಗ್ಯ ಕುಟುಂಬಾಧಿಕಾರಿ, ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ, ಹಾಗೂ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಪ್ರಾಧಿಕಾರದ ಅಧಿಕಾರಿಯನ್ನೊಳಗೊಂಡ ಸಮಿತಿ ಆಸ್ಪತ್ರೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದರು. [ಮೈಸೂರಿನ ವಿಕ್ರಂ ಆಸ್ಪತ್ರೆಗೆ ಬೀಳಲಿದೆಯೇ ಬೀಗಮುದ್ರೆ?]

ಈ ವೇಳೆ ಆಸ್ಪತ್ರೆಯು ಪ್ರೈವೆಟ್ ಮೆಡಿಕಲ್ ಆಕ್ಟ್ ನ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ವರದಿ ನೀಡಿದರು. ಹೀಗಾಗಿ ಆಸ್ಪತ್ರೆಯ ವ್ಯವಸ್ಥೆ ಹಾಗೂ ವ್ಯವಹಾರದ ಬಗ್ಗೆ ಯಾವುದೇ ಅಪನಂಬಿಕೆ ಅನುಮಾನಗಳನ್ನು ಇಟ್ಟುಕೊಳ್ಳಬಾರದು ಎಂದು ಒನ್ಇಂಡಿಯಾ ಪ್ರತಿನಿಧಿಗೆ ಸ್ಪಷ್ಟನೆ ನೀಡಿದರು.
ನಗರದ ನಿವಾಸಿ ರವೀಂದ್ರ ಎಂಬುವವರು ವಿಕ್ರಂ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ಹಣ ಸುಲಿಗೆಯ ಬಗ್ಗೆ ದೂರು ಮೂರು ದಾಖಲಿಸಿದ್ದರು. ಜತೆಗೆ ಕಾನೂನು ಹೋರಾಟ ಆರಂಭಿಸಿದ್ದರು. ಮೂರು ವರ್ಷಗಳ ಈ ಸತತ ಹೋರಾಟದ ಫಲವಾಗಿ ವಿಕ್ರಂ ಆಸ್ಪತ್ರೆಗೆ ಷೋಕಾಸ್ ನೋಟೀಸ್ ಜಾರಿಯಾಗಿತ್ತು. ಒಟ್ಟಾರೆ ಈ ಪ್ರಕರಣ ಹಲವು ಗೊಂದಲಗಳಿಗೆ ಎಡೆಮಾಡಿಕೊಟ್ಟಿದ್ದು, ಆಸ್ಪತ್ರೆ ಸಿಬ್ಬಂದಿ ವರ್ಗ ಇನ್ನಾದ್ರೂ ಎಚ್ಚೆತ್ತುಕೊಳ್ಳುತ್ತದೆಯೇ ಎಂದು ಕಾದು ನೋಡಬೇಕಿದೆ.












Click it and Unblock the Notifications