ಹಾಡ್ಯ ಸರ್ಕಾರಿ ಶಾಲೆಯ ಮಕ್ಕಳ ಗೋಳಿಗೆ ಕೊನೆ ಎಂದು?
ಮೈಸೂರು, ಜನವರಿ 18: ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು.. ಪೀಠೋಪಕರಣಗಳಿಲ್ಲದೆ ನೆಲದಲ್ಲಿಯೇ ಕುಳಿತು ಪಾಠ ಕೇಳುವ ಮಕ್ಕಳು.. ಶೌಚಾಲಯವಿಲ್ಲದೆ ಬಯಲಿಗೆ ಹೋಗುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು.. ಕುಡಿಯಲು ಶುದ್ಧ ನೀರಿಲ್ಲದೆ ಪರದಾಟ.. ರಾತ್ರಿಯಾಯಿತೆಂದರೆ ಶಾಲೆಯನ್ನೇ ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಕಿಡಿಗೇಡಿಗಳು.. ಇದು ಗ್ರಾಮೀಣ ಪ್ರದೇಶಗಳಲ್ಲಿರುವ ಹೆಚ್ಚಿನ ಸರ್ಕಾರಿ ಶಾಲೆಗಳ ದುಸ್ಥಿತಿಯಾಗಿದೆ.
ದುಸ್ಥಿತಿಯಲ್ಲಿ ಸಾಗುತ್ತಿರುವ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಪೈಕಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೂ ಒಂದಾಗಿದೆ. ಈಗಾಗಲೇ ಹಲವು ವಿದ್ಯಾರ್ಥಿಗಳು ಬೇರೆ ಶಾಲೆಗಳತ್ತ ಮುಖ ಮಾಡಿದ್ದರೆ ಕೆಲವೇ ಕೆಲವು ಬಡ ಮಕ್ಕಳು ಮಾತ್ರ ಇಲ್ಲಿ ಓದುತ್ತಿದ್ದಾರೆ.
ಈ ಮಕ್ಕಳಿಗೆ ಈ ಶಾಲೆಯನ್ನು ಹೊರತು ಪಡಿಸಿ ಬೇರೆ ಶಾಲೆಗೆ ಹೋಗಲಾರದ ಪರಿಸ್ಥಿತಿ ಇರುವ ಕಾರಣದಿಂದಾಗಿ ಇಲ್ಲಿಗೆ ಬರುತ್ತಿದ್ದಾರೆ. ಇಷ್ಟಕ್ಕೂ ಶಾಲೆಗೆ ಬರುವ ಮಕ್ಕಳು ನೆಮ್ಮದಿಯಾಗಿ ಪಾಠ ಕಲಿಯಲು ಇಲ್ಲಿ ಮೂಲಭೂತ ಸೌಲಭ್ಯವಿದೆಯಾ ಎಂಬುದನ್ನು ನೋಡುವುದಾದರೆ ಅದು ಇಲ್ಲ ಎಂಬುದು ಈ ಶಾಲೆಯ ಕಟ್ಟಡವನ್ನು ನೋಡಿದ ತಕ್ಷಣವೇ ಹೇಳಬಹುದಾಗಿದೆ.
ಬೇರೆಡೆಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಹೋಲಿಸಿದರೆ ಇಲ್ಲಿ 1 ನೇ ತರಗತಿಯಿಂದ 5 ನೇ ತರಗತಿವರೆಗೆ ಸುಮಾರು100 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ ಮಕ್ಕಳಿಗೆ ಶಾಲೆಯಲ್ಲಿರಬೇಕಾದ ಯಾವ ಸೌಲಭ್ಯಗಳು ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಹೊರಗೆ ಕೂರಿಸಿ ಪಾಠ ಮಾಡುವಂತಾಗಿದೆ
ಸರ್ಕಾರಿ ಶಾಲೆಯಿರುವ ಹಾಡ್ಯಗ್ರಾಮ ವರುಣಾ ಕ್ಷೇತ್ರಕ್ಕೆ ಬರುತ್ತದೆ. ಹಿಂದೆ ಈ ಗ್ರಾಮವನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಪ್ರತಿನಿಧಿಸುತ್ತಿದ್ದರು. ಈಗ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಪ್ರತಿನಿಧಿಸುತ್ತಿದ್ದಾರೆ. ಇವತ್ತು ಈ ಶಾಲೆ ತಲುಪಿರುವ ದುಸ್ಥಿತಿಯನ್ನು ನೋಡಿದರೆ ನಿಜಕ್ಕೂ ಭಯವಾಗುತ್ತದೆ. ಕಾರಣ ಹಳೆಯಕಾಲದ ಶಾಲಾ ಕಟ್ಟಡ ದುಸ್ಥಿತಿಯಲ್ಲಿದೆ. ಜತೆಗೆ ಮಳೆ ಬಂದರೆ ಎಲ್ಲಿ ನೆಲಕ್ಕುರುಳಿ ಬಿಡುತ್ತದೆಯೇನೋ ಎಂಬ ಭಯವೂ ಕಾಡುತ್ತದೆ. ಆದರೆ ಮಕ್ಕಳು ಭಯದಲ್ಲಿ ಕಲಿಯುತ್ತಿದ್ದರೆ, ಶಿಕ್ಷಕರನ್ನು ಕೂಡ ಭಯ ಕಾಡದಿಲ್ಲ. ಏಕೆಂದರೆ ಮೇಲ್ಛಾವಣಿಗಳು ಕಿತ್ತು ಬೀಳುತ್ತಿವೆ. ಜತೆಗೆ ಗೋಡೆಯಲ್ಲಿ ಬಿರುಕು ಕೂಡ ಕಾಣಿಸಿಕೊಂಡಿದೆ. ಹೀಗಾಗಿಯೇ ಶಿಕ್ಷಕರು ಕೊಠಡಿಯಲ್ಲಿ ಕುಳ್ಳರಿಸಿ ಮಕ್ಕಳಿಗೆ ಪಾಠ ಮಾಡುವ ಬದಲು ಹೊರಗೆ ಕೂರಿಸಿ ಪಾಠ ಮಾಡುವಂತಾಗಿದೆ.

ನೆಲದಲ್ಲಿಯೇ ಕುಳಿತು ಪಾಠ ಕೇಳಬೇಕಾಗಿದೆ
ಮಕ್ಕಳಿಗೆ ಕುಳಿತುಕೊಂಡು ನೆಮ್ಮದಿಯಾಗಿ ಪಾಠ ಕೇಳಲು ಬೆಂಚು ಡೆಸ್ಕ್ ನಂತಹ ಯಾವುದೇ ಪೀಠೋಪಕರಣಗಳಿಲ್ಲ. ಮಕ್ಕಳು ನೆಲದಲ್ಲಿಯೇ ಕುಳಿತು ಪಾಠ ಕೇಳಬೇಕಾಗಿದೆ. ಶಾಲೆಯಲ್ಲಿನ ದುಸ್ಥಿತಿ ನೋಡಿ ಇಂತಹ ಸೌಲಭ್ಯ ವಂಚಿತ ಮತ್ತು ಶಿಥಿಲಾವಸ್ಥೆಯ ಕಟ್ಟಡವಿರುವ ಶಾಲೆಗೆ ಕಳುಹಿಸಿ ಏನಾದರು ತೊಂದರೆಯಾದರೆ ಮಕ್ಕಳ ಗತಿಯೇನು ಎಂದು ಹೆದರಿದ ಬಹಳಷ್ಟು ಪೋಷಕರು ಇಲ್ಲಿಗೆ ಮಕ್ಕಳನ್ನು ಸೇರಿಸಲು ಮುಂದೆ ಬರುತ್ತಿಲ್ಲ.

ಅನಾಹುತ ಸಂಭವಿಸಿದಾಗ ಎಚ್ಚರಗೊಳ್ಳುತ್ತಾರೆ
ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಮತ್ತು ಅಭಿವೃದ್ಧಿ ಪಡಿಸುವ ಕುರಿತಂತೆ ಸರ್ಕಾರ ಘಂಟಾನುಘಂಟವಾಗಿ ಹೇಳುತ್ತಾ ಬರುತ್ತಿದ್ದರೂ ಅವುಗಳೆಲ್ಲ ಭಾಷಣಕ್ಕಷ್ಟೆ ಸೀಮಿತವಾಗಿದ್ದು, ಸರ್ಕಾರಿ ಶಾಲೆಗಳ ಪರಿಸ್ಥಿತಿ ಸುಧಾರಿಸಿದ ಬಗೆಗಿನ ನಿದರ್ಶನಗಳು ಕಡಿಮೆಯೇ ಎನ್ನಬೇಕು. ಶಾಲಾ ಕಟ್ಟಡಗಳು ಶಿಥಿಲಗೊಂಡು ಅವು ನೆಲಕ್ಕುರುಳುವ ತನಕ ಯಾವ ಜನಪ್ರತಿನಿಧಿಯೂ ಸೊಲ್ಲೆತ್ತುವುದಿಲ್ಲ. ಒಂದು ವೇಳೆ ಅನಾಹುತ ಸಂಭವಿಸಿದಾಗ ಮಾತ್ರ ಎಚ್ಚರಗೊಳ್ಳುತ್ತಾರೆ. ಇವತ್ತು ಬಡ ಮಕ್ಕಳ ಶಿಕ್ಷಣ ಕುರಿತಂತೆ ಮಾತನಾಡುವುದೆಲ್ಲ ಬೊಗಳೇನಾ ಎಂಬುದು ಸರ್ಕಾರಿ ಶಾಲೆಗಳಿರುವ ಸ್ಥಿತಿಯನ್ನು ನೋಡಿದರೆ ಅರ್ಥವಾಗಿ ಬಿಡುತ್ತದೆ.

ಒಗ್ಗಟ್ಟಿನಿಂದ ಕೈಜೋಡಿಸಿ ಮಾಡಬೇಕಿದೆ
ಇನ್ನಾದರೂ ಸಂಬಂಧಿಸಿದವರು ಕೇವಲ ಹಾಡ್ಯ ಗ್ರಾಮದ ಸರ್ಕಾರಿ ಶಾಲೆ ಮಾತ್ರವಲ್ಲ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿರುವ ಶಾಲೆಗಳತ್ತ ಜನಪ್ರತಿನಿಧಿಗಳು ಗಮನಹರಿಸಬೇಕಿದೆ. ಅಲ್ಲಿನ ಒಂದಷ್ಟು ಸಮಸ್ಯೆಗಳನ್ನು ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿ ಮಾಡಬೇಕಿದೆ. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟವಾಗುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications