ನಿಪಾಹ್ ವೈರಸ್ ಭೀತಿ: ಮೈಸೂರು ಜಿಲ್ಲಾಡಳಿತದಿಂದ ಕಟ್ಟೆಚ್ಚರ
ಮೈಸೂರು, ಜೂನ್ 7: ಕೇರಳದ ಕೊಚ್ಚಿಯಲ್ಲಿ ನಿಪಾಹ್ ವೈರಸ್ ಪ್ರಕರಣ ದೃಢಪಟ್ಟಿರುವುದರ ಬೆನ್ನಲ್ಲೇ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಿದೆ.
ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಈಗಾಗಲೇ ನಿಪಾಹ್ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸರ್ಕಾರ ಸೂಚಿಸಿದೆ. ಮೈಸೂರು ಜಿಲ್ಲೆಯೂ ಆದ್ಯತಾ ಪಟ್ಟಿಯಲ್ಲಿರುವುದರಿಂದ ನಿಪಾಹ್ ವೈರಸ್ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ನಿಪಾಹ್ ವೈರಸ್ ಕಂಡುಬಂದ ಸಂದರ್ಭದಲ್ಲಿ ರೋಗಿಗಳಿಗೆ ಉಪಚರಿಸಲು ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಎರಡು ಹಾಸಿಗೆಯ ವಿಶೇಷ ತುರ್ತು ಚಿಕಿತ್ಸಾ ನಿಗಾ ಘಟಕ ತೆರೆಯಲು ಸೂಚಿಸಲಾಗಿದೆ.
ಜ್ವರ, ತಲೆನೋವು, ಮೈ ಕೈನೋವು, ವಾಂತಿ, ನಡುಕ, ನಿದ್ರಾಲಸ್ಯ, ತೊದಲುವಿಕೆ, ಪ್ರಜ್ಞಾಹೀನತೆ ಇದರ ಲಕ್ಷಣಗಳು. ಸೋಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆ ಹಾಗೂ ಸೂಕ್ತ ನಿರ್ವಹಣೆಯಿಂದ ಸೋಂಕನ್ನು ಗುಣಪಡಿಸಬಹುದು ಎನ್ನುತ್ತಾರೆ ಡಾ. ಪ್ರಶಾಂತ್.

ರಾಜ್ಯ ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ನಿಪಾಹ್ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಜನರು ಆತಂಕ ಪಡಬೇಕಾಗಿಲ್ಲ. ನಮ್ಮಲ್ಲಿ ಸೋಂಕು ಕಂಡು ಬರುವ ಸಾಧ್ಯತೆ ಕಡಿಮೆ. ಆದರೆ, ಕೇರಳದಲ್ಲಿ ಮತ್ತೆ ಪ್ರಕರಣ ವರದಿ ಆಗಿರುವುದರಿಂದ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ. ಕಳೆದ ವರ್ಷ ವಯನಾಡಿನಲ್ಲೇ ನಿಪಾಹ್ ಸೋಂಕು ಪತ್ತೆಯಾಗಿತ್ತು. ಈ ಬಾರಿ ಇನ್ನೂ ದೂರದಲ್ಲಿರುವ ಕೊಚ್ಚಿಯಲ್ಲಿ ಕಂಡು ಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೆಂಕಟೇಶ್ ತಿಳಿಸಿದ್ದಾರೆ.
ಬುಧವಾರದಿಂದಲೇ ಕೇರಳ ಗಡಿ ಭಾಗದ ಹೆಚ್.ಡಿ.ಕೋಟೆ ತಾಲೂಕಿನ ಹಾಡಿಗಳು, ಅರಣ್ಯ ನಿವಾಸಿಗಳಿರುವ ಸ್ಥಳಗಳಲ್ಲಿ ಆರೋಗ್ಯ ಇಲಾಖೆ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಜನರಿಂದ ರಕ್ತದ ಮಾದರಿ ಕಲೆ ಹಾಕುವುದು, ನಿಪಾಹ್ ವೈರಸ್ ಲಕ್ಷಣಗಳ ಬಗ್ಗೆ ನಿಗಾ ವಹಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.











Click it and Unblock the Notifications