ಇನ್ಮುಂದೆ ರೈಲ್ವೆ ಎಸಿ ಕೋಚ್ ಪ್ರಯಾಣಿಕರಿಗೆ ಹೊಸ ಹೊದಿಕೆ
ಮೈಸೂರು, ಆಗಸ್ಟ್ 3: ಹವಾನಿಯಂತ್ರಿತ ಕೋಚ್ ಗಳಲ್ಲಿ ಪ್ರಯಾಣಿಸುವವರ ಹಿತದೃಷ್ಟಿಯಿಂದ ಪ್ರತಿದಿನ ಶುಚಿಗೊಳಿಸಲು ಸಾಧ್ಯವಾಗುವ ತೆಳುವಾದ ಹೊಸ ವಿನ್ಯಾಸದ ಹೊದಿಕೆಗಳನ್ನು ಪ್ರಯಾಣಿಕರಿಗೆ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇನ್ನು 15 ದಿನಗಳಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, ಪ್ರಯಾಣಿಕರಿಗೆ ನೀಡಲಾಗುತ್ತಿರುವ ಹೊದಿಕೆಗಳು ಆರೋಗ್ಯಕರವಲ್ಲವೆಂಬ ಬಗ್ಗೆ ನಿರಂತರ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ಮೊದಲು ರೈಲಿನ ಪ್ರಥಮ ದರ್ಜೆ ಬೋಗಿಯಲ್ಲಿ ಪ್ರಯಾಣಿಸುವವರಿಗೆ ಒದಗಿಸುವ ಹೊದಿಕೆ (ಬ್ಲಾಂಕೆಟ್)ಗಳನ್ನು ಎರಡು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಆರೋಪ ಕೇಳಿಬಂದಿತ್ತು. ಅಲ್ಲದೇ, ಈ ಆರೋಪದ ಬಗ್ಗೆ ಇತ್ತೀಚೆಗೆ ರಾಜ್ಯಸಭೆಯಲ್ಲಿ ಮಾತನಾಡಿದ ರೈಲ್ವೆ ರಾಜ್ಯ ಸಚಿವ ಮನೋಜ್ ಸಿನ್ಹಾ ಅವರು, ಬೆಡ್ಶೀಟ್ಸ್ ಮತ್ತು ತಲೆದಿಂಬು ಹೊದಿಕೆ ಗಳನ್ನು ಪ್ರತಿದಿನ ಸ್ವಚ್ಛಗೊಳಿಸಿ ಒದಗಿಸುತ್ತಿದ್ದರೆ, ಬ್ಲಾಂಕೆಟ್ ಗಳನ್ನು ಎರಡು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಒಪ್ಪಿಕೊಂಡಿರುವುದು ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿತ್ತು. ಇಂತಹ ಕೊಳಕು ಹೊದಿಕೆಗಳನ್ನು ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ಯಾವುದೇ ಕಾರಣಕ್ಕೂ ಪೂರೈಸಬಾರದೆಂಬುದು ಕೆಲವರ ಆಗ್ರಹವಾಗಿದೆ.

ಈ ಹಿನ್ನೆಲೆಯಲ್ಲಿ ಚಿಂತನೆ ನಡೆಸಿರುವ ರೈಲ್ವೆ ಇಲಾಖೆ ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ತೆಳುವಾದ, ಕಡಿಮೆ ತೂಕದ, ಬೆಚ್ಚನೆಯ ಹೊದಿಕೆಗಳನ್ನು ಹಂತ-ಹಂತವಾಗಿ ಪೂರೈಕೆ ಮಾಡಲು ಮುಂದಾಗಿದೆ. ಇವುಗಳನ್ನು ಪ್ರತಿದಿನ ಶುಚಿಗೊಳಿಸಿ ಪಯಾಣಿಕರಿಗೆ ನೀಡಲು ಅನೂಕೂಲವಾಗಲಿದೆ
ಇನ್ನು ಮೈಸೂರಿನಲ್ಲೂ ಪ್ರತಿನಿತ್ಯ 850ಕ್ಕೂ ಹೆಚ್ಚು ಹೊದಿಕೆ:
ನೈರುತ್ಯ ರೈಲ್ವೆಯ ವ್ಯಾಪ್ತಿಯ ಮೈಸೂರಿನಿಂದ ಹೊರಡುವ 10 ರೈಲುಗಳಲ್ಲಿ ಹೊದಿಕೆಗಳ ಬಳಕೆಯಾಗುತ್ತಿದೆ. 42 ಕೋಚ್ ಗಳಲ್ಲಿ ಮೂರು ಹಂತದ ಕೋಚ್ ಗಳಿದ್ದು, ಪ್ರಥಮ ದರ್ಜೆಯ ಹವಾನಿಯಂತ್ರಿತ ಕೋಚ್ ನಲ್ಲಿ 64 ಮಂದಿ, ದ್ವಿತೀಯ ಹವಾನಿಯಂತ್ರಿತ ಕೋಚ್ ನಲ್ಲಿ 42 ಮಂದಿ ಹಾಗೂ ಮೂರನೇ ಹಂತದ ಹವಾನಿಯಂತ್ರಿತ ಕೋಚ್ ನಲ್ಲಿ 30 ಮಂದಿ ಪ್ರತಿದಿನ ಸಂಚರಿಸುತ್ತಿದ್ದಾರೆ. ನಿತ್ಯ, ವಾರಕ್ಕೊಮ್ಮೆ ಹಾಗೂ ವಾರದಲ್ಲಿ ಒಂದೆರಡು ದಿನ ಸಂಚರಿಸುವ ರೈಲುಗಳು ಸಹ ಇವೆ. ಇವುಗಳಿಗೆ ಮೈಸೂರಿನಲ್ಲಿ 1 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಯಾಂತ್ರೀಕೃತ ಲ್ಯಾಂಡ್ರಿಯಿಂದಲೇ ಹೊದಿಕೆ, ಬೆಡ್ಶೀಟ್ ವಿತರಿಸಲಾಗುತ್ತಿದೆ. 30 ರೂ ಒಂದು ಸೆಟ್ ಬೆಡ್ ಶೀಟ್, 1 ತಲೆ ದಿಂಬು, ಒಂದು ಹೊದಿಕೆ , ಒಂದು ಹ್ಯಾಂಡ್ ಟವಲ್ ನೀಡಲಾಗುತ್ತಿದೆ. ನಿತ್ಯ 3500 ಬೆಡ್ಶೀಟ್, 1750 ತಲೆದಿಂಬು, 850 ಹೊದಿಕೆಗಳನ್ನು ಪ್ರಯಾಣಿಕರು ಬಳಸಿಕೊಳ್ಳುತಿದ್ದಾರೆ.
ಇಲ್ಲಿಯೂ 2 ತಿಂಗಳಿನಿಂದ ಸ್ವಚ್ಛಗೊಳ್ಳದ ಹೊದಿಕೆ:
ದುಬಾರಿ ಬೆಲೆ ತೆತ್ತು ಪ್ರಥಮ ದರ್ಜೆ ಬೋಗಿಯಲ್ಲಿ ಪ್ರಯಾಣ ಸುವವರಿಗೂ ಕೊಳೆಯಾದ, ಎರಡು ತಿಂಗಳಿನಿಂದಲೂ ಸ್ವಚ್ಛಗೊಳಿಸದ ಹೊದಿಕೆಗಳನ್ನು ಒದಗಿಸುತ್ತಿರುವುದು ಪ್ರಯಾಣಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದರೆ, ಯಾಂತ್ರೀಕೃತ ಲಾಂಡ್ರೀಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣವನ್ನು ಇಲಾಖೆ ನೀಡಿ ಸುಮ್ಮನಾಗಿತ್ತು. ಇದು ಪ್ರಯಾಣಿಕರ ಆಕ್ರೋಶಕ್ಕೂ ಕಾರಣವಾಗಿತ್ತು ಕೂಡ.
ಇಲ್ಲಿಯೂ ದೂರು ಸಾಮಾನ್ಯ
ಹೊದಿಕೆ ಹರಿದಿದೆ, ಗಬ್ಬು ನಾರುತ್ತಿದೆ, ಸ್ವಚ್ಛವಾಗಿಲ್ಲ ಮೊದಲಾದ ದೂರುಗಳು ಮೈಸೂರು ರೈಲ್ವೆ ವಲಯದಲ್ಲೂ ಸಾಮಾನ್ಯ. . ಈ ಬಗ್ಗೆ ಆಗಿದಾಂಗೆ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿದರೂ, ದೂರುಗಳು ಮಾತ್ರ ಕಡಿಮೆ ಆಗಿಲ್ಲ. ಅಲ್ಲದೆ ಶುಚಿತ್ವ ಕಾಪಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೊಸ ವಿನ್ಯಾಸದ ºಹೊದಿಕೆಗಳನ್ನು ನೀಡಿದರೆ ಪ್ರಯಾಣಿಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ನೋಡಬೇಕೆನ್ನುತ್ತಾರೆ ಅಧಿಕಾರಿಗಳು.












Click it and Unblock the Notifications