ಮೈಸೂರಿನಲ್ಲಿ ಪ್ರಗತಿ ಪರಿಶೀಲನೆ ಸಭೆ; ಮಾಹಿತಿ ಪಡೆದ ಆರ್.ವಿ.ದೇಶಪಾಂಡೆ
ಮೈಸೂರು, ಜೂನ್ 20: ಮೈಸೂರಿನ ಜಿಲ್ಲಾ ಪಂಚಾಯಿತಿಯಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ಇಂದು ಪ್ರಗತಿ ಪರಿಶೀಲನೆ ಸಭೆ ನಡೆಯಿತು.
ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿರುವ ಸಚಿವ ಆರ್.ವಿ ದೇಶಪಾಂಡೆ, ತಾವರೇಕೆರೆ ಕಟ್ಟೆ ಗ್ರಾಮಕ್ಕೆ ಭೇಟಿ ಕೊಟ್ಟು ಸಾರ್ವಜನಿಕರ ಸಮಸ್ಯೆಯ ಬಗ್ಗೆ ಅಹವಾಲು ಸ್ವಿಕರಿಸಿದರು. ನೀರಿನ ಸಮಸ್ಯೆ ಪರಿಹರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದು, ನೀರಿನ ಸಮಸ್ಯೆ ಹಾಗೂ ಕಂದಾಯ ಖಾತೆ ಬಗ್ಗೆ ಅಧಿಕಾರಿಗಳ ಬಳಿ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಇದೇ ವೇಳೆ ಮೈಸೂರು ಜಿಲ್ಲೆಯಲ್ಲಿ ವಾರ್ಷಿಕ ಮಳೆ, ಈವರೆಗೆ ಆಗಿರುವ ಒಟ್ಟು ಮಳೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಮುಂಗಾರು ಅವಧಿಯ ಬಿತ್ತನೆ, ಕ್ಷೇತ್ರದ ಗುರಿ, ಮಳೆ ಆಶ್ರಿತ ಕ್ಷೇತ್ರಗಳ ಕುರಿತು ಮಾಹಿತಿ ನೀಡಿದರು. ನಷ್ಟವಾದ ಬೆಳೆಯ ವಿವರ, ಕುಡಿಯುವ ನೀರಿನ ಪೂರೈಕೆ ಕುರಿತು ಸಚಿವರು ಮಾಹಿತಿ ಪಡೆದುಕೊಂಡರು. ಮೇವಿನ ಲಭ್ಯತೆಯ ವಿವರವನ್ನೂ ಪಡೆದರು. ಅಧಿಕಾರಿಗಳು, ಮೈಸೂರಿನಲ್ಲಿ ಒಟ್ಟು ರೈತರ ಆತ್ಮಹತ್ಯೆ ಪ್ರಕರಣದ ವಿವರಗಳನ್ನು ಗಮನಕ್ಕೆ ತಂದರು.
ಒಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು, ಸಭೆ ವೇಳೆ ಸೂಕ್ತ ಮಾಹಿತಿ ನೀಡದ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಘಟನೆಯೂ ನಡೆಯಿತು. ಅಧಿಕಾರಿಯೊಬ್ಬರಿಗೆ ತರಾಟೆ ತೆಗೆದುಕೊಂಡ ಅವರು, ಮೇ ವರೆಗಿನ ಕಂದಾಯ ಪೂರ್ತಿ ಬಿಲ್ ಆಗಿದ್ಯಾ? ಬಿಲ್ ಹಾಕದೇ ಸುಳ್ಳು ಹೇಳಿದ್ರೆ ಸಸ್ಪೆಂಡ್ ಮಾಡ್ತೀನಿ' ಎಂದು ಎಚ್ಚರಿಕೆ ನೀಡಿದರು.

ಸಭೆಗೂ ಮುನ್ನ ರೈತರ ಪ್ರತಿಭಟನೆ: ಸಚಿವರ ಸಭೆಗೆ ರೈತರನ್ನು ಬಿಡದ ಹಿನ್ನೆಲೆ ಸಭೆ ನಡೆಯುತ್ತಿದ್ದ ಸಭಾಂಗಣದ ಮುಂಭಾಗವೇ ರೈತರು ಕುಳಿತು ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಲವು ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲು 11 ಗಂಟೆಗೆ ಸಚಿವರ ಭೇಟಿಗೆ ರೈತರು ಸಮಯಾವಕಾಶ ಕೋರಿದ್ದರು. ಆದರೆ ರೈತರ ಸಮಸ್ಯೆಗೆ ಸಚಿವರು ಸ್ಪಂದಿಸಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನೇರವಾಗಿ ಪ್ರಗತಿ ಪರಿಶೀಲನೆ ಸಭೆ ನಡೆಯುತ್ತಿರುವ ಸ್ಥಳಕ್ಕೆ ಬಂದ ರೈತರು, ಸಚಿವರು ಭೇಟಿಯಾಗುವಂತೆ ಪಟ್ಟುಹಿಡಿದು ಪ್ರತಿಭಟನೆ ನಡೆಸಿದರು. ನಂತರ ರೈತರ ಬಳಿ ಬಂದು ಸಮಸ್ಯೆಯನ್ನು ಸಚಿವರು ಆಲಿಸಿ ಬಗೆಹರಿಸುವುದಾಗಿ ಭರವಸೆ ನೀಡಿದರು.












Click it and Unblock the Notifications