ಯಾರಿಗೂ ಕೇರ್ ಮಾಡದೇ ಮೂತ್ರ ಮಾಡಿದ; ಪಾಲಿಕೆ ಕೈಲಿ ಹೀಗೆ ತಗಲಾಕ್ಕೊಂಡ
ಮೈಸೂರು, ಡಿಸೆಂಬರ್ 12: ಕೇಂದ್ರ ಸರ್ಕಾರ ಪ್ರತೀ ವರ್ಷವೂ ಸ್ವಚ್ಛ ಭಾರತ ಆಂದೋಲನದ ಪ್ರಚಾರಕ್ಕಾಗಿಯೇ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ. ಜಾಗೃತಿ ಕಾರ್ಯಕ್ರಮಗಳನ್ನೂ ಅಯೋಜಿಸುತ್ತದೆ. ಶೌಚಾಲಯ ನಿರ್ಮಾಣ ಮಾಡಲು ಸಬ್ಸಿಡಿಯನ್ನೂ ನೀಡುತ್ತಿದೆ. ಆದರೆ ಕೆಲವರು ಸಾರ್ವಜನಿಕ ಸ್ಥಳಗಳನ್ನು ಮಲಿನಗೊಳಿಸುವುದು ಮಾತ್ರ ಇನ್ನೂ ಬಿಟ್ಟಿಲ್ಲ.
ಬಯಲು ಪ್ರದೇಶದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿದರೆ ದಂಡ ವಿಧಿಸುವ ಕಾನೂನು ಇದ್ದರೂ ಕಿಂಚಿತ್ತೂ ಭಯವಿಲ್ಲದಂತೆ ವರ್ತಿಸುತ್ತಾರೆ. ಆದರೆ ಈ ರೀತಿ ಕಾನೂನು ಉಲ್ಲಂಘಿಸಿದ ವ್ಯಕ್ತಿಯೊಬ್ಬನಿಗೆ ಇಲ್ಲಿನ ಮಹಾ ನಗರ ಪಾಲಿಕೆ ದಂಡ ವಿಧಿಸಿ ಇತರರಿಗೂ ಎಚ್ಚರಿಕೆಯ ಸಂದೇಶ ನೀಡಿದೆ.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ತಿಲಕ್ ನಗರದ 16ನೇ ಕ್ರಾಸ್ ಬಳಿಯ ವಲಯ ಕಚೇರಿ-6ರ ಹಿಂಭಾಗ ಚೇತನ್ ಎಂಬ ವ್ಯಕ್ತಿ ಬುಧವಾರ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಇದನ್ನು ಗಮನಿಸಿ ಪ್ರಶ್ನಿಸಿದ ಮಹಿಳಾ ಆರೋಗ್ಯ ಇನ್ಸ್ಪೆಕ್ಟರ್ ಅವರೊಂದಿಗೆ ಚೇತನ್ ಅನುಚಿತವಾಗಿ ಎದುರುತ್ತರ ಕೊಟ್ಟಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ ನಗರಪಾಲಿಕೆ ಅಧಿಕಾರಿಗಳು ಆತನಿಗೆ ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಮೂತ್ರ ಮಾಡಿದ್ದಕ್ಕೆ ಒಂದು ಸಾವಿರ ದಂಡ ಹಾಕಿಸಿಕೊಂಡ ಆ ವ್ಯಕ್ತಿ ಮಾಡಿದ ತಪ್ಪಿಗೆ ದಂಡ ಕಟ್ಟಿದ್ದಾನೆ.












Click it and Unblock the Notifications