ಮೈಸೂರಿನ ಶೂಟೌಟ್ ಪ್ರಕರಣಕ್ಕೆ ದಿನಕ್ಕೊಂದು ತಿರುವು
ಮೈಸೂರು, ಮೇ 19: ಮೈಸೂರಿನಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. ದಂಧೆಕೋರರು ನೋಟು ಬದಲಾವಣೆ ಅಕ್ರಮ ದಂಧೆ ನಡೆಸಲು ಒಪ್ಪಂದ ಪತ್ರ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿಗಳ ಬಳಿಯಿದ್ದ ಹಣ ಬದಲಾವಣೆ ಒಪ್ಪಂದ ಪತ್ರ ಇದೀಗ ಪೊಲೀಸರ ಕೈ ಸೇರಿದೆ. ಬಿಳಿ ಹಾಳೆಯ ಮೇಲೆ ಕಂಪ್ಯೂಟರ್ ಮೂಲಕ ಟೈಪ್ ಮಾಡಿರುವ ಒಪ್ಪಂದ ಪತ್ರದಲ್ಲಿ ಹಣ ಬದಲಾವಣೆ ಸಂಬಂಧಿಸಿದಂತೆ ಸಾಕಷ್ಟು ನಿಬಂಧನೆಗಳನ್ನು ಮುದ್ರಿಸಲಾಗಿದೆ. ಪತ್ರದಲ್ಲಿ ದಿನಾಂಕ, ಸಮಯ, ಸ್ಥಳವನ್ನು ಉಲ್ಲೇಖ ಮಾಡಲಾಗಿದೆ.
ಹಣ ಬದಲಾವಣೆ ದಂಧೆಯೂ ಅಂದುಕೊಂಡಂತೆ ನಡೆದಿದ್ದಲ್ಲಿ 50 ಲಕ್ಷ ರೂ.ಹಣ ಕೊಡಬೇಕು ಎಂದು ದಂಧೆಕೋರರು ಹಾಗೂ ರದ್ದಾದ ನೋಟುಗಳನ್ನು ಸರಬರಾಜು ಮಾಡುವ ವ್ಯಕ್ತಿ ನಡುವೆ ಒಪ್ಪಂದ ಪತ್ರದಲ್ಲಿ ದಾಖಲಾಗಿದೆ.

ಇನ್ನು ಶೂಟೌಟ್ ಪ್ರಕರಣದ ಕೇಂದ್ರಬಿಂದುವಾದ ವಿಜಯನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಈ ಸಂಬಂಧ ಆದೇಶ ಹೊರಡಿಸಿರುವ ಸರ್ಕಾರ ಕುಮಾರ್ ಅವರನ್ನು ಬೆಂಗಳೂರು ಸೆಂಟರ್ ಐಜಿ ಕಚೇರಿಗೆ ವರ್ಗಾವಣೆ ಮಾಡಿದ್ದು, ಶೀಘ್ರವಾಗಿ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.
ಶೂಟೌಟ್ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿರುವುದರಿಂದ ವಿಚಾರಣೆ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ತನಿಖೆ ನಡೆಯಬೇಕೆಂದು ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಇನ್ನು ಫರೀದಾಬಾದ್ ಪೊಲೀಸರು ಸ್ಪಷ್ಟಪಡಿಸಿರುವಂತೆ ಮೃತ ಸುಖವಿಂದರ್ ಸಿಂಗ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಆತ ಫರೀದಾ ಕೋಟ್ ನ ಖಾಸಗಿ ಕಂಪನಿಯೊಂದರಲ್ಲಿ ಹಣಕಾಸು ನಿರ್ವಹಣೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಸುಖವಿಂದರ್ ಸಿಂಗ್ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ.












Click it and Unblock the Notifications