ಮೈಸೂರು : ಸಿಂಹಾಸನ ನೋಡುವ ಭಾಗ್ಯ ಪ್ರವಾಸಿಗರಿಗೆ ಸಿಕ್ಕಿಲ್ಲ
ಮೈಸೂರು, ನವೆಂಬರ್ 05 : ಮೈಸೂರು ಅರಮನೆಯ ರತ್ನಖಚಿತ ಸಿಂಹಾಸನಕ್ಕೆ ಹಾಕಿದ ಪರದೆ ತೆರವುಗೊಳಿಸಲು ಮುಂದಾದ ಅರಮನೆ ಆಡಳಿತ ಮಂಡಳಿ ನಿರ್ದೇಶಕಿ ಇಂದಿರಮ್ಮ ಅವರಿಗೆ ಪೊಲೀಸ್ ಆಯುಕ್ತರಾದ ಬಿ. ದಯಾನಂದ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರತಿವರ್ಷದ ನಾಡಹಬ್ಬ ಮೈಸೂರು ದಸರಾ ಬಳಿಕ ಒಂದು ತಿಂಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ಸಿಂಹಾಸನವನ್ನು ಇಡಲಾಗುತ್ತದೆ. ಆದರೆ, ಈ ಬಾರಿ ಜಿಲ್ಲಾಡಳಿತ ಮತ್ತು ರಾಣಿ ಪ್ರಮೋದಾದೇವಿ ಅವರ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಸಿಂಹಾಸನ ವೀಕ್ಷಿಸದಂತೆ ಪರದೆ ಹಾಕಲಾಗಿದೆ. [ಸೊಬಗಿನ ತಾಣವೇ ಮೈಸೂರು ಅರಮನೆ]

ನವೆಂಬರ್ 3ರಂದು ಇಂದಿರಮ್ಮ ಅವರು ಸಿಂಹಾಸನಕ್ಕೆ ಹಾಕಿದ್ದ ಪರದೆ ತೆಗೆಯಲು ಮುಂದಾಗಿದ್ದರು. ಇದಕ್ಕೆ ರಾಣಿ ಪ್ರಮೋದಾ ದೇವಿ ಅವರಿಂದ ಒಪ್ಪಿಗೆ ಪಡೆದಿರಲಿಲ್ಲ. ಆದ್ದರಿಂದ, ಪರದೆ ತೆಗೆಯಲು ಮುಂದಾದ ಇಂದಿರಮ್ಮ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು. [ಸಿಂಹಾಸನವೇರಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್]
ಸ್ಥಳಕ್ಕೆ ಆಗಮಿಸಿದ ಮೈಸೂರು ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಇಂದಿರಮ್ಮ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಸಿಂಹಾಸನಕ್ಕೆ ಹಾಕಿರುವ ಪರದೆ ಹಾಗೇ ಇದ್ದು, ಪ್ರವಾಸಿಗರಿಗೆ ನೋಡುವ ಭಾಗ್ಯ ಸಿಕ್ಕಿಲ್ಲ. [ಅಪಶಕುನದ ಚರ್ಚೆಗೆ ನಾಂದಿ ಹಾಡಿದ ಮೈಸೂರು ದಸರಾ]
ಪರದೆ ಹಾಕಿರುವುದು ಏಕೆ? : ದಸರಾ ಮುಗಿದ ಬಳಿಕ ಒಂದು ತಿಂಗಳ ಕಾಲ ಸಿಂಹಾಸನ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತದೆ. ಆದರೆ, ಈ ಬಾರಿ ಪರದೆ ಎಳೆಯಲಾಗಿದ್ದು, ವೀಕ್ಷಿಸಲು ಅವಕಾಶ ನೀಡಿಲ್ಲ.
ಮೈಸೂರು ಜಿಲ್ಲಾಡಳಿತ ಮತ್ತು ರಾಣಿ ಪ್ರಮೋದಾ ದೇವಿ ಅವರ ನಡುವಿನ ಮುಸುಕಿನ ಗುದ್ದಾಟದಿಂದ ಸಿಂಹಾಸನಕ್ಕೆ ಪರದೆ ಎಳೆಯಲಾಗಿದೆ. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಚಿನ್ನದ ಅಂಬಾರಿಗೆ ವಿಮೆ ಮಾಡಿಸಲಾಗುತ್ತದೆ. ಇಷ್ಟು ವರ್ಷ ವಿಮೆಯನ್ನು ರಾಜಮನೆತನದವರ ಹೆಸರಿಗೆ ಮಾಡಿಸಲಾಗುತ್ತಿತ್ತು.
ಆದರೆ, ಈ ಬಾರಿ ಜಿಲ್ಲಾಡಳಿತ ಹೆಸರಿಗೆ ಮಾಡಿಸಿಕೊಳ್ಳಲಾಗಿತ್ತು. ಇದರಿಂದ ಅಸಮಾಧಾನಗೊಂಡಿರುವ ರಾಣಿ ಪ್ರಮೋದಾದೇವಿ ಅವರು ಸಿಂಹಾಸನಕ್ಕೆ ಪರದೆ ಎಳೆಯಲು ಸೂಚನೆ ನೀಡಿದ್ದರು. ಇದನ್ನು ತೆರವುಗೊಳಿಸಲು ಮುಂದಾದವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.












Click it and Unblock the Notifications