ಮೈಸೂರಿನಲ್ಲಿ ನಕಲಿ ನೋಟು ಜಾಲ : ಇಬ್ಬರ ಬಂಧನ
ಮೈಸೂರು, ಜ. 2: ವೃದ್ಧ ರೈತರಿಗೆ ನಕಲಿ ನೋಟು ಕೊಟ್ಟು ವಂಚಿಸಲು ಯತ್ನಿಸಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಎಂ.ಜಿ. ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಗೆ ಬರುತ್ತಿದ್ದ ಓರ್ವ ವ್ಯಕ್ತಿ ವೃದ್ಧ ವ್ಯಾಪಾರಿಗಳ ಹತ್ತಿರ 50 ಹಾಗೂ 20 ರು. ಮೊತ್ತದ ತರಕಾರಿಗಳನ್ನು ಖರೀದಿಸುತ್ತಿದ್ದ. ಆದರೆ, ಅವರಿಗೆ 500 ರು. ಮುಖಬೆಲೆಯ ನೋಟು ನೀಡುತ್ತಿದ್ದ. ಇದನ್ನು ಅನುಮಾನಗೊಂಡ ವ್ಯಾಪಾರಸ್ಥರು ಆ ವ್ಯಕ್ತಿ ನೀಡಿದ ನೋಟುಗಳನ್ನು ಪರೀಕ್ಷಿಸಿದಾಗ ಅವು ನಕಲಿ ಎಂಬುದು ಗೊತ್ತಾಗಿದೆ.
ತಕ್ಷಣ ಆರೋಪಿಯನ್ನು ಹಿಡಿದು ನಜರ್ಬಾದ್ ಪೊಲೀಸರಿಗೊಪ್ಪಿಸಿದ್ದರು. ಆತನನ್ನು ವಿಚಾರಣೆಗೊಳಪಡಿಸಿದಾಗ ತನ್ನ ಸಹೋದರನ ಹೆಸರನ್ನೂ ಬಹಿರಂಗಪಡಿಸಿದ್ದಾನೆ. [ಬಾಂಗ್ಲಾ ವಲಸಿಗರಿಂದ 40 ಲಕ್ಷ ಮೌಲ್ಯದ ನಕಲಿ ನೋಟು ವಶ]

ನಾರಾಯಣ ಬಾರಿಕ್ ಹಾಗೂ ಸುದರ್ಶನ ಬಾರಿಕ್ ಬಂಧಿತ ಸಹೋದರರಾಗಿದ್ದು, ಒರಿಸ್ಸಾ ಮೂಲದವರು. ಮೈಸೂರಿನ ಕೆ.ಎಸ್.ಆರ್. ರಸ್ತೆಯಲ್ಲಿರುವ ಇಎಸ್ಐ ಕ್ವಾಟ್ರಸ್ನಲ್ಲಿ ವಾಸಿಸುತ್ತಿದ್ದರು. 500 ರು. ಮುಖ ಬೆಲೆಯ 153 ಖೋಟಾ ನೋಟುಗಳನ್ನು (76,500 ರು. ಮೊತ್ತ) ಹಾಗೂ ಅಸಲಿ ಹಣ 17,620 ರು.ಗಳನ್ನು ವಶಪಡಿಸಿಕೊಂಡಿರುತ್ತಾರೆ.
ಖೋಟಾ ನೋಟು ಕೊಟ್ಟವ ಮಂಗಲ್ : ಆಸ್ಪತ್ರೆಯೊಂದರ ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದಾಗ ಪಶ್ಚಿಮ ಬಂಗಾಳ ಮೂಲದ ಮಂಗಲ್ ಎಂಬಾತ ಈತನಿಗೆ ಪರಿಚಯವಾಗಿದ್ದ. ಆತನಿಗೆ ಬಂಧಿತರು 45 ಸಾವಿರ ರು. ಅಸಲಿ ಹಣ ನೀಡಿ 1 ಲಕ್ಷ ರು. ಬೆಲೆಯ ನಕಲಿ ನೋಟುಗಳನ್ನು ಪಡೆದಿದ್ದರು ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.
ನಕಲಿ ಹಣ ಚಲಾವಣೆಯಿಂದ ಬಂದ ಅಸಲಿ ಹಣವನ್ನು ಬ್ಯಾಂಕ್ನಲ್ಲಿ ಫಿಕ್ಸೆಡ್ ಡಿಪಾಸಿಟ್ ಇಟ್ಟಿದ್ದರು. ಈ ಹಣದ ಬಾಂಡ್ ಕೂಡ ಅಮಾನತುಪಡಿಸಿಕೊಳ್ಳಲಾಗಿದೆ.












Click it and Unblock the Notifications