ಬೀದಿ ಕಾಮಣ್ಣನಿಗೆ ಥಳಿಸಿ ಪ್ರಶಸ್ತಿ ಪಡೆದ ಚೈತ್ರಾ
ಮೈಸೂರು, ಡಿ. 3 : ಬಸ್ನಲ್ಲಿ ತೆರಳುತ್ತಿದ್ದಾಗ ಹೀಯಾಳಿಸಿದ್ದಕ್ಕಾಗಿ ಮೂವರು ಕಿಡಿಗೇಡಿಗಳಿಗೆ ಬೆಲ್ಟ್ನಲ್ಲಿ ಹೊಡೆದು ಹರ್ಯಾಣದ ಸಹೋದರಿಯರು ಭಾರೀ ಸುದ್ದಿ ಮಾಡಿದ್ದರು. ಮೈಸೂರಿನಲ್ಲಿ ತನ್ನನ್ನು ಚುಡಾಯಿಸಿದ ಕಾಮುಕನಿಗೆ ಥಳಿಸಿ, ಪೊಲೀಸರಿಗೆ ಒಪ್ಪಿಸಿ ಯುವತಿಯೊಬ್ಬಳು ಪೊಲೀಸರ ಪ್ರಶಂಸೆಗೆ ಪಾತ್ರರಾಗಿದ್ದಾಳೆ.
ಮೈಸೂರಿನ ರಾಜೀವ್ ನಗರದ ನಿವಾಸಿ ಮೊಹಮ್ಮದ್ ಸಮೀರ್ನನ್ನು (33) ಯುವತಿಗೆ ಚುಡಾಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಚುಡಾಯಿಸಿದವನಿಗೆ ಥಳಿಸಿದ ಯುವತಿಯ ಧೈರ್ಯವನ್ನು ಮೆಚ್ಚಿ ಮೈಸೂರು ನಗರ ಪೊಲೀಸ್ ಆಯುಕ್ತರು ಪ್ರಶಂಸನಾ ಪತ್ರ ನೀಡಿದ್ದಾರೆ.

ಘಟನೆ ವಿವರ ಇಲ್ಲಿದೆ : ಮೈಸೂರಿನ ಚಾಮುಂಡಿಪುರಂನ ಹೊಸಬಂಡಿಕೆರೆಯ ನಿವಾಸಿ ಚೈತ್ರಾ (25) ಅವರು ಗುಂಡ್ಲುಪೇಟೆಯ ಸ್ನೇಹಿತೆಯನ್ನು ಸೋಮವಾರ ರಾತ್ರಿ ಭೇಟಿ ಮಾಡಿದರು. ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಸ್ನೇಹಿತೆಯನ್ನು ಬಸ್ ಹತ್ತಿಸಿ, ಸಿಟಿ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದರು.
ಮಾರ್ಗದಲ್ಲಿ ಪಾನಿಪೂರಿ ತಿನ್ನಲು ತೆರಳಿದಾಗ ಯುವಕರಿಬ್ಬರು ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಚೈತ್ರಾ ಗಮನಿಸಿದ್ದಾರೆ. ಇದನ್ನು ಲೆಕ್ಕಿಸದ ಚೈತ್ರಾ ಹಣ ಪಡೆಯಲು ದೊಡ್ಡಗಡಿಯಾರದ ಬಳಿ ಇರುವ ಕಾರ್ಪೊರೇಷನ್ ಬ್ಯಾಂಕ್ ಎಟಿಎಂಗೆ ತೆರಳಿದ್ದಾರೆ. [ಹರ್ಯಾಣದಲ್ಲಿ ಕಾಮುಕರಿಗೆ ಗೂಸಾ ಕೊಟ್ಟ ಸಹೋದರಿಯರು]
ಹಣ ಪಡೆದು ಮರಳುತ್ತಿದ್ದಾಗ ಆರೋಪಿ ಸಮೀರ್ ಚೈತ್ರಾಳಿಗೆ ಚುಡಾಯಿಸಿದ್ದು, ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾನೆ. ಇದಕ್ಕೂ ತಲೆಕೆಡಿಸಿಕೊಳ್ಳದ ಚೈತ್ರಾ ಅವರು ಪುರಭವನದ ಆವರಣ ಪ್ರವೇಶಿಸಿದ್ದಾರೆ. ಆಗ ಸಮೀರ್ ಚೈತ್ರಾರ ಕೈ ಹಿಡಿದು ಎಳೆದಾಡಿದ್ದಾನೆ. ಇದರಿಂದ ಕೋಪಗೊಂಡ ಅವರು ಸಮೀರ್ ಕೆನ್ನೆಗೆ ಹೊಡೆದಿದ್ದಾರೆ, ಆತ ಅಲ್ಲಿಂದ ಪರಾರಿಯಾಗಿದ್ದಾನೆ.
ಸ್ವಲ್ಪ ಮುಂದೆ ತೆರಳಿದ ಬಳಿಕ ಪುನಃ ಚೈತ್ರಾಳನ್ನು ಅಡ್ಡ ಹಾಕಿದ ಸಮೀರ್ ಕೆನ್ನೆಗೆ ಹೊಡೆದಿದ್ದಕ್ಕೆ ಕಾರಣ ಕೇಳಿ ಗಲಾಟೆ ಮಾಡಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಚೈತ್ರಾ ತಕ್ಷಣ ಆತನ ಕೊರಳಿನ ಪಟ್ಟಿ ಹಿಡಿದು ಎಳೆದಾಡಿದ್ದಾರೆ. ಕೈಗೆ ಸಿಕ್ಕ ಕಬ್ಬಿಣದ ಪೈಪಿನಿಂದ ಸಮೀರ್ಗೆ ಥಳಿಸಿದ್ದಾರೆ. ಸಮೀರ್ ಜೊತೆಗಿದ್ದ ಯುವಕ ಇದನ್ನು ನೋಡಿ ಸ್ಥಳದಿಂದ ಓಡಿ ಹೋಗಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಮೀರ್ನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಚೈತ್ರಾ ಮತ್ತು ಸಮೀರ್ ನಡುವೆ ಸುಮಾರು 15 ನಿಮಿಷ ಈ ರಂಪಾಟ ನಡೆದರೂ ಸಾರ್ವಜನಿಕರು ಯುವತಿಯ ನೆರವಿಗೆ ಆಗಮಿಸಲಿಲ್ಲ. ಅಲ್ಲಿದ್ದ ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
1 ಸಾವಿರ ಬಹುಮಾನ : ಧೈರ್ಯದಿಂದ ಬೀದಿ ಕಾಮಣ್ಣನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಯುವತಿಯ ಕಾರ್ಯವನ್ನು ಮೆಚ್ಚಿರುವ ನಗರ ಪೊಲೀಸ್ ಆಯುಕ್ತರು ಪ್ರಶಂಸನಾ ಪತ್ರ, ರೂ. 1 ಸಾವಿರ ನಗದು ನೀಡಿ ಗೌರವಿಸಿದ್ದಾರೆ.











Click it and Unblock the Notifications