ಏಸುವಿನ ಜನ್ಮದಿನವನ್ನು ವೈಭವದಿಂದ ಬರಮಾಡಿಕೊಳ್ಳಲು ಸಜ್ಜಾದ ಮೈಸೂರಿಗರು
ಮೈಸೂರು, ಡಿಸೆಂಬರ್ 24 : ಸಾಂಸ್ಕೃತಿಕ ನಗರಿಯು ಚುಮುಚುಮು ಚಳಿಯ ನಡುವೆಯೇ ಕ್ರಿಸ್ಮಸ್ ಹಬ್ಬಕ್ಕೆ ಅಣಿಯಾಗಿದೆ. ಏಸುಕ್ರಿಸ್ತನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲು ನಗರದ ಕ್ರೈಸ್ತರು ತುದಿಗಾಲಲ್ಲಿ ನಿಂತಿದ್ದಾರೆ. ಇದಕ್ಕಾಗಿ ಹಲವು ದಿನಗಳಿಂದ ಸಿದ್ಧತೆ ನಡೆಸಿದ್ದಾರೆ.
ಹಬ್ಬದ ದಿನದಂದು ಎಲ್ಲ ಪ್ರಜೆಗಳೂ ಹೊಸಬಟ್ಟೆ ತೊಟ್ಟು, ಸಿಹಿ ವಿತರಣೆ ಮಾಡಿ ಸಂಭ್ರಮಿಸುತ್ತಿದ್ದಾರೆ. ಮೈಸೂರಿನಲ್ಲೂ ಹಬ್ಬವನ್ನು ಸಡಗರದಿಂದ ನಡೆಸುವ ಉದ್ದೇಶದಿಂದ ಧಾರ್ಮಿಕ ಆಚರಣೆಯನ್ನು ಯೋಜಿತವಾಗಿ ನಡೆಸಲಾಗುತ್ತಿದೆ. ಕ್ರಿಸ್ಮಸ್ ಈವ್ (ಹಬ್ಬದ ಹಿಂದಿನ ದಿನ) ಜಾಗರಣೆ ಇರಲಿದೆ. ಪ್ರಾರ್ಥನಾ ಮಂದಿರಗಳಲ್ಲಿ ದೇವರ ಸ್ಮರಣೆ, ಪ್ರಾರ್ಥನೆ ನಡೆಯಲಿದೆ.
ಸೇಂಟ್ ಫಿಲೊಮಿನಾ ಚರ್ಚ್ ಅನ್ನು ಕೇಂದ್ರವಾಗಿಟ್ಟುಕೊಂಡು ಎಲ್ಲ ಪ್ರಾರ್ಥನಾ ಮಂದಿರಗಳಲ್ಲಿ ಕ್ರಿಸ್ಮಸ್ ಧಾರ್ಮಿಕ ಆಚರಣೆಗಳು ಡಿ. 24ರ ರಾತ್ರಿ 11ಕ್ಕೆ ಆರಂಭವಾಗಲಿವೆ. ರಾತ್ರಿ 11ರಿಂದ 12ರ ನಡುವೆ ಪ್ರಾರ್ಥನೆ ಇರಲಿದೆ. 12ರ ನಂತರ ನಿರಂತರವಾಗಿ ವಿವಿಧ ಭಾಷೆಗಳಲ್ಲಿ ಪ್ರಾರ್ಥನೆಗಳು ಡಿ. 25ರ ಕೊನೆಯವರೆಗೂ ನಡೆಯಲಿದೆ.
ಸಾಮಾನ್ಯವಾಗಿ ಡಿಸೆಂಬರ್ ಮೊದಲ ವಾರದಿಂದಲೇ ಹಬ್ಬದ ತಯಾರಿ ಪ್ರಾರಂಭವಾಗುತ್ತದೆ. ಕ್ರೈಸ್ತರು ಇತರ ಹಬ್ಬಗಳನ್ನು ಆಚರಿಸುವರಾದರೂ, ಕ್ರಿಸ್ಮಸ್ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಹಬ್ಬ ಹತ್ತಿರವಾಗಿದೆ ಎನ್ನುವುದನ್ನು ಸೂಚಿಸಲು ಕ್ರೈಸ್ತರು ಮನೆಗಳ ಮುಂದೆ ನಕ್ಷತ್ರ ತೂಗು ಹಾಕುತ್ತಾರೆ.
ಚರ್ಚ್ ನ ಹಾಡುಗಾರರ ತಂಡ (ಕ್ಯಾರಲ್) ಕ್ರೈಸ್ತರ ಮನೆಗಳಿಗೆ ತೆರಳಿ ಏಸುವಿನ ಸಂದೇಶಗಳನ್ನು ಸಾರುವ ಹಾಡುಗಳನ್ನು ಪ್ರಸ್ತುತಪಡಿಸಿ ಹಬ್ಬದ ಸಂಭ್ರಮಕ್ಕೆ ಈಗಾಗಲೇ ಮುನ್ನುಡಿ ಬರೆದಿದ್ದಾರೆ. ಸಾಂತಾಕ್ಲಾಸ್ ಅಜ್ಜ ಈ ತಂಡದ ಜೊತೆಗೆ ತೆರಳಿ ಸಿಹಿ ಹಂಚುವುದು ಸಂಪ್ರದಾಯ.

ಗೋದಲಿ ನಿರ್ಮಿಸಿ ಅಲಂಕಾರ
ಮನೆಗಳಲ್ಲಿ ಏಸುವಿನ ಜನ್ಮದಿನ ಸ್ಮರಿಸುವ ಗೋದಲಿ ನಿರ್ಮಿಸಿ ಅಲಂಕರಿಸುವುದು ಕ್ರಿಸ್ಮಸ್ ಆಚರಣೆಯಲ್ಲಿ ಪ್ರಮುಖ ಆಕರ್ಷಣೆ. ಕುರಿಗಾಹಿಗಳಿಗೆ ಬಾಲ ಏಸುವಿನ ಮೊದಲ ದರ್ಶನವಾಯಿತು ಎಂಬ ಪ್ರತೀತಿ ಇದೆ. ಅದನ್ನು ಸ್ಮರಿಸುವಂತೆ ಪುಟ್ಟ ಗೋದಲಿಯೊಳಗೆ ಆಡು, ದನ-ಕರುಗಳ ಗೊಂಬೆಗಳನ್ನು ಜೋಡಿಸಿಡುತ್ತಾರೆ. ಕ್ರೈಸ್ತರ ಮನೆಗಳಲ್ಲಿ ಗೋದಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದೆ. ಹಬ್ಬದ ಕೇಂದ್ರ ಬಿಂದುವಾಗಿರುವ ಕ್ರಿಸ್ಮಸ್ ಟ್ರೀಗಳನ್ನೂ ಇಡಲಾಗಿದೆ. ಕೆಲವರು ಮನೆಯ ಮುಂಬಾಗಿಲಿಗೆ ಕ್ರಿಸ್ಮಸ್ ರೀತ್ ಅಳವಡಿಸಿದ್ದಾರೆ. ವೃತ್ತಾಕಾರದಲ್ಲಿರುವ ಈ ಹಸಿರಿನ ಗುಚ್ಛ ಪ್ರೀತಿಗೆ ಸಾವಿಲ್ಲ ಎಂಬ ಸಂದೇಶವನ್ನು ಸಾರುತ್ತದೆ ಮತ್ತು ಏಸುಕ್ರಿಸ್ತನು ನಮ್ಮ ಮೇಲೆ ಇಟ್ಟಿರುವ ಪ್ರೀತಿಗೆ ಕೊನೆಯಿಲ್ಲ ಎಂಬುದನ್ನು ಪ್ರತಿಬಿಂಬಿಸುತ್ತದೆ.

ಇದು ಪವಿತ್ರ ಹಾಗೂ ದೊಡ್ಡ ಹಬ್ಬ
ಲಷ್ಕರ್ ಮೊಹಲ್ಲಾದ ಐತಿಹಾಸಿಕ ಸೇಂಟ್ ಫಿಲೋಮಿನಾ ಚರ್ಚ್, ಆರ್.ಎಸ್.ನಾಯ್ಡು ನಗರದ ಇನ್ಫೆಂಟ್ ಜೇಸಸ್ ಚರ್ಚ್, ಯಾದವಗಿರಿಯ ಸೇಕ್ರೆಡ್ ಹಾರ್ಟ್ ಚರ್ಚ್, ಶ್ರೀರಾಂಪುರದ ಚರ್ಚ್ ಗಳು ಒಳಗೊಂಡಂತೆ ನಗರದ ಚರ್ಚ್ ಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. "ಏಸುಕ್ರಿಸ್ತ ಜನಿಸಿದ ದಿನವನ್ನೇ ಕ್ರಿಸ್ಮಸ್ ಹಬ್ಬವಾಗಿ ಆಚರಿಸುತ್ತೇವೆ. ನಮಗೆ ಇದು ಪವಿತ್ರ ಹಾಗೂ ದೊಡ್ಡ ಹಬ್ಬ. ಮನೆಯನ್ನು ಸ್ವಚ್ಛಗೊಳಿಸಿ ಅಲಂಕರಿಸಿದ್ದೇವೆ. ಅಂಗಳದಲ್ಲಿ ಪುಟ್ಟ ಗೋದಲಿ ನಿರ್ಮಿಸಿ, ಬಾಲ ಏಸುವಿನ ಪ್ರತಿಮೆಯನ್ನು ಇಡಲಾಗಿದೆ. ಏಸು ಹುಟ್ಟಿದ್ದಾಗ ಇದ್ದ ಸಂಭ್ರಮವನ್ನು ಬೊಂಬೆಗಳ ಮೂಲಕ ಅನಾವರಣಗೊಳಿಸಲಾಗಿದೆ" ಎಂದು ನಗರದ ನಿವಾಸಿ ರೀಟಾ ಜೋಸೆಫ್ ಕ್ರಿಸ್ಮಸ್ ಸಿದ್ಧತೆ ಬಗ್ಗೆ ವಿವರಿಸಿದರು.

ಶುಭಾಶಯ ಕೋರುವರು
ಕ್ರಿಸ್ಮಸ್ ಮುನ್ನಾದಿನ ಅಂದರೆ ಕ್ರಿಸ್ಮಸ್ ಈವ್ ನಂದು ಹಾಗೂ ಕ್ರಿಸ್ಮಸ್ ದಿನ ಎಲ್ಲಾ ಚರ್ಚುಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನೆರವೇರುತ್ತದೆ. ಡಿ.24ರ ಮಧ್ಯರಾತ್ರಿ 12ಗಂಟೆಯಿಂದ ಚರ್ಚ್ ನಲ್ಲಿ ಧಾರ್ಮಿಕ ಆಚರಣೆಗಳು ಆರಂಭವಾಗುತ್ತವೆ. ಈ ಸಂದರ್ಭದಲ್ಲಿ ಕ್ಯಾರಲ್ ಗೀತೆ ಮೊಳಗುತ್ತದೆ. ನಸುಕಿನವರೆಗೆ ವಿಶೇಷ ಪ್ರಾರ್ಥನೆ, ಬೈಬಲ್ ಪಾರಾಯಣ ನಡೆಯಲಿದೆ. ಡಿ.25ರಂದು ಬೆಳಿಗ್ಗೆಯೂ ಚರ್ಚ ಗಳಲ್ಲಿ ಪ್ರಾರ್ಥನೆ ನಡೆಯಲಿದೆ. ಆ ಬಳಿಕ ಕ್ರೈಸ್ತರು ತಮ್ಮ ಗೆಳೆಯರು, ನೆರೆಮನೆಯವರು, ಸಂಬಂಧಿಕರಿಗೆ ಹಬ್ಬದ ಶುಭಾಶಯ ಕೋರುವರು.

ಕ್ರಿಸ್ಮಸ್ ಖಾದ್ಯ, ಕೇಕ್
ಕ್ರಿಸ್ಮಸ್ ಗಾಗಿ ಕ್ರೈಸ್ತರು ಇಂಥದ್ದೇ ತಿಂಡಿ ತಯಾರಿಸುತ್ತಾರೆ ಎನ್ನುವಂತಿಲ್ಲ. ಕ್ರಿಸ್ಮಸ್ ಭೋಜನದಲ್ಲಿ ಒಳಗೊಳ್ಳುವ ಖಾದ್ಯಗಳು ಆಯಾ ಪ್ರದೇಶ ಮತ್ತು ಭಾಷೆಗೆ ತಕ್ಕಂತೆ ಭಿನ್ನವಾಗಿರುತ್ತದೆ. ಮಾಂಸಾಹಾರ ಮತ್ತು ವೈನ್ ಬಳಕೆ ಎಲ್ಲರ ಮನೆಗಳಲ್ಲೂ ಸಾಮಾನ್ಯ. ಕ್ರಿಸ್ಮಸ್ ಗೆಂದೇ ತಯಾರಾಗುವ ಕರಿದ ತಿಂಡಿಗಳು ಇರುತ್ತವೆ. ಕೇರಳ. ತಮಿಳುನಾಡು ಮತ್ತು ಇತರ ರಾಜ್ಯಗಳಿಂದ ಮೈಸೂರಿಗೆ ಬಂದು ನೆಲೆಸಿರುವ ಕ್ರೈಸ್ತರು ತಮ್ಮ ತಮ್ಮ ಊರಿನ ಸಾಂಪ್ರದಾಯಿಕ ಖಾದ್ಯಗಳನ್ನು ಸಿದ್ಧಪಡಿಸುವರು.
ಕ್ರಿಸ್ಮಸ್ ಹಬ್ಬ ವಿಶೇಷವಾಗಿ ಉಡುಗೊರೆಗಳಿಗೆ ಪ್ರಸಿದ್ಧ. ಉಡುಗೊರೆಗಳನ್ನು ಹೊತ್ತು ಬರುವ ಸಾಂತಾಕ್ಲಾಸ್ ಮಕ್ಕಳನ್ನು ರಂಜಿಸುತ್ತಾನೆ. ಇತ್ತೀಚಿನ ದಿನಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಭಕ್ತಿ ಭಾವಗಳ, ಸೌಹಾರ್ದತೆಯ, ಪರಸ್ಪರ ಬಾಂಧವ್ಯ ಬೆಸೆಯುವ ಹಬ್ಬವಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
-
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು












Click it and Unblock the Notifications