ರಾಮನಗರ ಮೈಸೂರು-ಬೆಂಗಳೂರು ಹೆದ್ದಾರಿ ಮುಳುಗಡೆ: ಪ್ರತಾಪ್ ಸಿಂಹ ಫೇಸ್ಬುಕ್ ಲೈವ್
ರಾಮನಗರದ ಮೈಸೂರು-ಬೆಂಗಳೂರು ಹೆದ್ದಾರಿಯ ಮುಳುಗಡೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಹೀಗಾಗಿ ಮೈಸೂರು ಸಂಸದ ಪ್ರತಾಪ್ ಸಿಂಹ ಫೇಸ್ಬುಕ್ ಲೈವ್ನಲ್ಲಿ ವಿವರಣೆ ನೀಡಿದ್ದಾರೆ.
ಸಂಸದನಾಗಿ ಕ್ಷೇತ್ರದಲ್ಲಿ ಟೈಮ್ ಫ್ರೇಮ್ ಹಾಕಿಕೊಂಡು ಕೆಲಸ ಮಾಡುತ್ತಿರುವವನು ನಾನು. ನನ್ನ ಕಾರ್ಯ ವ್ಯಾಪ್ತಿಯಲ್ಲಿ ಏನ್ ಮಾಡಬಹುದು ಮಾಡುತ್ತೇನೆ. ನಿಮಗೆ ಹೊಗಳುವ ವಿಚಾರ ಇದ್ದರೆ ಹೊಗಲಿ. ಕೆಟ್ಟದಾಗಿ ಬೈಯೋದು ಬೇಡ. ಹೊಸಲು ಹೊಸಲು ಮಾತನಾಡುವುದು ಬೇಡ. ನೀವು ಸಿದ್ದರಾಮಯ್ಯ ಅಭಿಮಾನಿಗಳು ಎಂದು ಹೇಳಿಕೊಂಡು ಹೀಗೆ ಹೊಲಸು ಮಾತು ಆಡುವುದರಿಂದ ಅವರಿಗೆ ಕೆಟ್ಟ ಹೆಸರು. ರಸ್ತೆಯಲ್ಲಿ ಏನೇ ಆದರೂ ನಾನು ಪರಿಶೀಲಿಸಿ ಕೆಲಸ ಮಾಡುತ್ತೇನೆ. ಯುವ ಪೀಳಿಗೆಗೆ ಉತ್ತಮ ಭವಿಷ್ಯ ರೂಪಿಸಿಕೊಡುಬೇಕೆಂದು ನಾನು ಕೆಲಸ ಮಾಡುತ್ತನೆ ನನ್ನ ಮೇಲೆ ವಿಶ್ವಾಸ ಇಡಿ ಎಂದು ಫೇಸ್ಬುಕ್ ಲೈವ್ನಲ್ಲಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸೋಮವಾರ ಹಲವು ಕಡೆ ಬೆಳ್ಳಂ ಬೆಳಗ್ಗೆ ಮಳೆ ಅಬ್ಬರಿಸಿದೆ. ಮುಂಜಾನೆಯಿಂದಲೇ ಮಳೆ ಸುರಿಯುತ್ತಿದ್ದು, ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕೆಲಸ ಕಾರ್ಯಗಳಿಗೆ ತೆರಳುವವರು ಹಾಗೂ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ರಾಮನಗರ ಮತ್ತು ಚನ್ನಪಟ್ಟಣದ ಭಾಗಗಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆ ಹಲವು ಕೆರೆಗಳು ಕೋಡಿಬಿದ್ದಿವೆ. ಚನ್ನಪಟ್ಟಣದ ಬಿವಿ ಹಳ್ಳಿ, ಸಿಂಗರಾಜಿಪುರ, ಕುಡಿ ನೀರು ಕೋಡಿ ಕೆರೆಗಳು ಕೋಡಿ ಬಿದ್ದಿದ್ದರೆ, ರಾಮನಗರದ ಬೊಳಪ್ಪನ ಹಳ್ಳಿ ಕೆರೆ ಹಾಗೂ ರಾಜಕಾಲುವೆ, ಚರಂಡಿ ತುಂಬಿ ನೀರು ರಸ್ತೆಗೆ ಹರಿದು ಬರುತ್ತಿದ್ದು, ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ವಾಹನಗಳು ತೇಲುತ್ತಿದ್ದು, ಜನಜೀವನ ಸಂಪೂರ್ಣ ಅಸ್ಯವ್ಯಸ್ತಗೊಂಡಿದೆ. ಹೀಗಾಗಿ ಜನ ರಸ್ತೆಯ ಅಸ್ತವ್ಯಸ್ಥತೆಯ ಬಗ್ಗೆ ಕಿಡಿ ಕಾರಿದ್ದಾರೆ. ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಧಾರಕಾರ ಮಳೆ ಹಿನ್ನಲೆ ಸರಕಾರಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಾಮನಗರ, ಚನ್ನಪಟ್ಟಣ, ಕನಕಪುರ ಸರಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ಆದೇಶ ನೀಡಿದ್ದಾರೆ. ಖಾಸಗಿ ಶಾಲೆಗಳಿಗೂ ಆಡಳಿತ ಮಂಡಳಿಗಳು ರಜೆ ಘೋಷಣೆ ಮಾಡಿವೆ. ಇಂದು ನಡೆಯ ಬೇಕಿದ್ದ ತರಗತಿಯನ್ನು ಶನಿವಾರ ಪೂರ್ಣ ದಿನ ನಡೆಸುವುದಾಗಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.